Bike taxi legalization in India: ಪೆಟ್ರೋಲ್ ಬೈಕ್ ಟ್ಯಾಕ್ಸಿಗಳನ್ನು ತಿರಸ್ಕರಿಸಿದ್ದ ಸಾರಿಗೆ ಇಲಾಖೆ, ಇದೀಗ ದಿನಕ್ಕೆ 5 ರೂ. ಸಂಗ್ರಹಿಸುವ ಮೂಲಕ ಅವುಗಳನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ. ಈ ಹೊಸ ಪ್ರಸ್ತಾವನೆಯು ಸರ್ಕಾರದ ಇವಿ ನೀತಿಗೆ ಸವಾಲಾಗಿದ್ದು, ಚಾಲಕರ ಸುರಕ್ಷತೆಗಾಗಿ ಕಠಿಣ ನಿಯಮಗಳನ್ನು ಸಹ ಒಳಗೊಂಡಿದೆ. ಇದು ಜಾರಿ ಗೊಂಡಿರುವುದು ಎಲ್ಲಿ ಗೊತ್ತಾ?
ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುವ ಪರವಾಗಿ ಪೆಟ್ರೋಲ್ ಚಾಲಿತ ಬೈಕ್ ಟ್ಯಾಕ್ಸಿಗಳನ್ನು ದೃಢವಾಗಿ ತಿರಸ್ಕರಿಸಿದ್ದ ಸಾರಿಗೆ ಇಲಾಖೆ, ಆಶ್ಚರ್ಯಕರವಾದ ಬದಲಾವಣೆ ಜಾರಿಗೊಳಿಸಿದೆ. ಹೊಸ ಪ್ರಸ್ತಾವನೆ ಈಗ ಹಿಂಬಾಗಿಲಿನ ಮೂಲಕ ಪೆಟ್ರೋಲ್ ಬೈಕ್ ಟ್ಯಾಕ್ಸಿಗಳನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿದೆ. ಪ್ರತಿ ಚಾಲಕರಿಂದ ದಿನಕ್ಕೆ 5 ರೂ. ಆದಾಯವನ್ನು ಸಂಗ್ರಹಿಸಲು ಯೋಜಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ತನ್ನದೇ ಆದ ಇವಿ ನೀತಿ ಕಡಿಮೆ ಮಾಡುತ್ತದೆ. ಈ ಯೋಜನೆ ಸಮಗ್ರ ಮಾಹಿತಿ ಇಲ್ಲಿದೆ.
ಸವಾಲಾಗುತ್ತಾ ಇವಿಗಳಿಗೆ?
ಮಹಾರಾಷ್ಟ್ರ ಸರ್ಕಾರದ ಬೈಕ್ ಟ್ಯಾಕ್ಸಿ ಪ್ರಸ್ತಾವನೆಯು, ಪೆಟ್ರೋಲ್ ವಾಹನಗಳಿಗೆ ಅನುಮತಿ ನಿರಾಕರಿಸಿದ ಕೆಲವೇ ತಿಂಗಳುಗಳಲ್ಲಿ ಇವಿ (ವಿದ್ಯುತ್ ವಾಹನ) ನೀತಿಯನ್ನು ಹಳಿತಪ್ಪಿಸುವ ಆತಂಕ ಮೂಡಿಸಿದೆ. ಆಟೋ-ಟ್ಯಾಕ್ಸಿ ಚಾಲಕರ ಪ್ರತಿಭಟನೆಯ ನಡುವೆ ಬಂದಿರುವ ಈ ಹಠಾತ್ ನೀತಿ ಬದಲಾವಣೆ, ಸರ್ಕಾರದ ಗೊಂದಲದ ನಿರ್ಧಾರಗಳನ್ನು ಮತ್ತು ಇವಿ ಯೋಜನೆಗೆ ಆಗಬಹುದಾದ ನಷ್ಟವನ್ನು ಎತ್ತಿ ತೋರಿಸುತ್ತದೆ. ಈ ಪ್ರಸ್ತಾವನೆಯು ಉದ್ಯೋಗ ಸೃಷ್ಟಿ ಮತ್ತು ಇವಿ ನೀತಿಯ ನಡುವೆ ತೀವ್ರ ಚರ್ಚೆಗೆ ಸಂಚಲನ ಸೃಷ್ಟಿಸಿದೆ. ಮುಂಬೈನ ಆಟೋ-ಟ್ಯಾಕ್ಸಿ ಚಾಲಕ ಸಮುದಾಯವನ್ನು ರಕ್ಷಿಸಲು ಮತ್ತು ರಾಜ್ಯದ ಇವಿ ಕಾರ್ಯಸೂಚಿ ಮುಂದಕ್ಕೆ ತಳ್ಳಲು ಸಾರಿಗೆ ಇಲಾಖೆ ಈ ಹಿಂದೆ ಪೆಟ್ರೋಲ್ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು. ಆದಾಯ ಗಳಿಸುವ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸುವ ನೆಪದಲ್ಲಿ ಆ ನಿಲುವು ಈಗ ತಿರುಚಲ್ಪಟ್ಟಿದೆ ಎನ್ನಲಾಗಿದೆ. ಸರ್ಕಾರ ನಿಜವಾಗಿ ಇದರ ಪರಿಣಾಮ ತಡೆಗಟ್ಟುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.
