1 ದಿನ ಜೊತೆಗಿರಲು ಬಂದ ಇಬ್ಬರು ಮಕ್ಕಳು, ಪತ್ನಿಯನ್ನೇ ಹತ್ಯೆಗೈದ ಅರಣ್ಯಾಧಿಕಾರಿ, ಕಾರಣ ಕುಚ್ ಕುಚ್ , ಟ್ರಾನ್ಸ್‌ಫರ್ ಆಗಿರುವ ಪತಿಯೊಂದಿಗೆ ಕಳಯಲು ಬಂದ ಪತ್ನಿ ಮಕ್ಕಳು ಬಾರದ ಲೋಕಕ್ಕೆ ಕಳುಹಿಸಲಾಗಿದೆ. ಇದರ ಹಿಂದೆ ಪತಿಯ ಕುತಂತ್ರ ಊಹಿಸಲು ಅಸಾಧ್ಯ.

ಭಾವನಗರ(ನ.21) ಅರಣ್ಯಾಧಿಕಾರಿಯಾಗಿ ಕೆಲಸ, ಪತ್ನಿ ಹಾಗೂ ಇಬ್ಬರು ಮಕ್ಕಳ ಸುಂದರ ಸಂಸಾರ. ಮಗಳಿಗೆ 13 ವರ್ಷ, ಮಗನಿಗೆ 9 ವರ್ಷ. ಸೂರತ್‌ನಲ್ಲಿ ಮನೆ, ಕುಟುಂಬಸ್ಥರು ಎಲ್ಲರೂ ಅಕ್ಕ ಪಕ್ಕವೇ ನಿವಾಸ. ಇತ್ತ ಅರಣ್ಯಾಧಿಕಾರಿಗೂ ಸೂರತ್‌ನಲ್ಲೇ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಬಳಿಕ ಭಾವನಗರಕ್ಕೆ ವರ್ಗಾವಣೆಗೊಂಡಿದ್ದರು. ಮಕ್ಕಳ ಶಾಲೆಗೆ ಸರ್ಕಾರಿ ರಜೆ, ಶನಿವಾರ ಹಾಗೂ ಭಾನುವಾರ ರಜೆ ಕಾರಣ ತಂದೆ ಬಳಿ ಹೋಗಿ ಸಮಯ ಕಳಯಲು ಮಕ್ಕಳು ಬಯಸಿದ್ದಾರೆ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಪತಿಯ ಬಳಿ ಬಂದಿದ್ದಾರೆ. ಆದರೆ ಅರಣ್ಯಾಧಿಕಾರಿ ಪತ್ನಿ ಹಾಗೂ ಮಕ್ಕಳು ಬರುತ್ತಿದ್ದಾರೆ ಎಂದು ಹೇಳಿದಾಗಲೇ ಮನಸ್ಸಿನಲ್ಲಿ ಪ್ಲಾನ್ ರೆಡಿಯಾಗಿತ್ತು. ಇಬ್ಬರು ಮಕ್ಕಳು ಹಾಗೂ ಪತ್ನಿ ಬಂದ ಬೆನ್ನಲ್ಲೇ ಹತ್ಯೆಯಾಗಿದ್ದಾರೆ. ಇದಕ್ಕೆ ಕಾರಣ ಪತಿಯ ಅಕ್ರಮ ಸಂಬಂಧ. ಈ ಘಟನೆ ನಡೆದಿರುವುದು ಗುಜರಾತ್‌ನ ಬಾವನಗರದಲ್ಲಿ.

ಜೈಲು ಸೇರಿದ ಫಾರೆಸ್ಟ್ ಆಫೀಸರ್

ಅಸಿಸ್ಟೆಂಟ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ACF) ಹುದ್ದೆಯಲ್ಲಿದ್ದ 39 ವರ್ಷದ ಶೈಲೇಶ್ ಕಂಭಾಲ ಇದೀಗ ಜೈಲು ಸೇರಿದ್ದಾನೆ. 2022ರಲ್ಲಿ ಸತೀಶ್ ಕಂಭಾಲ ಕರ್ತವ್ಯದಲ್ಲಿದ್ದ ವಲಯಕ್ಕೆ ಮಹಿಳಾ ಅರಣ್ಯಾಧಿಕಾರಿಯ ಎಂಟ್ರಿಯಾಗಿದೆ. ಇವರ ಗೆಳೆತನ ಪ್ರೀತಿಯಾಗಿ, ಪ್ರೀತಿ ಅಕ್ರಮ ಸಂಬಂಧವಾಗಿ ಬೆಳೆದಿದೆ. ಕಳೆದ ನಾಲ್ಕು ವರ್ಷದಿಂದ ಇವರ ಅಕ್ರಮ ಸಂಬಂಧ ಗಟ್ಟಿಯಾಗಿ ಮುಂದುವರಿದಿತ್ತು. ಆಕೆಯನ್ನೇ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ. ಇತ್ತ ಮುದ್ದಾದ ಮಕ್ಕಳು, ಪತ್ನಿ ಬೇಡವಾಗಿತ್ತು. ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರಿಗೆ ಯಾವುದೇ ರೀತಿ ಅನುಮಾನ ಬರದಂತೆ ಈ ಸತೀಶ್ ಕಂಭಾಲ ನೋಡಿಕೊಂಡಿದ್ದ. ಸಾಲದು ಎಂಬಂತೆ ಭಾವನಗರಕ್ಕೆ ಟ್ರಾನ್ಸ್‌ಫರ್ ಮಾಡಿಕೊಂಡು ಕುಟುಂಬದಿಂದ ದೂರವಿದ್ದ.

