ಕೊರೋನಾ ಸಮಯದಲ್ಲಿ ಡಿಎಂಕೆ ಅಧಿಕಾರದಲ್ಲಿದ್ದರೆ ಸಿಎಂ ಸ್ಟಾಲಿನ್ ಸಾಯುತ್ತಿದ್ದರು ಎಂದು ಎಡಪ್ಪಾಡಿ ಪಳನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸ್ಟಾಲಿನ್, ‘ಜನರಿಗಾಗಿ ಸಾಯಲು ಹೆದರುವುದಿಲ್ಲ’ ಎಂದು ಹೇಳಿದ್ದಾರೆ.
ಚೆನ್ನೈ/ವಿಲ್ಲುಪುರಂ (ಏ.10): ‘ಕೋರೋನಾ ಮಹಾಮಾರಿ ಇದ್ದಾಗ ರಾಜ್ಯದಲ್ಲಿ ಡಿಎಂಕೆ ಸರ್ಕಾರ ಇದ್ದಿದ್ದರೆ, ಸಿಎಂ ಸ್ಟಾಲಿನ್ ಸಾಯುತ್ತಿದ್ದರು’ ಎಂದು ಅಣ್ಣಾಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸ್ಟಾಲಿನ್ ಕೂಡ ತಿರುಗೇಟು ನೀಡಿದ್ದು, ‘ಜನರಿಗಾಗಿ ಸಾಯಲು ಹೆದರುವುದಿಲ್ಲ’ ಎಂದಿದ್ದಾರೆ.
DMK ಅಧಿಕಾರದಲ್ಲಿದ್ದಾಗ ಬರ, ಪ್ರವಾಹ
ಚೆನ್ನೈನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ಪಳನಿಸ್ವಾಮಿ, ‘ಡಿಎಂಕೆ ಅಧಿಕಾರದಲ್ಲಿದ್ದಾಗ ಬರ, ಪ್ರವಾಹ, ಚಂಡಮಾರುತ ಅಥವಾ ಕೋರೋನಾ ಮಹಾಮಾರಿ ಬಂದಿರಲಿಲ್ಲ. ಒಂದೊಮ್ಮೆ ಬಂದಿದ್ದರೆ ಸ್ಟಾಲಿನ್ ಬದುಕಿರುತ್ತಿರಲಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ
ಸ್ಟಾಲಿನ್ ತಿರುಗೇಟು:
ಇದಕ್ಕೆ ಪ್ರತ್ಯುತ್ತರ ನೀಡಿರುವ ಸ್ಟಾಲಿನ್, ‘ಸೋಲಿನ ಭಯದಲ್ಲಿ ಪಳನಿಸ್ವಾಮಿ ಪ್ರತಿದಿನ ಅಜಾಗರೂಕರಾಗಿ ಮಾತಾಡುತ್ತಿದ್ದಾರೆ ಹಾಗೂ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಜನರ ರಕ್ಷಣೆಗೆ ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇನೆ. ಸಾವಿಗೂ ಹೆದರುವುದಿಲ್ಲ’ ಎಂದು ವಿಲ್ಲುಪಿರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ



