ರಾಂಚಿಯಲ್ಲಿರುವ ಆರ್ಎಸ್ಎಸ್ ಕಚೇರಿಯ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ದಾಳಿ ನಡೆಸಿದ್ದಾರೆ. ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದು, ಬಿಜೆಪಿ ಇದನ್ನು ದೊಡ್ಡ ಸಂಚು ಎಂದು ಕರೆದಿದೆ. ಸರ್ಕಾರವು ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದೆ.
ರಾಂಚಿ (ಜೂ.18): ಇಲ್ಲಿನ ಆರ್ಎಸ್ಎಸ್ ಕಚೇರಿ(RSS office) ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್(Petrol bomb) ಎಸೆದು ಸ್ಫೋಟಿಸುವ ಯತ್ನ ಮಾಡಿದ್ದಾರೆ. ಮಂಗಳವಾರ ನಡುರಾತ್ರಿ 12.30ಕ್ಕೆ ಇಬ್ಬರು ಆಗಂತುಕರು ಪೆಟ್ರೋಲ್ ಸ್ಫೋಟಕ ಎಸೆದು ಪರಾರಿಯಾಗಿದ್ದಾರೆ.
ದಾಳಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಜೆಎಂಎಂ-ಕಾಂಗ್ರೆಸ್ ಆಡಳಿತ(JMM-Congress govt)ವಿರುವ ರಾಜ್ಯದಲ್ಲಿನ ಕಾನೂನು ವ್ಯವಸ್ಥೆಯ ದುಃಸ್ಥಿತಿಯನ್ನು ಈ ಘಟನೆ ತೋರಿಸುತ್ತದೆ ಎಂದು ಕಿಡಿ ಕಾರಿದೆ.
ಇದರ ಹಿಂದೆ ದೊಡ್ಡ ಸಂಚಿದೆ:
ಘಟನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿದ್ದು, ‘ಇದು ದೊಡ್ಡ ಸಂಚಿನ ಭಾಗದಂತಿದೆ. ಕೂಲಂಕಷ ತನಿಖೆ ಮಾಡಿ, ಇದರ ಹಿಂದಿರುವವರು ಮತ್ತು ಅವರ ಉದ್ದೇಶವನ್ನು ಬಯಲು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಅದರ ಬೆನ್ನಲ್ಲೇ ದಾಳಿ ತನಿಖೆಗೆ ಸರ್ಕಾರ ವಿಶೇಷ ತಂಡ ರಚಿಸಿದೆ. ಮತ್ತೊಂದೆಡೆ ಎನ್ಐಎ ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.


