ಭಾರತೀಯ ನೌಕಾಪಡೆಯು ಪಾಕಿಸ್ತಾನದ ಪ್ರಮುಖ ನೌಕಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಕರಾಚಿ ಮತ್ತು ಒರ್ಮಾರಾ ಬಂದರುಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ

ನವದೆಹಲಿ/ಕರಾಚಿ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ಹಾಗೂ ಸೇನೆ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ನೌಕಾ ಪಡೆಯು ಈಗ ಕಾರ್ಯಾಚರಣೆಗೆ ಇಳಿದಿದೆ. ಅರಬ್ಬಿ ಸಮದ್ರದಲ್ಲಿ ನೆಲೆಗೊಂಡಿರುವ ಭಾರತದ ನೌಕಾಪಡೆಯ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್, ಮೊದಲ ಬಾರಿ ಪಾಕಿಸ್ತಾನದ ಪ್ರಮುಖ ನೌಕಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಪಾಕಿಸ್ತಾನದ ಪ್ರಮುಖ ಕರಾಚಿ ಬಂದರು ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ. 

ರಕ್ಷಣಾ ಮೂಲಗಳ ಪ್ರಕಾರ, ಐಎನ್‌ಎಸ್ ವಿಕ್ರಾಂತ್ ಪಾಕಿಸ್ತಾನದ ಕರಾಚಿ ಮತ್ತು ಒರ್ಮಾರಾ ಬಂದರುಗಳ ಮೇಲೆ ಹಲವು ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಿಂದಾಗಿ ಎರಡೂ ಸ್ಥಳಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನಗರದಾದ್ಯಂತ ಹೊಗೆ ಆವರಿಸಿ ಕೊಂಡಿದೆ. ಹಾನಿ ಪ್ರಮಾಣ ಎಷ್ಟೆಂದು ದೃಢಪಟ್ಟಿಲ್ಲ. ಇದರಿಂದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಭೀತಿ ಹರಡಿದೆ. ಇದರಿಂದ ತಪ್ಪಿಸಿಕೊಳ್ಳಲು ಒಳನಾಡಿನ ಪ್ರದೇಶಗಳತ್ತ ಜನ ಪಲಾಯನ ಮಾಡುತ್ತಿರುವುದು ಕಂಡು ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ಕರಾಚಿ ಮತ್ತು ಓರ್ಮಾರಾ ಎರಡೂ ಪಾಕಿಸ್ತಾನದ ಪ್ರಮುಖ ನೌಕಾ ನೆಲೆಗಳಿಗೆ ನೆಲೆಯಾಗಿದೆ. ಈ ಘಟಕಗಳು ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಉನ್ನತ ಮಿಲಿಟರಿ ಪ್ರಧಾನ ಕಚೇರಿಗಳನ್ನು ಹೊಂದಿವೆ. ಈ ನೌಕಾ ನೆಲೆಗಳ ಮೇಲಿನ ವಿನಾಶದ ಪ್ರಮಾಣವು ಪಾಕಿಸ್ತಾನದ ಕಡಲ ರಕ್ಷಣಾ ಸಾಮರ್ಥ್ಯಗಳನ್ನು ತೀವ್ರವಾಗಿ ದುರ್ಬಲಗೊಳಿಸಬಹುದಾಗಿದೆ.