Asianet Suvarna News Asianet Suvarna News

Digambar Kamat: ದೇವರ ಸೂಚನೆ ಬಳಿಕ ‘ಕೈ’ ಬಿಟ್ಟು ‘ಕಮಲ’ ಹಿಡಿದೆ ಎಂದ ಗೋವಾ ನಾಯಕ

ದೇವರ ಸೂಚನೆ ಬಳಿಕ ನಾನು ಬಿಜೆಪಿಗೆ ಸೇರಿದೆ. ದೇವರು ನನ್ನ ನಿರ್ಧಾರದೊಂದಿಗೆ ಇರುವೆ ಎಂದು ದಿಗಂಬರ್ ಕಾಮತ್‌ ಹೇಳಿದ್ದರು. ಈ ಹಿನ್ನೆಲೆ ಪಕ್ಷ ಸೇರಿದ್ದೇನೆ ಎಂದೂ ಅವರು ಹೇಳಿದರು.  

god asked to join to bjp told former congress leader digambar kamat goa ash
Author
First Published Sep 15, 2022, 1:53 PM IST

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ತಮ್ಮ ಪಕ್ಷ ತೊರೆದು ಆಡಳಿತಾರೂಢ ಬಿಜೆಪಿ ಸೇರುವ ಬಗ್ಗೆ ದೇವರಿಂದ ಸೂಚನೆ ಸಿಕ್ಕಿದೆ ಎಂದು ಬುಧವಾರ ಹೇಳಿದ್ದಾರೆ. "ನೀವು ನಿರ್ಧಾರ (Decision) ತೆಗೆದುಕೊಳ್ಳಿ, ನಾನು ನಿಮ್ಮೊಂದಿಗಿದ್ದೇನೆ ಎಂದು ದೇವರು ನನಗೆ ಹೇಳಿದ್ದಾರೆ. ಹಾಗಾಗಿ ನಾನು ಬಿಜೆಪಿ ಸೇರಲು ನಿರ್ಧರಿಸಿದೆ" ಎಂದು ಗೋವಾದ ಹಿರಿಯ ರಾಜಕಾರಣಿ ಹೇಳಿದ್ದಾರೆ. ತಾವು ಎಂದಿಗೂ ಕಾಂಗ್ರೆಸ್ ತೊರೆಯುವುದಿಲ್ಲ ಮತ್ತು ಪಕ್ಷಕ್ಕೆ ನಿಷ್ಠರಾಗಿರುತ್ತೇನೆ ಎಂದು ದೇವರ ಮುಂದೆ ಪ್ರಮಾಣ (Oath) ಮಾಡಿದ್ದ ಪ್ರಶ್ನೆಗೆ ದಿಗಂಬರ್‌ ಕಾಮತ್ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ, ತಮ್ಮ ಪ್ರಸ್ತುತ ನಿರ್ಧಾರವನ್ನು ದೇವರು ಬೆಂಬಲಿಸಿದ್ದಾರೆ ಎಂದು ದಿಗಂಬರ್‌ ಕಾಮತ್ ಹೇಳಿದರು. "ನನಗೆ ದೇವರಲ್ಲಿ ನಂಬಿಕೆಯಿದೆ. ನಾನು ಮತ್ತೆ ದೇವರ ಮುಂದೆ ಹೋಗಿ ಸಂಪೂರ್ಣ ಪರಿಸ್ಥಿತಿಯನ್ನು ಹಂಚಿಕೊಂಡೆ ಮತ್ತು ಅವರ ಮಾರ್ಗದರ್ಶನವನ್ನು (Guidance) ಕೇಳಿದೆ. ನಂತರ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳುವ ನಿರ್ಧಾರ ತೆಗೆದುಕೊಳ್ಳುವಂತೆ ಅವರು ನನಗೆ ಹೇಳಿದರು" ಎಂದು ದಿಗಂಬರ್‌ ಕಾಮತ್ ಗೋವಾ ರಾಜಧಾನಿ ಪಣಜಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಫೆಬ್ರವರಿ 2022 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತಾವು ಚುನಾಯಿತರಾದ ನಂತರ ಪಕ್ಷವನ್ನು ತೊರೆಯುವುದಿಲ್ಲ ಮತ್ತು ಯಾವಾಗಲೂ ನಿಷ್ಠರಾಗಿರುತ್ತೇವೆ ಎಂದು ದೇವಾಲಯಗಳು, ಚರ್ಚ್‌ಗಳು ಮತ್ತು ದರ್ಗಾಗಳ ಮುಂದೆ ಪ್ರಮಾಣ ಮಾಡಿದ್ದರು. ಅಭ್ಯರ್ಥಿಗಳಿಗೆ ಈ ಪ್ರಮಾಣ ವಚನ ನೀಡಲು ದಿಗಂಬರ್‌ ಕಾಮತ್ ಮುಂದಾಳತ್ವ ವಹಿಸಿದ್ದರು. ಈ ಹಿನ್ನೆಲೆ, ಈಗ 8 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದ ಬಳಿಕ ಅವರ ವಿಡಿಯೋ ವೈರಲ್ ಆಗಿದೆ. ಇದಕ್ಕೂ ಮೊದಲು ಜುಲೈ 10, 2019 ರಂದು, ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ, ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಕವಲೇಕರ್ ಜೊತೆಗೆ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಸೇರಿದ್ದರು. ಹಾಗಾಗಿ ಆ ವಿಷಯವನ್ನು ದುರ್ಬಲಗೊಳಿಸಲು ಮತ್ತು ತಮ್ಮ ಶಾಸಕರು ಪಕ್ಷಾಂತರ ಮಾಡುವುದಿಲ್ಲ ಎಂದು ಜನರಿಗೆ ಭರವಸೆ ನೀಡಲು, ಕಾಂಗ್ರೆಸ್ ಚುನಾವಣೆಗೆ ಮುನ್ನ `ಪ್ರಮಾಣ-ವಚನ' ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