ವಾರಾಂತ್ಯದಲ್ಲಿ ಮನೆಗೆ ಬರುತ್ತಿದ್ದ ಸತೀಶ್

ಭಾವನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸತೀಶ್ ಕಂಭಾಲ ವಾರಾಂತ್ಯದಲ್ಲಿ ಅಥವಾ ಎರಡು ವಾರಕ್ಕೊಮ್ಮೆ ಮನೆಗೆ ಆಗಮಿಸುತ್ತಿದ್ದ. ಒಂದೆರಡು ದಿನ ಕುಟುಂಬದ ಜೊತಗಿದ್ದು ಮರಳುತ್ತಿದ್ದ. ಹಚ್ಚಿನ ಕೆಲಸ, ಅರಣ್ಯದಲ್ಲಿನ ಕೆಲ ಪ್ರಮುಖ ಜವಾಬ್ದಾರಿಗಳ ಕಾರಣ ನೀಡಿ ಒಂದೆರೆಡು ತಿಂಗಳಾದರೂ ಮನೆಗೆ ಬರುತ್ತಿರಲಿಲ್ಲ. ಇದೇ ವೇಳೆ ಇತ್ತ ಮಹಿಳಾ ಅರಣ್ಯಾಧಿಕಾರಿ ಜೊತೆ ಅಕ್ರಮ ಸಂಬಂಧ ಗಾಢವಾಗಿತ್ತು.

ತಂದೆ ಜೊತೆಗಿರಲು ಆಗ್ರಹಿಸಿದ ಮಕ್ಕಳು

ಪ್ರತಿ ವಾರ ಬರುತ್ತಿದ್ದ ಅಪ್ಪ, ತಿಂಗಳಾದರೂ, ಎರಡು ತಿಂಗಳಾದರೂ ಬರದ ಕಾರಣ ವಾರಾಂತ್ಯದಲ್ಲಿ ಒಂದೆರೆಡು ರಜೆ ಹಾಕಿ ತಂದೆ ಬಳಿ ಹೋಗಲು ಮಕ್ಕಳು ಬಯಸಿದ್ದರು. ಮಕ್ಕಳ ಬಯಕೆಗೆ ತಾಯಿ ಕೂಡ ಒಕೆ ಎಂದಿದ್ದಾರೆ. ಈ ಕುರಿತು ಫೋನ್ ಮಾಡಿ ಪತಿ ಸತೀಶ್ ಕಂಭಾಲಗೆ ಪತ್ನಿ 40 ವರ್ಷದ ನಯನ ಮಾಹಿತಿ ನೀಡಿದ್ದಳು. ಈ ಮಾತು ಕೇಳಿಸಿಕೊಂಡಿದ್ದೇ ಸತೀಶ್ ಕಂಭಾಲ ಆತಂಕ ಹೆಚ್ಚಾಯಿತು. ತನ್ನ ಅಕ್ರಮ ಸಂಬಂಧ ಪತ್ನಿಗೆ ಗೊತ್ತಾಗಿರುವ ಸಾಧ್ಯತೆ ಇದೆ ಎಂದುಕೊಂಡಿದ್ದಾನೆ. ಒಂದು ವೇಳೆ ಗೊತ್ತಿಲ್ಲದಿದ್ದರೂ ಇದೀಗ ಪತ್ನಿ ಮಕ್ಕಳು ಮನಗೆ ಆಗಮಿಸಿದರೆ, ಮಹಿಳಾ ಅರಣ್ಯಾಧಿಕಾರಿಗೆ ಏನು ಹೇಳಲಿ ಎಂದು ಆತಂಕಗೊಂಡಿದ್ದಾನೆ.

