ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಇರಾನ್ ನಾಯಕ ಅಲಿ ಖಮೇನಿ ನಿಧನದ ಕುರಿತ ಪ್ರತಿಭಟನೆ ಮತ್ತು ರಾಹುಲ್ ಗಾಂಧಿಯವರನ್ನು 'ಪಪ್ಪು' ಎಂದು ಕರೆದಿದ್ದಕ್ಕೆ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ನಡೆದ ತೀವ್ರ ಮಾತಿನ ಚಕಮಕಿಯಿಂದಾಗಿ ರಣರಂಗವಾಗಿ ಮಾರ್ಪಟ್ಟಿತು..

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಶುಕ್ರವಾರ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತು. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿಧನದ ವಿಚಾರ ಒಂದೆಡೆ ಪ್ರತಿಭಟನೆಗೆ ಕಾರಣವಾದರೆ, ಮತ್ತೊಂದೆಡೆ ರಾಹುಲ್ ಗಾಂಧಿ ಕುರಿತಾದ 'ಪಪ್ಪು' ಹೇಳಿಕೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದನದಲ್ಲಿ ಖಮೇನಿ ಪೋಸ್ಟರ್‌ಗಳ ಅಬ್ಬರ!

ಇತ್ತೀಚೆಗೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾದ ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಪರವಾಗಿ ನ್ಯಾಷನಲ್ ಕಾನ್ಫರೆನ್ಸ್ (NC) ಶಾಸಕರು ಸದನದೊಳಗೆ ಪೋಸ್ಟರ್ ಹಿಡಿದು ಘೋಷಣೆ ಕೂಗಿದರು.

'ನಾವು ಇರಾನ್ ಪರವಾಗಿ ನಿಲ್ಲುತ್ತೇವೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಂತೆಯೇ ನಮ್ಮ ಸರ್ಕಾರ ಮತ್ತು ನಾಗರಿಕ ಸಮಾಜ ಈ ಹತ್ಯೆಯನ್ನು ಖಂಡಿಸುತ್ತದೆ. ಯಾವುದೇ ರಾಷ್ಟ್ರಕ್ಕೆ ಮತ್ತೊಂದು ದೇಶದ ಮೇಲೆ ಇಂತಹ ದಾಳಿ ನಡೆಸುವ ಹಕ್ಕಿಲ್ಲ' ಎಂದು ಎನ್‌ಸಿ ಶಾಸಕ ತನ್ವೀರ್ ಸಾದಿಕ್ ಆಕ್ರೋಶಭರಿತರಾಗಿ ಹೇಳಿದರು.

'ಪಪ್ಪು' ಕಾಮೆಂಟ್‌ಗೆ ಹೊತ್ತಿಕೊಂಡ ಕಿಡಿ!

View post on Instagram

ಇದೇ ವೇಳೆ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿತು. ಕಾಂಗ್ರೆಸ್ ಶಾಸಕ ಇರ್ಫಾನ್ ಹಫೀಜ್ ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಯುಧ್ವೀರ್ ಸೇಥಿ, ರಾಹುಲ್ ಗಾಂಧಿಯವರನ್ನು 'ಪಪ್ಪು' ಎಂದು ಕರೆದರು. ರಾಹುಲ್‌ ಗಾಂಧಿಯವರಿಗೆ ಪಪ್ಪು ಎಂದು ಏಕವಚನ ಬಳಸಿದ್ದಕ್ಕೆ ಕೆರಳಿದ ಕಾಂಗ್ರೆಸ್ ಶಾಸಕರು ಮತ್ತು ಬಿಜೆಪಿ ನಾಯಕರ ನಡುವೆ ಸಭೆಯಲ್ಲಿ ತಳ್ಳಾಟ-ನೂಕಾಟದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಪ್ರಭಾವಿ ನಾಯಕ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದರು. ಈ ಜಾಗತಿಕ ವಿದ್ಯಮಾನವು ಇಂದು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಘಟನೆಯ ವಿಡಿಯೋ ಕೆಳಗಿದೆ