Goa Congress MLAs join BJP: ಮೋದಿ ಕೈ ಬಲ ಪಡಿಸಲು ಬಿಜೆಪಿ ಸೇರಿದ್ದೇವೆ ಎಂದ ಕಾಂಗ್ರೆಸ್‌ ಶಾಸಕರು

"ನಾನು ದೇವಸ್ಥಾನಕ್ಕೆ ಹಿಂತಿರುಗಿದೆ ಮತ್ತು ನಾನು ಏನು ಮಾಡಬೇಕೆಂದು ನಾನು ದೇವರು ಮತ್ತು ದೇವತೆಯನ್ನು ಕೇಳಿದೆ. ನಮ್ಮಲ್ಲಿ ‘ಪ್ರಸಾದ’ ತೆಗೆದುಕೊಳ್ಳುವ ವ್ಯವಸ್ಥೆ ಇದೆ. ದೇವರು ಚಿಂತಿಸಬೇಡ, ಮುಂದೆ ಹೋಗು ಎಂದು ಹೇಳಿದರು" ಎಂದು ದಿಗಂಬರ್‌ ಕಾಮತ್ ಹೇಳಿದರು. ಪುರಾತನ ಕಾಲದಿಂದಲೂ ಗೋವಾದಲ್ಲಿ 'ಪ್ರಸಾದ'ವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಅರ್ಚಕರ ಮೂಲಕ ವಿವಿಧ ಸಮಸ್ಯೆಗಳ ಬಗ್ಗೆ ಮತ್ತು ಅವುಗಳ ಪರಿಹಾರಗಳ ಬಗ್ಗೆ ದೇವರು ಮತ್ತು ದೇವತೆಗಳನ್ನು ಕೇಳಲಾಗುತ್ತದೆ. ಇದು ಗೋವಾದ ಅನೇಕ ದೇವಾಲಯಗಳಲ್ಲಿ ಆಚರಣೆಯಲ್ಲಿದೆ. ಭಕ್ತರು ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ಈ `ಪ್ರಸಾದ’ವನ್ನು ತೆಗೆದುಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನೂ ಹುಡುಕುತ್ತಾರೆ.

ದಿಗಂಬರ್ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ರಾಜೇಶ್ ಫಲ್ದೇಸಾಯಿ, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫರ್ನಾಂಡಿಸ್ ಸೇರಿ 8 ಶಾಸಕರು ಕಾಂಗ್ರೆಸ್‌ನಿಂದ ಬಿಜೆಪಿಗೆ ಬದಲಾಗಿದ್ದಾರೆ. ಇದಕ್ಕೂ ಮುನ್ನ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿಯೊಂದಿಗೆ ವಿಲೀನಕ್ಕೆ ನಿರ್ಣಯ ಅಂಗೀಕರಿಸಲಾಗಿತ್ತು. ಸದನದಲ್ಲಿ ಬಿಜೆಪಿ ಬಲ 28ಕ್ಕೆ ಏರಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಮತ್ತೊಂದು ಶಾಕಿಂಗ್‌ ಸುದ್ದಿ: ಮಾಜಿ ಸಿಎಂ ಸೇರಿ Goa Congressನ 8 ಶಾಸಕರು ಬಿಜೆಪಿ ಸೇರ್ಪಡೆ?

Follow Us:
Download App:
  • android
  • ios