ಉತ್ತರ ಪ್ರದೇಶದ ಮುಜಫರ್ನಗರದಲ್ಲಿ, ವಿಧವೆಯೊಬ್ಬರು ತಮ್ಮ 14 ವರ್ಷದ ವಿಕಲಚೇತನ ಮಗಳ ಚಿಕಿತ್ಸೆಗೆ ಹಣ ಪಾವತಿಸದ ಕಾರಣಕ್ಕೆ ವೈದ್ಯರೇ ಆಕೆಯ ಕಾಲು ಮುರಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ಈ ಪ್ರಕರಣದ ತನಿಖೆಗೆ ಮುಖ್ಯ ವೈದ್ಯಾಧಿಕಾರಿಗಳು ಸಮಿತಿ ರಚಿಸಿದ್ದಾರೆ.
ಮುಜಫರ್ನಗರ: ಉತ್ತರ ಪ್ರದೇಶ ಮುಜಫರ್ನಗರದಲ್ಲಿ, ರೇಷ್ಮಾ ಎನ್ನುವ ವಿಧವೆಯೊಬ್ಬರು ಜಿಲ್ಲಾ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಿವುಡ, ಮೂಕ ಮತ್ತು ಮಾನಸಿಕ ಅಸ್ವಸ್ಥೆಯಾಗಿರುವ ತನ್ನ 14 ವರ್ಷದ ಮಗಳ ಚಿಕಿತ್ಸೆಯ ಸಮಯದಲ್ಲಿ, ವೈದ್ಯರು ಹಣಕ್ಕಾಗಿ ಬೇಡಿಕೆ ಇಟ್ಟರು ಮತ್ತು ಪೂರ್ಣ ಮೊತ್ತವನ್ನು ಪಾವತಿಸದಿದ್ದಾಗ, ಹುಡುಗಿಯ ಕಾಲನ್ನೇ ಮುರಿದಿದ್ದಾರೆ. ಆಕೆಯ ಕಾಲಿನ ಮೂಳೆ ಮುರಿದಿದೆ ಎಂದು ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಕೋರಿ ಮಹಿಳೆ ತನ್ನ ಮಗಳೊಂದಿಗೆ ಪೊಲೀಸರ ಬಳಿ ಬಂದಿದ್ದು, ನ್ಯಾಯಕ್ಕಾಗಿ ಕೋರಿಕೊಂಡಿದ್ದಾರೆ. ಈ ಮಧ್ಯೆ, ಮುಖ್ಯ ವೈದ್ಯಾಧಿಕಾರಿ (ಸಿಎಮ್ಒ) ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಉಚಿತ ಚಿಕಿತ್ಸೆಗೆ ನಕಾರ
ರೇಷ್ಮಾ ಪ್ರಕಾರ, ಅವರ ಮಗಳ ಬಲಗಾಲಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆಗೆ ವೈದ್ಯರು 25 ಸಾವಿರ ರೂಪಾಯಿ ಬೇಡಿಕೆ ಇಟ್ಟರು, ಆದರೆ ಆರ್ಥಿಕ ಸಂಕಷ್ಟದಿಂದಾಗಿ, ಎಂಟು ಸಾವಿರ ರೂಪಾಯಿ ಮಾತ್ರ ವ್ಯವಸ್ಥೆ ಮಾಡಲಾಯಿತು. ನಂತರ ಮುಂದಿನ ಭೇಟಿಗಾಗಿ ತನ್ನ ಮಗಳೊಂದಿಗೆ ಆಸ್ಪತ್ರೆಗೆ ಹಿಂತಿರುಗಿದಾಗ, ವೈದ್ಯರು ಉಳಿದ ಮೊತ್ತವನ್ನು ಕೇಳಿದರು. ಆಗ ಮಹಿಳೆ ತಮ್ಮ ಬಳಿ ಹಣವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿದ್ದಾರೆ. ನಂತರ ಮುಖ್ಯ ವೈದ್ಯಾಧಿಕಾರಿ (CMO) ಆಸ್ಪತ್ರೆಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು. ಇದರ ಹೊರತಾಗಿಯೂ ಆಸ್ಪತ್ರೆ ಸಿಬ್ಬಂದಿ ತಮ್ಮಿಂದ 8 ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ ಮತ್ತು ಉಳಿದ ಮೊತ್ತವನ್ನು ನಂತರ ಪಾವತಿಸಲು ಕೇಳಿದ್ದಾರೆ ಎಂದು ರೇಷ್ಮಾ ಹೇಳಿದ್ದಾರೆ.
ನಂತರ, ವೈದ್ಯರು ತಮ್ಮ ಮಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆದರು ಎಂದು ರೇಷ್ಮಾ ಆರೋಪಿಸಿದ್ದಾರೆ. ತಪಾಸಣೆಯ ಸಮಯದಲ್ಲಿ, ವೈದ್ಯರು ಬಾಲಕಿಯ ಶಸ್ತ್ರಚಿಕಿತ್ಸೆಯ ಕಾಲನ್ನು ಬಲವಂತವಾಗಿ ಬಗ್ಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವಳು ನೋವಿನಿಂದ ಕಿರುಚಿದಳು ಮತ್ತು ಕಾಲಿನಿಂದ ಸೌಂಡ್ ಬಂದಿತು. ಘಟನೆಯ ನಂತರ ತನ್ನ ಮಗಳ ಸ್ಥಿತಿ ಹದಗೆಟ್ಟಿತು ಎಂದು ಹೇಳಿಕೊಂಡಿದ್ದಾರೆ. ಬಾಲಕಿಯ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಹೇಳಿದರೂ ಆಸ್ಪತ್ರೆ ಅಧಿಕಾರಿಗಳು ತಮ್ಮ ದೂರುಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ರೇಷ್ಮಾ ಆರೋಪಿಸಿದ್ದಾರೆ.
ಸೂಕ್ತ ಕ್ರಮ
ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯ ವೈದ್ಯಾಧಿಕಾರಿ ಸುನಿಲ್ ತಿವಾರಿ, ಎಲ್ಲಾ ಕಡೆಯವರನ್ನು ಕೇಳದೆ ಯಾವುದೇ ತೀರ್ಮಾನಕ್ಕೆ ಬರುವುದು ಅಕಾಲಿಕ ಎಂದು ಹೇಳಿದರು. "ವಿಷಯವನ್ನು ಸರಿಯಾಗಿ ತನಿಖೆ ಮಾಡದೆ ಏನನ್ನೂ ಹೇಳುವುದು ಸೂಕ್ತವಲ್ಲ" ಎಂದು ಅವರು ಹೇಳಿದ್ದು, ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ತನಿಖೆಯ ಸಮಯದಲ್ಲಿ ನಿರ್ಲಕ್ಷ್ಯ ಅಥವಾ ತಪ್ಪು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿವಾರಿ ಭರವಸೆ ನೀಡಿದರು.