ಹೊಸ ಪ್ರಸ್ತಾವನೆಯಡಿಯಲ್ಲಿ!
• ಚಾಲಕರು ರಾಜ್ಯಕ್ಕೆ ದೈನಂದಿನ ಆದಾಯದಲ್ಲಿ 5 ರೂ.ಗಳನ್ನು ಪಾವತಿಸಬೇಕಾಗುತ್ತದೆ.
• ಪ್ರತಿ ಸವಾರಿಗೆ ಹೆಚ್ಚುವರಿಯಾಗಿ 2 ರೂ. ಕಲ್ಯಾಣ ನಿಧಿಗೆ ಹೋಗುತ್ತದೆ.
• ಪ್ರಸ್ತಾವನೆ ಕಾನೂನು ಮತ್ತು ನ್ಯಾಯಾಂಗ ಇಲಾಖೆಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ.
ದಿನಕ್ಕೆ 5 ರೂ.ಗಳ ಪಾವತಿಯಿಂದ ರಾಜ್ಯವು ತನ್ನದೇ ಆದ ವಿದ್ಯುತ್ ವಾಹನಗಳ ಉತ್ತೇಜನ ದುರ್ಬಲಗೊಳಿಸುತ್ತಿದೆ ಎನ್ನುವುದು ವಿಶ್ಲೇಷಕ ವಾದ. ಸರ್ಕಾರದ ಒಳಗಿನವರು ಸಹ ವಿವರಿಸಲು ಹೆಣಗಾಡುತ್ತಿರುವ ವಿರೋಧಾಭಾಸಕ್ಕೆ ಕಾರಣವಾಗಿದೆ.
ಮಹಾ ಸಾರಿಗೆ ಸಚಿವ ಹೇಳಿದ್ದೇನು?
ಮಹಾರಾಷ್ಟ್ರ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಬೈಕ್ ಟ್ಯಾಕ್ಸಿಗಳ ಕುರಿತು ಶಾಸಕರಾದ ದಿಲೀಪ್ ಲಾಂಡೆ, ಸುನಿಲ್ ಪ್ರಭು ಮತ್ತು ಇತರರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್, ಕಾನೂನು ಮತ್ತು ನ್ಯಾಯಾಂಗ ಇಲಾಖೆಗೆ ಹೊಸ ನಿಯಂತ್ರಕ ಚೌಕಟ್ಟನ್ನು ಕಳುಹಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಈ ಹೊಸ ನಿಯಮವು ಬೈಕ್ ಚಾಲಕರಿಂದ ದಿನದ ಆದಾಯ ಸಂಗ್ರಹಣೆ ಮತ್ತು ಪ್ರತಿ ಸವಾರಿಗೆ ಕಲ್ಯಾಣ ನಿಧಿ ನೀಡುವುದನ್ನು ಕಡ್ಡಾಯಗೊಳಿಸುತ್ತದೆ. ಈ ಮೂಲಕ ಈವರೆಗೆ ಇಲಾಖೆಯಿಂದ ಮಾನ್ಯತೆ ಪಡೆಯದ ವಿಭಾಗವನ್ನು ಅಧಿಕೃತಗೊಳಿಸಲಾಗುತ್ತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಪ್ರಸ್ತಾವನೆಗೆ ಅಂತಿಮ ಅನುಮೋದನೆ ನೀಡಲಾಗುವುದು ಎಂದು ಸಾರಿಗೆ ಸಚಿವ ಸರ್ನಾಯಕ್ ತಿಳಿಸಿದ್ದಾರೆ. ಇದು ಚಾಲಕರ ಭದ್ರತೆಗೆ ಕಾನೂನುಬದ್ಧ ರೂಪ ನೀಡುವ ಯೋಜನೆಯಾಗಿದೆ.
ಹೊಸ ನಿಯಮಗಳಲ್ಲಿ ಯಾವ ಸುರಕ್ಷತಾ ಕ್ರಮಗಳನ್ನು ಸೇರಿಸಲಾಗಿದೆ?
ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಅಪ್ರಾಪ್ತ ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಬೈಕ್ ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಮಾನ್ಯ ಚಾಲನಾ ಪರವಾನಗಿ ಮತ್ತು ಸಾರ್ವಜನಿಕ ಸೇವಾ ವಾಹನ ಬ್ಯಾಡ್ಜ್ ಹೊಂದಿರಬೇಕು. ಬ್ಯಾಡ್ಜ್ ಪಡೆಯಲು ಪೊಲೀಸರ ಹತ್ತಿರ ಕ್ಯಾರೆಕ್ಟರ್ ಪ್ರಮಾಣಪತ್ರ ಪರಿಶೀಲನೆ ಕಡ್ಡಾಯವಾಗಿದ್ದು, ಹೊರರಾಜ್ಯದ ಚಾಲಕರು ಸ್ಥಳೀಯ ನಿವಾಸ ಪ್ರಮಾಣಪತ್ರ ಸಲ್ಲಿಸುವುದು ಅವಶ್ಯಕ. ಹೆಚ್ಚಿನ ವಿವರಗಳಿಗಾಗಿ ಸಂಬಂಧಿತ ಇಲಾಖೆ ವೆಬ್ಸೈಟ್ ವೀಕ್ಷಿಸಿ.


