ಹಿರಿಯ ಐಎಎಸ್ ಅಧಿಕಾರಿಯೊಬ್ಬರ ವಿವಾಹಿತ ಪುತ್ರಿಯೊಬ್ಬರು ರೇಬೀಸ್ಗೆ ಬಲಿಯಾದ ದುರಂತ ಘಟನೆ ಕೆಲ ದಿನಗಳ ಹಿಂದೆ ಗುಜರಾತ್ನಲ್ಲಿ ನಡೆದಿದ್ದು, ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜೊತೆಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.
ಐಎಎಸ್ ಅಧಿಕಾರಿ ಪುತ್ರಿ ರೇಬೀಸ್ಗೆ ಬಲಿ:
ಗುಜರಾತ್: ಹಿರಿಯ ಐಎಎಸ್ ಅಧಿಕಾರಿಯೊಬ್ಬರ ವಿವಾಹಿತ ಪುತ್ರಿಯೊಬ್ಬರು ರೇಬೀಸ್ಗೆ ಬಲಿಯಾದ ದುರಂತ ಘಟನೆ ಕೆಲ ದಿನಗಳ ಹಿಂದೆ ಗುಜರಾತ್ನಲ್ಲಿ ನಡೆದಿದ್ದು, ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜೊತೆಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಹಿಂದೆ ಗುಜರಾತ್ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿ ನಿವೃತ್ತರಾಗಿದ್ದ ಐಎಎಸ್ ಅಧಿಕಾರಿಯೊಬ್ಬರ ಪುತ್ರಿಯಾಗಿದ್ದ ಮಹಿಳೆ ಶಿಕ್ಷಣ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದ್ದರು. ಗುಜರಾತ್ನ ಗಾಂಧಿನಗರದಲ್ಲಿ ಪ್ರಸಿದ್ಧ ಶಾಲೆಯೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು.
ಇವರಿಗೆ 4 ತಿಂಗಳ ಹಿಂದೆ ಬೀಗಲ್ ತಳಿಯ ಸಾಕುನಾಯಿ ಕಚ್ಚಿತ್ತು. ಈ ನಾಯಿಗೆ ಚುಚ್ಚು ಮದ್ದು ಕೂಡ ಹಾಕಿಸಲಾಗಿತ್ತು. ಆದರೆ ಡಿಸೆಂಬರ್ 30ರಂದು ಅವರಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜನವರಿ 17ರಂದು ಅವರು ಸಾವನ್ನಪ್ಪಿದ್ದಾರೆ. ಸಾವಿಗೂ 4 ತಿಂಗಳು ಮೊದಲು ಶಾಲೆಯ ಸಿಬ್ಬಂದಿಯೊಬ್ಬರು ಈ ಬೀಗಲ್ ತಳಿಯ ಶ್ವಾನವನ್ನು ಶಾಲೆಗೆ ಕರೆತಂದಿದ್ದಾಗ ಘಟನೆ ನಡೆದಿತ್ತು. ತಮ್ಮ ಮನೆಯಲ್ಲೂ ಶ್ವಾನ ಇರುವುದರಿಂದ ಇದನ್ನು ಸಾಮಾನ್ಯ ಕಚ್ಚುವಿಕೆ ಎಂದು ಭಾವಿಸಿ ಅವರು ಅದನ್ನು ನಿರ್ಲಕ್ಷಿಸಿದ್ದರು. ಲಸಿಕೆಯನ್ನು ಕೂಡ ಅವರು ತೆಗೆದುಕೊಂಡಿರಲಿಲ್ಲ.
ಇದನ್ನೂ ಓದಿ: ರಾಷ್ಟ್ರಪತಿಗಳ ಅಂಗರಕ್ಷಕ ಪಡೆ ಪಿಬಿಜಿಗೆ ಸೇರಲು ಭಾರತದ 3 ಜಾತಿಗಳ ಸೈನಿಕರಿಗೆ ಮಾತ್ರ ಅವಕಾಶ: ಇದಕ್ಕೇನು ಕಾರಣ?
