ಬರಗಾಲ, ಪ್ರವಾಹ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಹಲವು ಜಿಲ್ಲೆಗಳಲು ಜುಲೈ ಮಧ್ಯ ತಲುಪಿದರೂ ಒಂದು ಮಳೆ ಕಂಡಿಲ್ಲ. ಇದರ ನಡುವೆ ಭಾರತಕ್ಕೆ ಕೋವಿಡ್ ವೈರಸ್ ಭೀತಿ ಎದುರಾಗಿದೆ. ಆಂಧ್ರ ಪ್ರದೇಶದಲ್ಲಿ 2 ಸಾವು ಸಂಭವಿಸಿದ್ದು, 8 ಕೋವಿಡ್ ಕೇಸ್ ಪತ್ತೆಯಾಗಿದೆ.

ನವದೆಹಲಿ (ಜು.14) ಕರ್ನಾಟಕ ಸೇರಿದಂತೆ ಇಡೀ ಭಾರತ ಈ ಬಾರಿ ತೀವ್ರ ಸಂಕಷ್ಟ ಎದುರಿಸುತ್ತಿದೆ. ಎಲ್ ನಿನೋ ಪರಿಣಾಮದಿಂದ ಮಳೆ ಕಾಣದಾಗಿದೆ. ಇನ್ನು ಕೆಲೆವೆಡೆ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಈಗಾಗಲೇ ನೀರಿನ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ಮಾಯವಾಗಿದ್ದ ಕೋವಿಡ್ ವೈರಸ್ ಮತ್ತೆ ಭುಗಿಲೆದ್ದಿದೆ. ಆಂಧ್ರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶದಲ್ಲಿ ಕೋವಿಡ್ ವೈರಸ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ. ಇನ್ನು 8 ಸಕ್ರಿಯ ಪ್ರಕರಣಗಳು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಆಂಧ್ರ ಪ್ರದೇಶದಲ್ಲಿ ಅಲರ್ಟ್ ನೀಡಲಾಗಿದೆ. ಜೊತೆಗೆ ಆಂಧ್ರ ಪ್ರದೇಶದ ಜೊತೆ ಗಡಿ ಹಂಚಿಕೊಂಡಿರುವ ಒಡಿಶಾದಲ್ಲಿ ಅಲರ್ಟ್ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಸ್ಪತ್ರೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಳ

2020, 2021ರಲ್ಲಿ ಭಾರತ ಸೇರಿದಂತೆ ವಿಶ್ವದಲ್ಲಿ ಕೋವಿಡ್ ಮಹಾಮಾರಿ ತೀವ್ರವಾಗಿತ್ತು. ಸಾವು ನೋವುಗಳ ಸಂಖ್ಯೆ ಲಕ್ಷ ದಾಟಿತ್ತು. 2022ರಿಂದ ಕೋವಿಡ್ ನಿಯಂತ್ರಣಕ್ಕೆ ಬಂದಿತ್ತು.ನಂತರದ ದಿನಗಳಲ್ಲಿ ಹಲವು ರೂಪಾಂತರಿ ಕೋವಿಡ್ ತಳಿಗಳ ವೈರಸ್ ಕಾಣಿಸಿಕೊಂಡರೂ ಸಾವಿನ ಸಂಖ್ಯೆ ಇರಲಿಲ್ಲ. ಕೇವಲ ಮೈಲ್ಡ್ ಕೋವಿಡ್ ಕೇಸ್ ಪತ್ತೆಯಾಗಿತ್ತು. ಆದರೆ ಆಸ್ಪತ್ರೆ ದಾಖಲಾಗುವ ಸಂಖ್ಯೆ ತೀರಾ ವಿರಳವಾಗಿತ್ತು. ಆದರೆ ಇದೀಗ ಆಂಧ್ರ ಪ್ರದೇಶದಲ್ಲಿ ಕಾಣಿಸಿಕೊಂಡ ಕೋವಿಡ್ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದೆ. ಆಸ್ಪತ್ರೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಎರಡು ಸಾವು ತಂದ ಆತಂಕ

ಕಡಪ ಜಿಲ್ಲೆಯ 52 ವರ್ಷದ ವ್ಯಕ್ತಿ, ಜ್ವರ, ಶೀತ, ಕೆಮ್ಮು ಸಮಸ್ಯೆಯಿಂದ ಆಸ್ಪತ್ರೆಗೆ ಹಾಜರಾಗಿದ್ದರು. ಪರಿಶೀಲಿಸಿದಾಗ ಕೋವಿಡ್ ವೈರಸ್ ಪತ್ತೆಯಾಗಿತ್ತು. ವೆಲ್ಲೋರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ನಡುವೆ ಉಸಿರಾಟದ ಸಮಸ್ಯೆಗಳು ತೀವ್ರಗೊಂಡು ವ್ಯಕ್ತಿ ಮೃತಪಟ್ಟಿದ್ದಾರೆ. ಕಡಪ ಜಿಲ್ಲೆಯ 43 ವರ್ಷದ ವ್ಯಕ್ತಿಯೊಬ್ಬರಲ್ಲೂ ಕೋವಿಡ್ ಕೇಸ್ ಪತ್ತೆಯಾಗಿತ್ತು. ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೂ ಮೃತಪಟ್ಟಿದ್ದಾರೆ.

ಆಂಧ್ರ ಪ್ರದೇಶ, ಒಡಿಶಾದಲ್ಲಿ ಅಲರ್ಟ್

ಕಳೆದೆರಡು ದಿನಗಳಲ್ಲಿ ಆಂಧ್ರ ಪ್ರದೇಶದಲ್ಲಿ 8 ಸಕ್ರೀಯ ಕೋವಿಡ್ ಕೇಸ್‌ಗಳು ಪತ್ತೆಯಾಗಿದೆ. ಹೀಗಾಗಿ ಆಂಧ್ರ ಪ್ರದೇಶದಲ್ಲಿ ಕೋವಿಡ್ ಅಲರ್ಟ್ ನೀಡಲಾಗಿದೆ. ಇತ್ತ ಆಂಧ್ರ ಪ್ರದೇಶಕ್ಕೆ ಗಡಿ ಹಂಚಿಕೊಂಡಿರುವ ಒಡಿಶಾದಲ್ಲೂ ಕೋವಿಡ್ ಅಲರ್ಟ್ ನೀಡಲಾಗಿದೆ. ಹಲವು ನಿರ್ಬಂಧ ವಿಧಿಸಲಾಗಿದೆ. ಆಂಧ್ರ ಪ್ರದೇಶ ಹಾಗೂ ಒಡಿಶಾ ಆರೋಗ್ಯ ಇಲಾಖೆ ಈಗಾಗಲೇ ಅಲರ್ಟ್ ನೀಡಲಾಗಿದೆ.