ಒಂದೆಡೆ ಅಕ್ಷರಶಃ ನೀರಿನಲ್ಲಿ ಮುಳುಗಿರುವ ದೆಹಲಿಯಲ್ಲಿ ಇದೀಗ ಕುಡಿಯುವ ನೀರಿನ ಕೊರತೆಯ ಭೀತಿ ಎದುರಾಗಿದೆ. ಕಾರಣ ಯಮುನಾ ನದಿ ಪ್ರವಾಹದ ನೀರು ವಾಜಿರಾಬಾದ್‌, ಚಂದ್ರವಾಲ್‌, ಒಕ್ಲಾದಲ್ಲಿರುವ ಕುಡಿಯುವ ನೀರಿನ ಸಂಸ್ಕರಣಾ ಘಟಕಗಳಿಗೆ ನುಗ್ಗಿರುವ ಕಾರಣ ಅವುಗಳನ್ನು ಸ್ಥಗಿತಗೊಳಿಸಲಾಗಿದೆ. 

ನವದೆಹಲಿ: ಒಂದೆಡೆ ಅಕ್ಷರಶಃ ನೀರಿನಲ್ಲಿ ಮುಳುಗಿರುವ ದೆಹಲಿಯಲ್ಲಿ ಇದೀಗ ಕುಡಿಯುವ ನೀರಿನ ಕೊರತೆಯ ಭೀತಿ ಎದುರಾಗಿದೆ. ಕಾರಣ ಯಮುನಾ ನದಿ ಪ್ರವಾಹದ ನೀರು ವಾಜಿರಾಬಾದ್‌, ಚಂದ್ರವಾಲ್‌, ಒಕ್ಲಾದಲ್ಲಿರುವ ಕುಡಿಯುವ ನೀರಿನ ಸಂಸ್ಕರಣಾ ಘಟಕಗಳಿಗೆ ನುಗ್ಗಿರುವ ಕಾರಣ ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ‘ನಗರದ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮೇಲೆ ಪರಿಣಾಮ ಬೀರಬಹುದು. ನೀರಿನ ಮಟ್ಟ ಕಡಿಮೆಯಾದ ಕೂಡಲೇ ಈ ಘಟಕಗಳು ಮತ್ತೆ ಕಾರ್ಯನಿರ್ವಹಣೆ ಆರಂಭಿಸಲಿವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಟ್ವೀಟ್‌ ಮಾಡಿದ್ದಾರೆ. ಶೇ.25ರಷ್ಟುಕುಡಿಯುವ ನೀರಿನ ಸರಬರಾಜು ಕಡಿತಗೊಂಡಿದ್ದು ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ.

ರೋಗಿಗಳು ಶಿಫ್ಟ್‌

ಇನ್ನು ಈಗಾಗಲೇ ಮುಳುಗಡೆಯಾಗಿರುವ ಕಾಶ್ಮೀರ್‌ ಗೇಟ್‌ ಸುತ್ತಲಿನ ವ್ಯಾಪಾರ ಕೇಂದ್ರಗಳನ್ನು ಭಾನುವಾರದವರೆಗೆ ಬಂದ್‌ ಮಾಡಲಾಗಿದೆ. ಉತ್ತರ ದೆಹಲಿ ಪ್ರದೇಶದಲ್ಲಿರುವ ಸರ್ಕಾರಿ ‘ಗಾಯಾಳು ಚಿಕಿತ್ಸಾ ಕೇಂದ್ರ’ಕ್ಕೆ ಗುರುವಾರ ಭಾರೀ ಪ್ರಮಾಣದಲ್ಲಿ ಪ್ರವಾಹದ ನೀರು ನುಗ್ಗಿದ್ದು ಅಲ್ಲಿನ ಅಧಿಕಾರಿಗಳು 43 ಗಾಯಾಳುಗಳನ್ನು ಲೋಕನಾಯಕ ಜೈ ಪ್ರಕಾಶ್‌ ಆಸ್ಪತ್ರೆಗೆ ರವಾನಿಸಿದ್ದಾರೆ.

ದೆಹಲಿ ಮಳೆಯಿಂದ ಖುಲಾಯಿಸಿದ ಕೇಜ್ರಿವಾಲ್ ಲಕ್, ಮೋದಿ ಡಿಗ್ರಿ ಪ್ರಕರಣದಲ್ಲಿ ಕೋರ್ಟ್ ಹಾಜರಾತಿಗೆ ವಿನಾಯಿತಿ!