ಸೂರತ್‌ನಿಂದ ಭಾವನಗರ ಬಂದಿಳಿದ ಬೆನ್ನಲ್ಲೇ ಪತ್ನಿ ಮಕ್ಕಳು ನಾಪತ್ತೆ

ಸೂರತ್‌ನಿಂದ ಭಾವನಗರಕ್ಕೆ ಬಂದಿಳಿದ ಪತ್ನಿ ಹಾಗೂ ಮಕ್ಕಳು ನಾಪತ್ತೆಯಾಗಿದ್ದಾರೆ. ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಆದರೆ ಅರಣ್ಯಾಧಿಕಾರಿ ಸತೀಶ್ ಕಂಭಾಲ ಮಾತ್ರ ನಿರಾಳನಾಗಿದ್ದ. ಕಾರಣ ಮನೆಗೆ ಕರೆದುಕೊಂಡು ಬಂದ ಪತ್ನಿ ಮಕ್ಕಳನ್ನು ಸತೀಶ್ ಕಂಭಾಲ ಹತ್ಯೆ ಮಾಡಿದ್ದ. 13 ವರ್ಷದ ಮಗಳು, 9 ವರ್ಷದ ಮಗ ಹಾಗೂ ಪತ್ನಿಯನ್ನು ಹತ್ಯೆ ಮಾಡಿದ್ದ. ಇದಕ್ಕಾಗಿ ವಾರದ ಮೊದಲೇ ಪ್ಲಾನ್ ಮಾಡಿದ್ದ. ಆದರೆ ಪೊಲೀಸರ ಬಳಿ ಪತ್ನಿ ಹಾಗೂ ಮಕ್ಕಳು ತಾನು ಕರ್ತವ್ಯದಲ್ಲಿದ್ದಾಗ, ಆಟೋದಲ್ಲಿ ಹೋಗುವುದನ್ನು ತನ್ನ ಭದ್ರತಾ ಸಿಬ್ಬಂದಿ ನೋಡಿದ್ದಾರೆ ಎಂದು ಸುಳ್ಳು ಹೇಳಿದ್ದ. ವಿಚಾರಣೆ ವೇಳೆ ಭದ್ರತಾ ಸಿಬ್ಬಂದಿ ತಾನು ನೋಡಿಲ್ಲ ಎಂದಿದ್ದಾರೆ. ಹೀಗಾಗಿ ಅನುಮಾನಗೊಂಡ ಪೊಲೀಸರು ಸತೀಶ್ ಕಂಭಾಲ ವಶಕ್ಕೆ ಪಡೆದು ವಿಚಾರಣ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಿರಿಯ ಫಾರೆಸ್ಟ್ ಸಿಬ್ಬಂದಿ ಬಳಿಕ ತನ್ನ ಮನೆಯ ಹಿಂಭಾಗ ಕಸದ ಎರಡು ಗುಂಡಿ ಮಾಡಲು ಸೂಚಿಸಿದ್ದ. ದೊಡ್ಡ ಗುಂಡಿ ಮಾಡಿ ಕಾಂಪೋಸ್ಟ್ ಗೊಬ್ಬರ ಮಾಡಬೇಕು ಎಂದೆಲ್ಲಾ ಪುಂಗಿ ಬಿಟ್ಟಿದ್ದ. ಹೀಗಾಗಿ ಪತ್ನಿ ಹಾಗೂ ಮಕ್ಕಳು ಬರುವ ಮೊದಲೇ ದೊಡ್ಡ ಎರಡು ಗುಂಡಿ ರೆಡಿ ಮಾಡಿದ್ದ. ಬಳಿಕ ಮೂವರನ್ನು ಹತ್ಯೆ ಮಾಡಿ ಗುಂಡಿಯಲ್ಲಿ ಹಾಕಿ ಮುಚ್ಚಿದ್ದ. ಭಾರಿ ಪ್ರಮಾಣದಲ್ಲಿ ಮಣ್ಣು ಹಾಕಬೇಕಿದ್ದ ಕಾರಣ ತೆಗೆದ ಗುಂಡಿಯಲ್ಲಿ ವನ್ಯ ಪ್ರಾಣಿಯೊಂದು ಬಿದ್ದು ಸತ್ತಿದೆ. ಹೀಗಾಗಿ ಸದ್ಯ ಗುಂಡಿ ಮುಚ್ಚಬೇಕು ಜೆಸಿಬಿ ತರುವಂತೆ ಕಿರಿಯ ಫಾರೆಸ್ಟ್ ಸಿಬ್ಬಂದಿಗೆ ಸೂಚಿದ್ದಾನೆ. ಇದರಂತೆ ಸಿಬ್ಬಂದಿಗಳು ಗುಂಡಿ ಮುಚ್ಚಿದ್ದಾರೆ. ವಿಚಾರಣೆ ವೇಳೆ ಎಲ್ಲಾ ಕೃತ್ಯ ಬಾಯಿಬಿಟ್ಟಿದ್ದಾನೆ. ಪತಿಯೊಂದಿಗೆ ಒಂದೆರೆಡು ದಿನ ಇರಲು ಹಾಗೂ ಮಕ್ಕಳ ಬಯಕೆಯಂತೆ ಕುಟುಂಬವಾಗಿ ಒಂದಷ್ಟು ಸಮಯ ಕಳೆಯಲು ಬಂದ ಅಮಾಯಕ ಮೂರು ಮಂದಿಯನ್ನು ಅರಣ್ಯಾಧಿಕಾರಿ ಬಾರದ ಲೋಕಕ್ಕೆ ಕಳುಹಿಸಿ ಬಿಟ್ಟಿದ್ದಾನೆ.