ಪುರಸಭೆಯ ನೂತನ ಅಧ್ಯಕ್ಷೆ 'ರಾಹುಕಾಲ'ದ ಕಾರಣ ನೀಡಿ ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿದರು. ಈ ಘಟನೆಯಿಂದಾಗಿ ಅಧಿಕಾರಿಗಳು ಮತ್ತು ಕಾರ್ಯಕರ್ತರು ಸುಮಾರು 45 ನಿಮಿಷ ಕಾಯಬೇಕಾಯಿತು, ಇದು ಸಾರ್ವಜನಿಕ ಸೇವೆಯಲ್ಲಿ ವೈಜ್ಞಾನಿಕ ಮನೋಭಾವದ ಚರ್ಚೆಯನ್ನು ಹುಟ್ಟುಹಾಕಿದೆ.

ಸಾರ್ವಜನಿಕ ಸೇವೆಯ ಜವಾಬ್ದಾರಿಯುತ ಸ್ಥಾನಕ್ಕೇರುವಾಗ ವೈಜ್ಞಾನಿಕ ಮನೋಭಾವ ಇರಬೇಕೇ ಅಥವಾ ವೈಯಕ್ತಿಕ ನಂಬಿಕೆಗಳೇ ಮೇಲಾಗಬೇಕೇ ಎಂಬ ಚರ್ಚೆಗೆ ಕೇರಳದ ಪೆರುಂಬಾವೂರ್ ಪುರಸಭೆಯ ಘಟನೆ ನಾಂದಿ ಹಾಡಿದೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷೆಯೊಬ್ಬರು 'ರಾಹುಕಾಲ'ದ ಹಿನ್ನೆಲೆಯಲ್ಲಿ ಕಚೇರಿ ಪ್ರವೇಶಿಸಲು ನಿರಾಕರಿಸಿದ ಕಾರಣ ಅಧಿಕಾರಿಗಳು ಮತ್ತು ಕಾರ್ಯಕರ್ತರು ಸುಮಾರು ಮುಕ್ಕಾಲು ಗಂಟೆಗಳ ಕಾಲ ಕಾಯುವಂತಾದ ವಿಲಕ್ಷಣ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ನಡೆದಿದ್ದೇನು?

ಪೆರುಂಬಾವೂರ್ ಪುರಸಭೆಯ ಅಧ್ಯಕ್ಷೆಯಾಗಿ ಯುಡಿಎಫ್ (UDF) ಮೈತ್ರಿಕೂಟದ ಕೆ.ಎಸ್. ಸಂಗೀತ ಅವರು ಇಂದು ಅಧಿಕಾರ ವಹಿಸಿಕೊಳ್ಳಬೇಕಿತ್ತು. ಬೆಳಿಗ್ಗೆ 11:15ಕ್ಕೆ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು. ನಿಯಮದಂತೆ ಪ್ರಮಾಣವಚನ ಮುಗಿದ ಕೂಡಲೇ ಅವರು ಅಧ್ಯಕ್ಷರ ಕಚೇರಿಗೆ ತೆರಳಿ ಕುರ್ಚಿಯ ಮೇಲೆ ಕುಳಿತು ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ, ಇಲ್ಲೇ ಒಂದು ಅನಿರೀಕ್ಷಿತ ಟ್ವಿಸ್ಟ್ ಎದುರಾಯಿತು.

ರಾಹುಕಾಲದ ಭಯ: 

ಪ್ರಮಾಣವಚನ ಮುಗಿದರೂ ಸಂಗೀತ ಅವರು ಕಚೇರಿಯೊಳಗೆ ಪ್ರವೇಶಿಸಲು ನಿರಾಕರಿಸಿದರು. ಕಾರಣ ಕೇಳಿದಾಗ, ‘ಈಗ ರಾಹುಕಾಲ ನಡೆಯುತ್ತಿದೆ, 12 ಗಂಟೆಯ ನಂತರವಷ್ಟೇ ಶುಭ ಘಳಿಗೆ ಇರುವುದರಿಂದ ಅಲ್ಲಿಯವರೆಗೆ ನಾನು ಕಚೇರಿಗೆ ಕಾಲಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಸಂಗೀತ ಅವರ ಈ ಹಠದಿಂದಾಗಿ ಪುರಸಭೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರಿಗೆ ಹೂಗುಚ್ಛ ನೀಡಲು ಬಂದಿದ್ದ ಪಕ್ಷದ ನೂರಾರು ಕಾರ್ಯಕರ್ತರು ಸುಮಾರು 45 ನಿಮಿಷಗಳ ಕಾಲ ಕಚೇರಿಯಲ್ಲೇ ಅಧ್ಯಕ್ಷರಿಗಾಗಿ ಕಾಯಬೇಕಾಯಿತು.

ರಾಜಕೀಯ ಚಿತ್ರಣ

ಒಟ್ಟು 29 ಸದಸ್ಯ ಬಲದ ಪೆರುಂಬಾವೂರ್ ಪುರಸಭೆಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಸಂಗೀತ ಅವರು 16 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಎಲ್‌ಡಿಎಫ್ (LDF) ಅಭ್ಯರ್ಥಿಗೆ 11 ಮತಗಳು ಲಭಿಸಿದವು. ಇಬ್ಬರು ಸದಸ್ಯರನ್ನು ಹೊಂದಿರುವ ಎನ್‌ಡಿಎ (NDA) ಚುನಾವಣೆಯಿಂದ ದೂರ ಉಳಿದಿತ್ತು.

ಕೇರಳದಂತಹ ಸಾಕ್ಷರ ರಾಜ್ಯದಲ್ಲಿ, ಪ್ರಜಾಪ್ರಭುತ್ವದ ಆಶಯದಡಿ ಅಧಿಕಾರ ಹಿಡಿದವರು ಸಂವಿಧಾನದ ಆಶಯಕ್ಕಿಂತ ಮೌಢ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. "ಜನರ ಕೆಲಸ ಮಾಡಲು ಸಮಯ ಕಾಯಬಾರದು, ಆದರೆ ಇಲ್ಲಿ ಸಮಯಕ್ಕಾಗಿ ಜನರೇ ಕಾಯುವಂತಾಗಿದೆ" ಎಂಬ ಮಾತುಗಳು ಕೇಳಿಬರುತ್ತಿವೆ.