ಬೆಳಗ್ಗೆ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿರುವ ನಡುವೆ ಗ್ರಾಮಕ್ಕೆ ನುಗ್ಗಿದ ಹುಲಿ, ಕುದುರೆಯನ್ನೇ ಹೊತ್ತೊಯ್ದ ಘಟನೆ ನಡೆದಿದೆ. ಜನರು ಚೀರಾಡಿದರೂ ಹುಲಿ ದೈತ್ಯ ಕುದುರೆಯನ್ನೇ ಕಾಡಿಗೆ ಎಳೆದೊಯ್ದ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ.

ನೈನಿತಾಲ್ (ಆ.18) ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿರುವುದು ಹೊಸದೇನಲ್ಲ. ಬೆಂಗಳೂರು ಹೊರವಲ ಸೇರಿದಂತೆ ಹಲವೆಡೆ ಈ ಆತಂಕವಿದೆ. ದನ ಕರುಗಳ ಮೇಲೆ ದಾಳಿ, ನಾಯಿ ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ, ಮನುಷ್ಯರ ಮೇಲೆ ದಾಳಿ ನಡೆಸಿದ ಹಲವು ಘಟನೆಗಳು ವರದಿಯಾಗಿದೆ. ಇದೀಗ ಹಾಡಹಗಲೇ ಜನರು ತಮ್ಮ ಕೆಲಸ ಕಾರ್ಯದಲ್ಲಿ ತೊಡಿಗಿರುವಾಗಲೇ ಗ್ರಾಮಕ್ಕೆ ನುಗ್ಗಿದ ಹುಲಿ ಪ್ರವಾಸಿಗರ ಕರೆದೊಯ್ಯುವ ಕುದುರೆ ಮೇಲೆ ದಾಳಿ ಮಾಡಿದೆ. ಕುದುರೆಯನ್ನು ಹೊತ್ತೊಯ್ದು ಘಟನೆ ಉತ್ತರಖಂಡದ ನೈನಿತಾಲ್‌ನ ರಾಮನಗರದಲ್ಲಿ ನಡೆದಿದೆ. ಈ ಘಟನೆ ಗ್ರಾಮಸ್ಥರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮಧ್ಯಾಹ್ನ ಕುದುರೆ ಮೇಲೆ ದಾಳಿ ಮಾಡಿದ ಹುಲಿ

ನೈನಿತಾಲ್ ರಾಷ್ಟ್ರೀಯ ಹೆದ್ದಾರಿ 309ರ ಬಳಿ ಈ ಘಟನೆ ನಡೆದಿದೆ. ಮಧ್ಯಾಹ್ನ 1.30ರ ವೇಳೆಗೆ ಹುಲಿ ದಾಳಿ ನಡೆಸಿ ಕುದುರೆಯನ್ನು ಹೊತ್ತೊಯ್ದಿದೆ. ಗರಿಜಾ ಪ್ರವಾಸೋದ್ಯಮ ಪ್ರದೇಶದ ಹತ್ತಿರದಲ್ಲೇ ಈ ಘಟನೆ ನಡೆದಿದ್ದು, ಇದೀಗ ಸ್ಥಳೀಯರು ಹಾಗೂ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ. ರಾಮನಗರದಲ್ಲಿ ಹಲವರು ಕುದರೆ ಸಾಕುತ್ತಿದ್ದಾರೆ. ಗರಿಜಾ ಪ್ರವಾಸೋದ್ಯದಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಈ ಕುದರೆಗಳನ್ನು ಬಳಸುತ್ತಾರೆ. ಹೀಗಾಗಿ ಹಲವರ ಬಳಿ ಕುದರೆಗಳಿವೆ. ಮಧ್ಯಾಹ್ನ ಇದೇ ಕುದುರೆ ಟಾರ್ಗೆಟ್ ಮಾಡಿ ಕಾಡಿನಿಂದ ರಾಮನಗರ ಗ್ರಾಮಕ್ಕೆ ನುಗ್ಗಿದ ಹುಲಿ ದಾಳಿ ಮಾಡಿದೆ.

ಹೆದ್ದಾರಿ ದಾಟಿ ಬಂದ ಹುಲಿ ನೇರವಾಗಿ ಕುದುರೆ ಮೇಲೆ ದಾಳಿ ಮಾಡಿದೆ. ಕುದುರೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ದೈತ್ಯ ಕುದುರೆಯನ್ನು ಒಂದೇ ದಾಳಿಯಲ್ಲಿ ಕೆಳಕ್ಕುರುಳಿಸಿದೆ. ಕುದುರೆ ಶತಪ್ರಯತ್ನ ಮಾಡಿದರೂ ಹುಲಿ ತನ್ನ ಹಿಡಿತ ಸಡಿಲ ಮಾಡಲಿಲ್ಲ. ಕುದುರೆಯನ್ನು ಸಲೀಸಾಗಿ ಕಾಡಿಗೆ ಎಳೆದೊಯ್ದಿದೆ. ಹುಲಿ ದಾಳಿ ಮಾಡುತ್ತಿದ್ದಂತೆ ಸ್ಥಳೀಯರು ಕೂಗಾಟಿದ್ದಾರೆ. ಹುಲಿಯನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಇತ್ತ ಮಹಿಳೆಯರು, ಮಕ್ಕಳು ಭಯದಿಂದ ಚೀರಾಡಿದ್ದಾರೆ.

ಕತ್ತು ಹಿಡಿದು ಕಾಡಿನೊಳಕ್ಕೆ ಎಳೆದೊಯ್ದ ಹುಲಿ

ಹುಲಿ ತನ್ನ ಬಿಗಿ ಹಿಡಿತದಲ್ಲೇ ಕುದುರೆಯನ್ನು ಕಾಡಿನ ಪೊದೆಯೊಳಕ್ಕೆ ಎಳೆದು ತಿಂದಿದೆ. ಹುಲಿ ದಾಳಿ ಮಾಡುತ್ತಿದ್ದಂತೆ ಸ್ಥಳೀಯರು ತಮ್ಮ ಮೊಬೈಲ್ ಮೂಲಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹಲವು ಬಾರಿ ಹಗಲಿನಲ್ಲೇ ಹುಲಿ ಕಾಣಿಸಿಕೊಂಡಿದೆ. ಈ ಕುರಿತು ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗೆ ದೂರು ನೀಡಿದ್ದಾರೆ. ಇದೀಗ ಹಾಡಹಗಲೇ ಹುಲಿ ಕುದರೆ ಮೇಲೆ ದಾಳಿ ಮಾಡಿದೆ. ಇದರಿಂದ ಗ್ರಾಮಸ್ಥರು,ಪ್ರವಾಸಿಗರು ಆತಂಕ ಹೆಚ್ಚಾಗಿದೆ. ಹುಲಿ ಭರ್ಜರಿ ಬೇಟೆಯಾಡಿರುವ ಕಾರಣ ಮತ್ತೆ ಮತ್ತೆ ದಾಳಿ ಮಾಡುವ ಸಾಧ್ಯತೆ ಇದೆ. ಇದರಿಂದ ಮನುಷ್ಯರ ಮೇಲೂ ದಾಳಿಯಾಗುವ ಸಾಧ್ಯತೆಯನ್ನು ಸ್ಥಳೀಯರು ಹೇಳಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹುಲಿ ದಾಳಿಯಿಂದ ಗರಿಜಾ ಪ್ರವಾಸೋದ್ಯಮದ ಮೇಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಸಭೆ ಸೇರಿ ಈ ಕುರಿತ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.