ಬಿಹಾರದ ಅರಾಹ್ನಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶಾಪ್ನಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಗನ್ ತೋರಿಸಿ 25 ಕೋಟಿ ರೂ. ಮೌಲ್ಯದ ಆಭರಣಗಳನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಬಿಹಾರದಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಗನ್ ಹಿಡಿದು ತನಿಷ್ಕ್ ಜ್ಯುವೆಲ್ಲರಿಗೆ ನುಗ್ಗಿದ ದರೋಡೆಕೋರರು ಗನ್ ತೋರಿಸಿಯೇ 25 ಕೋಟಿ ಮೌಲ್ಯದ ಆಭರಣಗಳನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ. ಈ ಭಯಾನಕ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ ಅರಾಹ್ನಲ್ಲಿದ್ದ ತನಿಷ್ಕ್ ಜ್ಯುವೆಲ್ಲರಿ ಶಾಪ್ನಲ್ಲಿ ಈ ಘಟನೆ ನಡೆದಿದ್ದು, ಗುಂಪಿನಲ್ಲಿ ಬಂದ ದರೋಡೆಕೋರರು ಭದ್ರತಾ ಸಿಬ್ಬಂದಿಯನ್ನು ದೂರ ತಳ್ಳಿ ಒಳ ನುಗ್ಗಿದ್ದು, ಬಳಿಕ ಶಾಪ್ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಃಕರನ್ನು ಒತ್ತೆಯಾಳಾಗಿರಿಸಿಕೊಂಡು ಕೈಗೆ ಸಿಕ್ಕಿದ್ದೆಲ್ಲವನ್ನೂ ದೋಚಿ ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಲೂಟಿ ಮಾಡಿದ ವಸ್ತುಗಳ ಮೌಲ್ಯ 25 ಕೋಟಿ ರೂ.ಗಳಷ್ಟಿತ್ತು ಎಂದು ತಿಳಿದು ಬಂದಿದೆ. ಆದರೆ ಪೊಲೀಸರು ಕಳುವಾದ ಆಭರಣಗಳ ಮೌಲ್ಯವನ್ನು ದೃಢಪಡಿಸಿಲ್ಲ.
ಇಂದು ಮುಂಜಾನೆ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ದರೋಡೆಯ ದೃಶ್ಯಾವಳಿಗಳು ಈಗ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣುವಂತೆ ಮಾಸ್ಕ್ ಧರಿಸಿ ಕೈಯಲ್ಲಿ ಗನ್ ಹಿಡಿದು ಶೋ ರೂಂಗೆ ನುಗ್ಗಿದ ದರೋಡೆಕೋರರು, ಗ್ರಾಹಕರು ಮತ್ತು ಉದ್ಯೋಗಿಗಳನ್ನು ಕೈ ಮೇಲೆತ್ತಿ ಶರಣಾಗುವಂತೆ ಹೇಳಿದ್ದಾರೆ. ಕದಲಿದಲ್ಲಿ ಗುಂಡು ಹಾರಿಸುವುದಾಗಿ ಬೆದರಿಸಿದ್ದಾರೆ.
ಭದ್ರತಾ ಸಿಬ್ಬಂದಿಯಿಂದಲೇ ಬಂದೂಕು ಕಸಿದ ದರೋಡೆಕೋರರು
ತನಿಷ್ಕ್ ಜ್ಯುವೆಲ್ಲರಿ ಶಾಪ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ಎಂಬುವವರಿಂದ ಬಂದೂಕು ಕಸಿದ ದರೋಡೆಕೋರರು, ಜ್ಯುವೆಲ್ಲರಿ ಶಾಪ್ನಲ್ಲಿ ಆಭರಣ ಇಡುವಂತಹ ರ್ಯಾಕ್ಗಳ ಬಳಿ ಹೋಗಿ ಕೈಗೆ ಸಿಕ್ಕಿದ್ದೆಲ್ಲವನ್ನು ದೋಚಿದ್ದಾರೆ. ಚಿನ್ನ ಬೆಳ್ಳಿ ಹಾಗೂ ವಜ್ರದ ಆಭರಣಗಳನ್ನು ಗುರಿಯಾಗಿಸಿ ದರೋಡೆ ಮಾಡಿದ್ದಾರೆ. ವೀಡಿಯೋದಲ್ಲಿ ಅವರು ಚಿನ್ನಾಭರಣಗಳನ್ನು ಚೀಲಕ್ಕೆ ತುಂಬಿಸಿ ಪ್ಯಾಕ್ ಮಾಡುವುದನ್ನು ಕಾಣಬಹುದು.
