ಉಳ್ಳಾಲ ತಾಲೂಕಿನ ಕೆ.ಸಿ. ರೋಡ್ ಕೋಟೆಕಾರ್ ಸೇವಾ ಸಹಕಾರಿ ಸಂಘದ ಬ್ಯಾಂಕ್ ಗೆ ನುಗ್ಗಿದ 5 ಮಂದಿ ಮುಸುಕುಧಾರಿ ದರೋಡೆಕೋರರ ತಂಡ, ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲು ಮತ್ತು ತಲವಾರು ತೋರಿಸಿ ಅಂದಾಜು 12 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 5 ಲಕ್ಷ ರು. ನಗದು ದೋಚಿ ಪರಾರಿಯಾಗಿದೆ.
ಉಳ್ಳಾಲ(ಜ.18): ಎಟಿಎಂಗೆ ಹಣ ತುಂಬಿಸುವ ವಾಹನ ಸಿಬ್ಬಂದಿ ಯನ್ನು ಹಾಡಹಗಲೇ ಶೂಟ್ ಮಾಡಿ ಹಣ ಸಮೇತ ಪರಾರಿಯಾದ ಘಟನೆ ಬೀದರ್ನಲ್ಲಿ ನಡೆದ ಮಾರನೇ ದಿನವೇ ಮಂಗಳೂರು ಸಮೀಪದ ಉಳ್ಳಾಲದಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಂಕ್ ದರೋಡೆ ನಡೆದಿದೆ.
ಶುಕ್ರವಾರ ಮಧ್ಯಾಹ್ನದ ವೇಳೆ ಉಳ್ಳಾಲ ತಾಲೂಕಿನ ಕೆ.ಸಿ. ರೋಡ್ ಕೋಟೆಕಾರ್ ಸೇವಾ ಸಹಕಾರಿ ಸಂಘದ ಬ್ಯಾಂಕ್ ಗೆ ನುಗ್ಗಿದ 5 ಮಂದಿ ಮುಸುಕುಧಾರಿ ದರೋಡೆಕೋರರ ತಂಡ, ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲು ಮತ್ತು ತಲವಾರು ತೋರಿಸಿ ಅಂದಾಜು 12 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 5 ಲಕ್ಷ ರು. ನಗದು ದೋಚಿ ಪರಾರಿಯಾಗಿದೆ. ಕೇವಲ 5 ನಿಮಿಷಗಳ ಅವಧಿಯಲ್ಲಿ ನಡೆದ ಈ ದರೋಡೆ, ರಾಜ್ಯದಲ್ಲಿ ಈವರೆಗೆ ನಡೆದ ಅತಿದೊಡ್ಡ ಮೊತ್ತದ ಬ್ಯಾಂಕ್ ದರೋಡೆ ಎನ್ನಲಾಗಿದೆ. ದರೋಡೆ ನಡೆಸಿದ ತಂಡ, ಗೋಣಿ ಚೀಲ ದಲ್ಲಿ ಚಿನ್ನ, ಹಣ ತುಂಬಿಕೊಂಡು, ಫಿಯೆಟ್ ಲಿನಿಯಾ ಕಾರಿನಲ್ಲಿ ಪರಾರಿಯಾಗಿದೆ.
ಬೀದರ್ನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ದಾಳಿ, ಲಕ್ಷ ಲಕ್ಷ ರೂಪಾಯಿ ದರೋಡೆ: ಇಬ್ಬರು ಸಾವು
ಒಳ್ಳೆಯ ಟೈಮ್ ನೋಡಿ ಲೂಟಿ!
• ಶುಕ್ರವಾರ ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿದ್ದರು. ಹೀಗಾಗಿ ಉಳ್ಳಾಲ ಪೊಲೀಸರು ಭದ್ರತೆಗಾಗಿ ಅತ್ತ ತೆರಳಿದ್ದರು
• ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿ ದ್ದರಿಂದ ಮಧ್ಯಾಹ್ನದ ವೇಳೆ ಬಹು ತೇಕ ಮಂದಿ ಶುಕ್ರವಾರದ ನಮಾಜ್ಗೆ ಹೋಗಿದ್ದರು.
• ಬ್ಯಾಂಕ್ನಲ್ಲೂ ಜನರು ಕಡಿಮೆ ಇದ್ದರು. ಸಿಸಿಟೀವಿ ವೈರ್ಗಳನ್ನು ಇಲಿಗಳು ಕಚ್ಚಿದ್ದರಿಂದ ಅದು ಕೂಡ ಕೆಲಸ ಮಾಡುತ್ತಿರಲಿಲ್ಲ
• ಇಂತಹ ಟೈಮ್ ನೋಡಿಯೇ ಬ್ಯಾಂಕ್ ಗೆ ನುಗ್ಗಿ ಹಣ ದೋಚಿ ಕೊಂಡು ಹೋಗಿರುವ ದರೋಡೆಕೋರರು
ದರೋಡೆಕೋರರು ಹೇಗೆ ತಪ್ಪಿಸಿಕೊಂಡ್ರು: ಮಂಗ್ಳೂರು ಪೊಲೀಸರಿಗೆ ಸಿಎಂ ತರಾಟೆ
ಮಂಗಳೂರು: ಉಳ್ಳಾಲ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಯವರು, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಖಡಕ್ ಸೂಚನೆ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಎಸ್.ಪಿ ಯತೀಶ್, ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಸಭೆ ನಡೆಸಿದರು.
ಸರ್ಕಾರದ ಭಯವಿಲ್ಲ, ಪೊಲೀಸರ ಕ್ಯಾರೇ ಇಲ್ಲ; ರಾಜಾರೋಷವಾಗಿ ಕೊಲೆ ಮಾಡಿ 93 ಲಕ್ಷ ATM ಹಣ ಹೊತ್ತೊಯ್ದ ಖದೀಮರು!
ಘಟನೆಯ ಕುರಿತಂತೆ ಸಮಗ್ರ ಮಾಹಿತಿ ಪಡೆದ ಮುಖ್ಯಮಂತ್ರಿಯವರು, ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು?. ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ?. ಎಷ್ಟು ಟೋಲ್ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್ಗಳನ್ನು ಯಾಕೆ ಬಿಗಿಗೊಳಿಸಿಲ್ಲ ಎಂದು ಗರಂ ಆಗಿ ಪ್ರಶ್ನಿಸಿದರು.
ಎಲ್ಲ ಟೋಲ್ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಸಹಕಾರಿ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಐದಾರು ಮಂದಿ ಮಾತ್ರ ಬ್ಯಾಂಕ್ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ ಮಾತಾಡಿರುವುದು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.
