ಜಮ್ಮುವಿನಲ್ಲಿ ಮಹೀಂದ್ರ ಥಾರ್ ಚಾಲಕನೊಬ್ಬ ಸ್ಕೂಟರ್ ಸವಾರ ವೃದ್ಧನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ವೃದ್ಧರು ಬೀಳುತ್ತಿದ್ದಂತೆ ಮತ್ತೆ ರಿವರ್ಸ್‌ನಲ್ಲಿ ಬಂದು ಡಿಕ್ಕಿ ಹೊಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. 

ಜಮ್ಮು: ಮಹೀಂದ್ರ ಥಾರ್ ಗಾಡಿಯೊಂದು ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಮೊದಲಿಗೆ ಮುಂದೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಅವರಿಗೆ ಡಿಕ್ಕಿ ಹೊಡೆದ ಥಾರ್ ಗಾಡಿ ಅವರು ಬಿದ್ದಲ್ಲಿಂದ ಮೇಲೇಳುತ್ತಿದ್ದಂತೆ ಮತ್ತೆ ರಿವರ್ಸ್‌ ಬಂದು ಡಿಕ್ಕಿ ಹೊಡೆದಿದೆ. ಮೆಲ್ನೋಟಕ್ಕೆ ಇದು ಕೊಲೆಯತ್ನ ಪ್ರಕರಣದಂತೆ ಕಾಣುತ್ತಿದೆ. ಕೆಳೆಗೆ ಬಿದ್ದ ಸ್ಕೂಟರ್ ಸವಾರ ಸಹಾಯ ಮಾಡುವಂತೆ ಕೈ ನೀಡಿದರು ಆತ ಅವರನ್ನು ಮೇಲೆತ್ತದೇ ಸೀದಾ ಬಂದು ತನ್ನ ಗಾಡಿಯ ಚಾಲಕನ ಸೀಟಿನಲ್ಲಿ ಕುಳಿತು ಹೊರಟು ಹೋಗಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಮ್ಮುಕಾಶ್ಮೀರದ ಗಾಂಧಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಥಾರ್ ಗಾಡಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಕೂಟರ್ ಸವಾರನ ಕುಟುಂಬ ಆಗ್ರಹಿಸಿದೆ. ಘಟನೆಯಲ್ಲಿ ಸ್ಕೂಟರ್ ಸವಾರ ವೃದ್ಧನಿಗೆ ಗಂಭೀರ ಗಾಯವಾಗಿದೆ.

ಮಹೀಂದ್ರಾ ಥಾರ್ ಗಾಡಿ ಚಲಾಯಿಸುತ್ತಿದ್ದ ವ್ಯಕ್ತಿ ನಮ್ಮ ತಂದೆಗೆ ಎರಡು ಬಾರಿ ಗುದ್ದಿದ್ದಾನೆ. ಅವರ ವಿರುದ್ಧ ಕೊಲೆ ಆರೋಪ ಹೊರಿಸಬೇಕು. ನಮ್ಮ ತಂದೆ ಐಸಿಯುನಲ್ಲಿದ್ದಾರೆ. ಅವರ ತಲೆಬುರುಡೆಯಲ್ಲಿ ಮೂಳೆ ಮುರಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ. ಜಮ್ಮುವಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳು ಕೇಳಿ ಬರುತ್ತಿರಲಿಲ್ಲ. ದೆಹಲಿ ಮತ್ತು ಇತರ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆ ವೃದ್ಧ ವ್ಯಕ್ತಿಯ ಪುತ್ರ ಹೇಳಿದ್ದಾರೆ.

ಘಟನೆಯಲ್ಲಿ ಭಾಗಿಯಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿಯ ತಂದೆ ಮತ್ತು ಕಾರು ಮಾಲೀಕನನ್ನು ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಕೊಲೆಯತ್ನ ಆರೋಪ ಹೊರಿಸಲಾಗಿದೆ.

ಹೀಗೆ ಥಾರ್ ಗಾಡಿಯನ್ನು ರಿವರ್ಸ್ ತಂದು ಕೊಲೆಗೆ ಯತ್ನಿಸಿದ ಯುವಕ 20ರ ಹರೆಯದ ಯುವಕನಾಗಿದ್ದು, ಘಟನೆಯ ಬಳಿಕ ಆತ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

27.07.2025 ರಂದು ಗಾಂಧಿ ನಗರದ ಗ್ರೀನ್ ಬೆಲ್ಟ್ ಪಾರ್ಕ್ ಬಳಿ ಥಾರ್-ಸ್ಕೂಟಿ ಡಿಕ್ಕಿಯ ನಂತರ ಥಾರ್ ಗಾಡಿಯ ಚಾಲಕ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಉದ್ದೇಶದಿಂದ ಥಾರ್‌ ಗಾಡಿಯನ್ನು ರಿವರ್ಸ್ ತೆಗೆದು ಮತ್ತೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಬಹಿರಂಗಪಡಿಸಿದ ನಂತರ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109ರಡಿ ಜಮ್ಮು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಥಾರ್ ಗಾಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಮಾಲೀಕರನ್ನು ಬಂಧಿಸಲಾಗಿದೆ ಮತ್ತು ಪರಾರಿಯಾಗಿರುವ ಚಾಲಕನನ್ನು ಹಿಡಿಯಲು ಹುಡುಕಾಟ ನಡೆಯುತ್ತಿದೆ. ತನಿಖೆ ಮುಂದುವರೆದಿದೆ ಎಂದು ಜಮ್ಮು ಜಿಲ್ಲಾ ಪೊಲೀಸರು ಟ್ವೀಟ್ ಮಾಡಿದ್ದಾರೆ.

View post on Instagram