ಅಂತ್ಯಸಂಸ್ಕಾರಕ್ಕೂ ಅಡ್ಡಿ:

ಪ್ರವಾಹದ ಕಾರಣ ಹಲವೆಡೆ ಆಸ್ಪತ್ರೆ, ವಸತಿ ಕಟ್ಟಡ ಹಾಗೂ ಸ್ಮಶಾನಗಳು ಮುಳುಗಡೆಯಾಗಿದ್ದು ಅಂತಿಮ ಸಂಸ್ಕಾರಕ್ಕೆ ಕೆಲ ಸ್ಮಶಾನಗಳಿಗೆ ಹೋಗದಂತೆ ಆಡಳಿತ ಘೋಷಿಸಿದೆ.

ಕೇಜ್ರಿ ಮನೆ ಬಳಿಗೂ ಪ್ರವಾಹ

ಭಾರೀ ಮಳೆಯಿಂದ ರಾಜಧಾನಿ ದೆಹಲಿಯ ರಸ್ತೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹದ ನೀರು ಹರಿಯುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದಿಂದ ಕೇವಲ 350 ಮೀ ದೂರದಲ್ಲಿ ನೀರು ಹರಿಯುತ್ತಿದೆ. ಹೀಗಾಗಿ ಕೇಜ್ರಿವಾಲ್‌ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳು ವಾಸಿಸುವ ಸಿವಿಲ್‌ ಲೈನ್ಸ್‌ ವಸತಿ ಪ್ರದೇಶಕ್ಕೂ ಪ್ರವಾಹದ ನೀರು ನುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂಡಿಯಾ ಗೇಟ್‌ಗೂ ಪ್ರವಾಹ ?

ಪ್ರಸಿದ್ಧ ಇಂಡಿಯಾ ಗೇಟ್‌ ಕೂಡ ಇನ್ನೇನು ಪ್ರವಾಹಕ್ಕೆ ತುತ್ತಾಗಲಿದೆ ಎನ್ನಲಾಗಿದೆ. ಯಮುನಾ ನದಿಯಿಂದ ಇಂಡಿಯಾ ಗೇಟ್‌ 3 ರಿಂದ 4 ಕಿ.ಮೀ ದೂರದಲ್ಲಿದ್ದು, ಪ್ರವಾಹಕ್ಕೊಳಗಾದ ರಿಂಗ್‌ ರೋಡ್‌ ಮತ್ತು ಐಪಿ ಫ್ಲೈಓವರ್‌ ಇಂಡಿಯಾ ಗೇಟ್‌ಗೆ ಹತ್ತರದಲ್ಲಿವೆ. ಹೀಗಾಗಿ ಇಂಡಿಯಾ ಗೇಟ್‌ಗೂ ಪ್ರವಾಹದ ನೀರು ನುಗ್ಗಲಿದೆ ಎನ್ನಲಾಗಿದೆ. ಈಗಾಗಲೇ ಕೆಂಪುಕೋಟೆ, ಐಟಿಒ ರೀತಿಯ ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ.

ಕಣ್ಮರೆಯಾಗುತ್ತಾ ಭಾರತದ ಪ್ರಮುಖ ನಗರ? ಕೇಜ್ರಿವಾಲ್ ಮನೆ ಆವರಣಕ್ಕೆ ನುಗ್ಗಿದ ಯಮುನಾ ನೀರು!

ನೋಯ್ಡಾ ಶಾಲೆಗಳಿಗೆ ರಜೆ

ಉತ್ತರ ಭಾರತದಲ್ಲಿ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಪಾಯಮಟ್ಟಮೀರಿ ಯಮುನಾ ನದಿ ಹರಿಯುತ್ತಿರುವ ಕಾರಣ ನೋಯ್ಡಾದಲ್ಲಿ 12ನೇ ತರಗತಿವರೆಗೆ ಶಾಲಾ ಕಾಲೇಜುಗಳಿಗೆ ರಜೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಮೆಟ್ರೋಗೂ ಅಡ್ಡಿ:

ನದಿ ನೀರಿನ ಮಟ್ಟಹೆಚ್ಚಾಗುತ್ತಿರುವ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ಯಮುನಾ ನದಿ ಸೇತುವೆ ಮೇಲೆ ಚಲಿಸಲಿರುವ ನಾಲ್ಕು ಮೆಟ್ರೋ ಮಾರ್ಗಗಳಲ್ಲಿ ಕೇವಲ ಗಂಟೆಗೆ 30 ಕಿ.ಮೀ ವೇಗದಲ್ಲಿ ಚಲಿಸುವಂತೆ ಮೆಟ್ರೋಗೆ ಆಡಳಿತ ಸೂಚನೆ ನೀಡಿದೆ. ಅಲ್ಲದೇ ಯಮುನಾ ಬ್ಯಾಂಕ್‌ ಮೆಟ್ರೋ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಪ್ರಯಾಣಿಕರ ಪ್ರವೇಶ ಹಾಗೂ ನಿರ್ಗಮನವನ್ನು ನಿಷೇಧಿಸಲಾಗಿದೆ.