ಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕುರಿತಾದ ಚರ್ಚೆ ತೀವ್ರಗೊಂಡಿವೆ. ರಾಜಕೀಯದಲ್ಲಿ ಶಾಶ್ವತ ಶತ್ರು-ಮಿತ್ರರಿಲ್ಲ ಎಂಬ ಡಿಎಂಕೆ ನಾಯಕಿ ಕನಿಮೊಳಿ ಸೋಮು ಮತ್ತು ಬಿಜೆಪಿ ನಾಯಕಿ ವನತಿ ಶ್ರೀನಿವಾಸನ್ ಅವರ ಒಂದೇ ರೀತಿಯ ಹೇಳಿಕೆಗಳು ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

ಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಕೇಳಿದಾಗ, ಮಾಜಿ ಡಿಎಂಕೆ ಸಂಸದೆ ಕನಿಮೊಳಿ ಸೋಮು ಹಾಗೂ ಮಾಜಿ ಬಿಜೆಪಿ ಶಾಸಕಿ ವನತಿ ಒಂದೇ ಉತ್ತರ ನೀಡಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಟಿಡಿಪಿ ಮೈತ್ರಿಕೂಟದ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್, ವಿಕೆಸಿ ಮತ್ತು ಐಯುಎಂಎಲ್ ಪಕ್ಷಗಳು ಟಿಡಿಪಿಗೆ ಬೆಂಬಲ ನೀಡಿವೆ. ಎಡಪಂಥೀಯ ಸಿಪಿಎಂ ಮತ್ತು ಸಿಪಿಐ ಪಕ್ಷಗಳು ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿವೆ. ಆದರೆ ಈಗ ಸೃಷ್ಟಿಯಾಗಿರುವ ವಾತಾವರಣ ಹಾಗೂ ಘಟಾನುಗಟಿ ನಾಯಕರು ನೀಡಿರುವ ಉತ್ತರ ಇಂಡಿಯಾ ಕೂಟಕ್ಕೆ ನುಂಗಲಾರದ ತುತ್ತಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಈಗಿರುವ ಪ್ರಶ್ನೆ ಏನು? 

ಬಿಜೆಪಿ ಸರ್ಕಾರವು ಈ ಹಿಂದೆ ಸೋತಿದ್ದ 'ಕ್ಷೇತ್ರ ಪುನರ್ವಿಂಗಡಣಾ ಮಸೂದೆ'ಯನ್ನು ಮಳೆಗಾಲದ ಅಧಿವೇಶನದಲ್ಲಿ ಮತ್ತೆ ಮಂಡಿಸಲಿದೆ ಎಂಬ ವರದಿಗಳು ಬಂದವು. ಇದರಿಂದಾಗಿ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ತಮಿಳುನಾಡಿನ ಡಿಎಂಕೆ ಪಕ್ಷವನ್ನು ಪ್ರಶ್ನಿಸಲು ಶುರು ಮಾಡಿದವು. ಈ ಮಸೂದೆಯ ಬಗ್ಗೆ ಡಿಎಂಕೆಯ ನಿಲುವೇನು ಎಂದು ಕೇಳುವ ನೆಪದಲ್ಲಿ, ವಿರೋಧ ಪಕ್ಷಗಳು ಮತ್ತೊಂದು ರಹಸ್ಯ ಪ್ರಶ್ನೆಯನ್ನು ಎತ್ತಿದವು. ಅದುವೇ, ಡಿಎಂಕೆ ಮತ್ತು ಬಿಜೆಪಿ ನಡುವೆ ಒಳಗೊಳಗೇ ಮೈತ್ರಿ ಅಥವಾ ಒಪ್ಪಂದವೇನಾದರೂ ಜಾರಿಯಲ್ಲಿದೆಯೇ? ಎಂಬುದು.

ಡಿಲಿಮಿಟೇಷನ್‌ ಕುರಿತು ನಿಲುವೇನು?