ಬೀದರ್ ಹಣ ಲೂಟಿ ಹಿಂದೆ ಬಿಹಾರದ ಅಮಿತ್ ಗ್ಯಾಂಗ್?
ಜೀವ ಉಳಿಸಿಕೊಳ್ಳಲು ಕೌಂಟರ್ ಹಿಂದೆ ಅಡಗಿಕೊಂಡ ಉದ್ಯೋಗಿಗಳು
ಮೊದಲೇ ಯೋಜನೆ ರೂಪಿಸಿ ಈ ದರೋಡೆ ಮಾಡಿದ್ದು, ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯುದ್ಧಕ್ಕೂ ಕಾರುಗಳನ್ನು ನಿಲ್ಲಿಸಿ ಈ ಗ್ರೇಟ್ ರಾಬರಿ ಮಾಡಿದ್ದಾರೆ. ಮೊದಲು, ಅವರು ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿ ಅವರ ಆಯುಧವನ್ನು ಕಸಿದುಕೊಂಡರು. ನಂತರ, ಅಂಗಡಿಯೊಳಗೆ ಪ್ರವೇಶಿಸಿ ಲಕ್ಷಾಂತರ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಪರಿಸ್ಥಿತಿ ಉದ್ವಿಗ್ನತೆಯ ಸ್ವರೂಪಕ್ಕೆ ತಿರುಗಿದಾಗ ಸಿಬ್ಬಂದಿ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಕೌಂಟರ್ಗಳ ಹಿಂದೆ ಅಡಗಿಕೊಂಡರು ಎಂದು ಲೂಟಿಯಾದ ಆಭರಣ ಅಂಗಡಿಯ ಉದ್ಯೋಗಿ ರೋಹಿತ್ ಕುಮಾರ್ ಮಿಶ್ರಾ ಸುದ್ದಿ ಸಂಸ್ಥೆ ಐಎಎನ್ಎಸ್ಗೆ ತಿಳಿಸಿದ್ದಾರೆ. ದರೋಡೆಕೋರರು ಜ್ಯುವೆಲ್ಲರಿ ಶಾಪ್ನ ಕಾವಲಿಗಿದ್ದ ಬಂದೂಕುಗಳನ್ನು ಕಸಿದುಕೊಂಡು ಎಲ್ಲರನ್ನೂ ಒಂದು ಬದಿಗೆ ತಳ್ಳಿದರು. ನಾವು ಕೌಂಟರ್ ಹಿಂದೆ ಅಡಗಿಕೊಂಡೆವು, ಅವರು ನಮ್ಮನ್ನು ಹೊಡೆದರು... ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು, ಮತ್ತು ಏನು ನಡೆಯುತ್ತಿದೆ ಎಂದು ನಮಗೆ ಅರ್ಥವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
20-30 ಬಾರಿ ಕರೆ ಮಾಡಿದರು ಕರೆ ಎತ್ತದ ಪೊಲೀಸರು
ದರೋಡೆ ವೇಳೆ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಪದೇ ಪದೇ ಕರೆ ಮಾಡಿ ಸಹಾಯ ಪಡೆಯಲು ಯತ್ನಿಸಿದರು. ಕೇವಲ 600 ಮೀಟರ್ ದೂರದಲ್ಲಿರುವ ಹತ್ತಿರದ ಪೊಲೀಸ್ ಠಾಣೆಗೆ ಪದೇ ಪದೇ ಕರೆ ಮಾಡಿದರು. ಆದರೆ 25-30 ಬಾರಿತುರ್ತು ಕರೆಗಳನ್ನು ಮಾಡಿದರೂ, ಯಾವುದೇ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಲಿಲ್ಲ, ಇದರಿಂದಾಗಿ ದರೋಡೆಕೋರರು ಸಿಕ್ಕಿಬೀಳದೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
ಮಂಗ್ಳೂರು ಬ್ಯಾಂಕಲ್ಲಿ ಲೂಟಿ, 5 ನಿಮಿಷದಲ್ಲಿ 12 ಕೋಟಿ ದೋಚಿ ಪರಾರಿ: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ದರೋಡೆ!
ದರೋಡೆಯ ವೀಡಿಯೋ ಇಲ್ಲಿದೆ ನೋಡಿ
