ಆಯೋಧ್ಯಾ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬಳಿಕ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ ಹಾಗೂ ಕಾಂಗ್ರೆಸ್ ಟೀಕೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿರುಗೇಟು ನೀಡಿದ್ದು, ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಇಂದು ರಾಮಭಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿ.
ಉತ್ತರ ಪ್ರದೇಶ (ಜೂ.30) ಆಯೋಧ್ಯಾ ರಾಮಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣ ಬಯಲಿಗೆ ಬಂದ ಬಳಿಕ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಮತ್ತು ರಾಮಭಕ್ತರ ಮೇಲೆ ಅಖಿಲೇಶ್ ಯಾದವ್ ತೀವ್ರ ಆರೋಪ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಇಂದು ಇದ್ದಕ್ಕಿದ್ದಂತೆ ರಾಮಭಕ್ತಿ ಬಗ್ಗೆ ಮಾತನಾಡ್ತಿರೋದು ಬೂಟಾಟಿಕೆ' ಎಂದು ವಾಗ್ದಾಳಿ ನಡೆಸಿದರು.
ಆಯೋಧ್ಯಾ ವಿಚಾರದಲ್ಲಿ ಕಾಂಗ್ರೆಸ್, ಸಮಾಜವಾದಿ ಬೂಟಾಟಿಕೆ:
ರಾಮಪುರದಲ್ಲಿ 690 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹಿಂದೆ 'ಜೈ ಶ್ರೀ ರಾಮ್' ಎಂದವರ ಮೇಲೆ ಲಾಠಿಚಾರ್ಜ್ ಮಾಡಿಸುತ್ತಿದ್ದವರು ಇಂದು ಏಕಾಏಕಿ ರಾಮಭಕ್ತಿಯ ಪಾಠ ಮಾಡುತ್ತಿದ್ದಾರೆ ಎಂದು ಯೋಗಿ ಕುಟುಕಿದರು.
2017ಕ್ಕೂ ಮೊದಲು ಶ್ರೀರಾಮ ಮತ್ತು ಶ್ರೀಕೃಷ್ಣನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್, ಇಂದು ಅಯೋಧ್ಯೆಗೆ ಭೇಟಿ ನೀಡಲು ಹಾತೊರೆಯುತ್ತಿದೆ. ಅಯೋಧ್ಯೆ ಮತ್ತು ಕಾಶಿ ವಿಶ್ವನಾಥ ಕ್ಷೇತ್ರಗಳು ಇಷ್ಟು ಸುಂದರವಾಗಿರುವುದನ್ನು ನೋಡಿ ಅವರಿಗೆ ಹೊಟ್ಟೆಯುರಿಯಾಗಿದೆ. ಈಗೇನೂ ಮಾಡಲು ಸಾಧ್ಯವಾಗದ ಕಾರಣ, ಸುಳ್ಳಿನ ಮೊರೆ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರದಿಂದ ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ:
ಉತ್ತರ ಪ್ರದೇಶದಲ್ಲಿ ಈಗ ಯಾವುದೇ ಜಿಲ್ಲೆಗಳ ನಡುವೆ ತಾರತಮ್ಯವಿಲ್ಲದೆ, ಎಲ್ಲರನ್ನೂ ಒಳಗೊಂಡ ಸಮಾನ ಅಭಿವೃದ್ಧಿ ಆಗುತ್ತಿದೆ ಎಂದು ಮುಖ್ಯಮಂತ್ರಿಗಳು, 'ಅಭಿವೃದ್ಧಿ ವಿಷಯದಲ್ಲಿ ಈಗ ಆಯ್ಕೆ ಮತ್ತು ತಾರತಮ್ಯ ಇಲ್ಲವೇ ಇಲ್ಲ. ಒಂದು ಜಿಲ್ಲೆಗೆ ವಿದ್ಯುತ್ ಸಿಕ್ಕರೆ, ರಾಜ್ಯದ ಎಲ್ಲಾ 75 ಜಿಲ್ಲೆಗಳಿಗೂ ವಿದ್ಯುತ್ ಸಿಗಲಿದೆ. ಅಭಿವೃದ್ಧಿ ಇನ್ನು ನಿಲ್ಲುವುದಿಲ್ಲ. ಯುವಕರ ಬದುಕಿನ ಜೊತೆ ಯಾರೂ ಆಟವಾಡಲು ಸಾಧ್ಯವಿಲ್ಲ. ಇಂದು ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಯಾರೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಹಾಗೆ ಮಾಡಲು ನಂತರದ ಶಿಕ್ಷೆ ನೆನಪಾಗಿ ಹೆದರುತ್ತಿದ್ದಾರೆ ಎಂದರು.
ರಾಮಪುರಕ್ಕೆ ಹೊಸ ಯೋಜನೆಗಳು
ಈ ಅಭಿವೃದ್ಧಿ ಯೋಜನೆಗಳು ರಾಮಪುರದ ಬೆಳವಣಿಗೆಗೆ ವೇಗ ನೀಡಲಿದ್ದು, ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶ ನಿರ್ಮಾಣದ ಗುರಿಗೆ ಶಕ್ತಿ ತುಂಬಲಿವೆ ಎಂದರು. ಈ ಬಗ್ಗೆ'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಯೋಗಿ ಆದಿತ್ಯನಾಥ್ ಅವರು, ಮಿಲಕ್ ಮತ್ತು ಬಿಲಾಸ್ಪುರ್ ವಿಧಾನಸಭಾ ಕ್ಷೇತ್ರಗಳಲ್ಲಿ 690 ಕೋಟಿ ರೂ.ಗೂ ಹೆಚ್ಚು ಮೌಲ್ಯದ 102 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯು ರಾಮಪುರದ ಅಭಿವೃದ್ಧಿಗೆ 'ಹೊಸ ವೇಗ ಮತ್ತು ಹೊಸ ದಿಕ್ಕು' ನೀಡಲಿದೆ ಬರೆದುಕೊಂಡಿದ್ದಾರೆ.
ಸಾರ್ವಜನಿಕ ಸೇವೆ, ಸಾರ್ವಜನಿಕ ಅನುಕೂಲ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಾದ ಈ ಅಭಿವೃದ್ಧಿ ಯೋಜನೆಗಳು ರಾಮಪುರದ ಪ್ರಗತಿಗೆ ಹೊಸ ಶಕ್ತಿ ತುಂಬಲಿವೆ ಮತ್ತು 'ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶ' ನಿರ್ಮಾಣದ ಸಂಕಲ್ಪವನ್ನು ಬಲಪಡಿಸಲಿವೆ ಎಂಬ ಸಂಪೂರ್ಣ ವಿಶ್ವಾಸವಿದೆ' ಎಂದು ಸಿಎಂ ಯೋಗಿ ಹೇಳಿದ್ದಾರೆ. (ANI)