ಡಿಲಿಮಿಟೇಷನ್‌ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ಕಳೆದ ವರ್ಷ ಮಾರ್ಚ್‌ನಲ್ಲಿ ತಮಿಳುನಾಡು ಸರ್ಕಾರದ ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಂಡ ನಿಲುವಿನಲ್ಲಿ ಡಿಎಂಕೆ ಇನ್ನೂ ದೃಢವಾಗಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಅಥವಾ ಹಿಂಜರಿಕೆ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೊಸದಾಗಿ ಕ್ಷೇತ್ರಗಳನ್ನು ವಿಂಗಡಿಸುವಾಗ ತಮಿಳುನಾಡು ರಾಜ್ಯದ ಹಿತಾಸಕ್ತಿಗಳಿಗೆ ಯಾವುದೇ ಧಕ್ಕೆ ಬರಬಾರದು ಎಂಬುದು ಪಕ್ಷದ ಮುಖ್ಯ ಉದ್ದೇಶವಾಗಿದೆ. ಜನಸಂಖ್ಯೆ ನಿಯಂತ್ರಿಸಿದ ಕಾರಣಕ್ಕೆ ಸಂಸತ್ತಿನಲ್ಲಿ ರಾಜ್ಯಕ್ಕೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯ ಮತ್ತು ಸೀಟುಗಳ ಸಂಖ್ಯೆ ಕಡಿಮೆ ಆಗಬಾರದು. ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ, ನ್ಯಾಯಯುತವಾಗಿ ಸೀಮಾ ನಿರ್ಣಯ ಪ್ರಕ್ರಿಯೆ ನಡೆಯಬೇಕು ಎಂಬುದು ಡಿಎಂಕೆಯ ದೃಢವಾದ ತೀರ್ಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಡಿಎಂಕೆ ಪ್ರತಿಕ್ರಿಯೆ ಏನು?

ಡಿಎಂಕೆ-ಬಿಜೆಪಿ ಮೈತ್ರಿ ಕುರಿತ ಚರ್ಚೆಗಳು ಮುಂದುವರಿದ ಹಿನ್ನೆಲೆಯಲ್ಲಿ, ಡಿಎಂಕೆ ಮಾಜಿ ಸಂಸದೆ ಕನಿಮೋಳಿ ಸೋಮು ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಉಭಯ ಪಕ್ಷಗಳು ಹತ್ತಿರವಾಗುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಯಾರು ಕೂಡ ಶಾಶ್ವತ ಶತ್ರುಗಳಲ್ಲ ಅಥವಾ ಮಿತ್ರರಲ್ಲ ಎಂಬ ಪ್ರಮುಖ ರಾಜತಾಂತ್ರಿಕ ಸತ್ಯ ನೆನಪಿಸಿದ್ದಾರೆ. ತಮ್ಮ ಪಕ್ಷಕ್ಕೆ ತಮಿಳುನಾಡು ರಾಜ್ಯದ ಅಭಿವೃದ್ಧಿಯೇ ಮೊದಲ ಆದ್ಯತೆಯಾಗಿದ್ದು, ರಾಜ್ಯದ ಹಿತಾಸಕ್ತಿಗೆ ಮತ್ತು ಜನರಿಗೆ ಒಳ್ಳೆಯದಾಗುವ ಯಾವುದೇ ನಿರ್ಧಾರಗಳನ್ನು ಅದು ಎಲ್ಲಿಂದಲೇ ಬರಲಿ, ಡಿಎಂಕೆ ಮುಕ್ತವಾಗಿ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಹೇಳಿದ್ದೇನು?

ರಾಜಕೀಯದಲ್ಲಿ ಶತ್ರು ಅಥವಾ ಮಿತ್ರ ಎಂಬುದೇ ಇಲ್ಲ ಎಂದು ಅವರು ಹೇಳಿದ ನಂತರ ಈ ವಿಷಯ ಮತ್ತಷ್ಟು ಬಿಸಿಯಾಗಲು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ, ಕನಿಮೋಳಿ ಸೋಮು ಮಾಡಿದ ಹೇಳಿಕೆಯ ಬಗ್ಗೆ ಮತ್ತು ಡಿಎಂಕೆ-ಬಿಜೆಪಿ ಮೈತ್ರಿಕೂಟ ರಚನೆಯಾಗುತ್ತಿದೆಯೇ ಎಂಬ ಬಗ್ಗೆ ಬಿಜೆಪಿಯ ಮಾಜಿ ಶಾಸಕಿ ವನತಿ ಶ್ರೀನಿವಾಸನ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ರಾಜಕೀಯದಲ್ಲಿ ಶಾಶ್ವತ ಮಿತ್ರರು ಅಥವಾ ಶತ್ರುಗಳು ಇಲ್ಲ, ಅಷ್ಟೇ ಎಂದು ಹೇಳಿದ್ದಾರೆ.