ಆದರೆ 2025ರ ಅಕ್ಟೋಬರ್ 17ರಂದು ಬೀಗಲ್ ನಾಯಿ ರೇಬೀಸ್ನಿಂದ ಸತ್ತು ಹೋಗಿತ್ತು. ಘಟನೆಯ ನಂತರ, ಶಾಲಾ ಆಡಳಿತ ಮಂಡಳಿಯು ಪೋಷಕರು ಮತ್ತು ಸಿಬ್ಬಂದಿಗೆ ಸಂದೇಶದ ಮೂಲಕ ಎಚ್ಚರಿಕೆ ನೀಡಿ, ನಾಯಿಯೊಂದಿಗೆ ಸಂಪರ್ಕಕ್ಕೆ ಬಂದ ಯಾರಾದರೂ ತಕ್ಷಣ ರೇಬೀಸ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಿತು. ಶಾಲೆಯು ರೇಬೀಸ್ ಲಸಿಕೆಗಳನ್ನು ಸ್ಥಳದಲ್ಲಿ ಲಭ್ಯವಾಗುವಂತೆ ಮಾಡಿತು. ಆದರೆ ಡಿಸೆಂಬರ್ ಅಂತ್ಯದ ವೇಳೆಗೆ ಈ ಮಹಿಳೆಯ ಆರೋಗ್ಯ ತೀವ್ರ ಹದಗೆಟ್ಟಿದ್ದು, ಕೂಡಲೇ ಅವರನ್ನು ಅಹ್ಮದಾಬಾದ್ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆಯ 19ನೇ ದಿನ ಅವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರಷ್ಯಾದಿಂದ ಭಾರತ ಆಮದು ಮಾಡುತ್ತಿರುವ ಕಚ್ಚಾತೈಲದ ಪ್ರಮಾಣದಲ್ಲಿ ತೀವ್ರ ಇಳಿಕೆ
ರೇಬೀಸ್ನಿಂದ ಸಾವನ್ನಪ್ಪಿದ್ದರಿಂದ ಕಟ್ಟುನಿಟ್ಟಾದ ಸುರಕ್ಷತಾ ಶಿಷ್ಟಾಚಾರಗಳ ಅಡಿಯಲ್ಲಿ ಅವರ ದೇಹವನ್ನು ಗಾಂಧಿನಗರ ಸೆಕ್ಟರ್ -30 ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ರೇಬೀಸ್ನಿಂದ ಸಾವು ಸಂಭವಿಸಿದ್ದರಿಂದ, ದೇಹವನ್ನು ಎಚ್ಚರಿಕೆಯಿಂದ ಪ್ಯಾಕ್ ಮಾಡಿ ವಿದ್ಯುತ್ ಚಿತಾಗಾರದಲ್ಲಿ ದಹನ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಸುಮಾರು 50 ವರ್ಷ ಆಗಿತ್ತು.
ರೇಬೀಸ್ ಬರುವುದು ಹೇಗೆ?
ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಹೈಡ್ರೋಫೋಬಿಯಾ ಎಂದೂ ಕರೆಯಲ್ಪಡುವ ರೇಬೀಸ್ ಒಂದು ತೀವ್ರವಾದ ವೈರಲ್ ಸೋಂಕು. ಇದು ಯಾವಾಗಲೂ ಮಾರಕವಾಗಿರುತ್ತದೆ. ಇದನ್ನು ಸಾಂಕ್ರಾಮಿಕ ರೋಗ ಎಂದು ವರ್ಗೀಕರಿಸಲಾಗಿದೆ ಮತ್ತು ಸೋಂಕಿತ ಪ್ರಾಣಿಯ ಕಡಿತದಿಂದ ಉಂಟಾಗುತ್ತದೆ, ವೈರಸ್ ಲಾಲಾರಸದ ಮೂಲಕ ಹರಡುತ್ತದೆ. ನಾಯಿಗಳು, ಹಸುಗಳು, ಕುದುರೆಗಳು, ಮೇಕೆಗಳು ಮತ್ತು ಮೊಲಗಳಂತಹ ಕೃಷಿ ಪ್ರಾಣಿಗಳು ಹಾಗೂ ನರಿಗಳು, ಬಾವಲಿಗಳು, ನರಿಗಳು ಮತ್ತು ಕತ್ತೆಕಿರುಬಗಳು ಸೇರಿದಂತೆ ಕಾಡು ಪ್ರಾಣಿಗಳು ರೇಬೀಸ್ ಸೋಂಕಿಗೆ ಒಳಗಾಗಬಹುದು. ಭಾರತದಲ್ಲಿ, ಸಾಕುಪ್ರಾಣಿಗಳಿಗೆ ಸಾಮಾನ್ಯವಾಗಿ ಲಸಿಕೆ ಹಾಕಲಾಗಿದ್ದರೂ, ಬೀದಿ ನಾಯಿಗಳು ಸೋಂಕಿನ ಸಾಮಾನ್ಯ ಮೂಲಗಳಾಗಿವೆ. ಆದರೆ ಇಲ್ಲಿ ವ್ಯಾಕ್ಸಿನ್ ಹಾಕಿಸಿದ ಸಾಕುನಾಯಿಯಿಂದ ಸೋಂಕು ತಗುಲಿದೆ.
ಹೀಗಾಗಿ ಸಾಕುನಾಯಿಯೇ ಆಗಿರಲಿ ಬೀದಿ ನಾಯಿಯೇ ಆಗಿರಲಿ, ಅಥವಾ ನಿಮ್ಮ ಮನೆಯ ಸಾಕುಬೆಕ್ಕೇ ಆಗಿರಲಿ, ಅದರಿಂದ ಕಡಿತಕ್ಕೊಳಗಾದರೆ ನಿರ್ಲಕ್ಷ್ಯ ಬೇಡ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ರೇಬೀಸ್ ವಿರೋಧಿ ಚುಚ್ಚುಮದ್ದು ಪಡೆಯಿರಿ.

