- Home
- News
- State
- ಗ್ಯಾರಂಟಿ ಸ್ಕೀಮ್ ಅಧ್ಯಕ್ಷ ರೇವಣ್ಣ ಪುತ್ರನಿಂದ ಹಿಟ್ ಅಂಡ್ ರನ್; ಕಾರು ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು!
ಗ್ಯಾರಂಟಿ ಸ್ಕೀಮ್ ಅಧ್ಯಕ್ಷ ರೇವಣ್ಣ ಪುತ್ರನಿಂದ ಹಿಟ್ ಅಂಡ್ ರನ್; ಕಾರು ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು!
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರ ಪುತ್ರ ಶಶಾಂಕ್ ಅವರ ಕಾರು ಮಾಗಡಿ ಬಳಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಶಶಾಂಕ್ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, 'ಹಿಟ್ ಅಂಡ್ ರನ್' ಆರೋಪ ಕೇಳಿಬಂದಿದೆ.

ಗ್ಯಾರಂಟಿ ಯೋಜನೆ ಅಧ್ಯಕ್ಷರ ಮಗನಿಂಡ ಹಿಟ್ ಅಂಡ್ ರನ್
ಸರ್ಕಾರದ ಪ್ರಮುಖ 'ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ'ಯ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಅವರ ಪುತ್ರ ಶಶಾಂಕ್ ಅವರು ಗಂಭೀರ ಅಪಘಾತವೊಂದರಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.
ಕಾರಿನಿಂದ ಬೈಕ್ಗೆ ಗುದ್ದಿ ಪರಾರಿಯಾದ ಅಧ್ಯಕ್ಷರ ಮಗ
ಶಶಾಂಕ್ ಓಡಿಸುತ್ತಿದ್ದ ಫಾರ್ಚೂನರ್ ಕಾರ್, ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿ ಟೋಲ್ ಬಳಿ ನಡೆದಿದೆ. ಅಪಘಾತದ ನಂತರ ಶಶಾಂಕ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಅವರ ವಿರುದ್ಧ 'ಹಿಟ್ ಅಂಡ್ ರನ್' ಆರೋಪ ಕೇಳಿಬಂದಿದೆ.
ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವು
ನಿನ್ನೆ ರಾತ್ರಿ ಸುಮಾರು 10.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಬಿಳಗುಂಬ ಗ್ರಾಮದವರಾದ 24 ವರ್ಷದ ರಾಜೇಶ್ ಎಂಬ ಯುವಕ ಬೈಕ್ನಲ್ಲಿ ತೆರಳುತ್ತಿದ್ದಾಗ, ರೇವಣ್ಣ ಪುತ್ರ ಶಶಾಂಕ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ
ಗಂಭೀರ ಅಪಘಾತದ ನಂತರ ಶಶಾಂಕ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಕುದೂರು ಠಾಣಾ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ರಾಜೇಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಸ್ಥಳದಲ್ಲಿ ಕಾರು ಬಿಟ್ಟು ಪರಾರಿ?
ಇನ್ನು ಪೊಲೀಸರು ಅಪಘಾತಕ್ಕೆ ಕಾರಣವಾದ ಫಾರ್ಚೂನರ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಭಾವಿ ರಾಜಕಾರಣಿಯ ಪುತ್ರನಿಂದಲೇ ಇಂತಹ ಅಪಘಾತ ಸಂಭವಿಸಿ, 'ಹಿಟ್ ಅಂಡ್ ರನ್' ಆರೋಪ ಎದುರಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಧ್ಯಕ್ಷರ ಪುತ್ರನಿಂದ ನಿರ್ಲಕ್ಷ್ಯ ಆರೋಪ
ಗ್ಯಾರಂಟಿ ಯೋಜನೆಗಳಂತಹ ಪ್ರಮುಖ ಜವಾಬ್ದಾರಿಯ ಅಧ್ಯಕ್ಷರ ಪುತ್ರ ಈ ರೀತಿ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂಬ ಆರೋಪ ಎದುರಾಗಿರುವುದು ಪೊಲೀಸ್ ತನಿಖೆಯ ಮಹತ್ವವನ್ನು ಹೆಚ್ಚಿಸಿದೆ. ಕುದೂರು ಪೊಲೀಸರು ಈ ಬಗ್ಗೆ ಶೀಘ್ರವಾಗಿ ತನಿಖೆ ನಡೆಸಿ, ಸತ್ಯಾಂಶವನ್ನು ಹೊರತರಬೇಕಿದೆ.
ನನ್ನ ಮಗ ಗಾಡಿ ಓಡಿಸಿಲ್ಲ, ಡ್ರೈವರ್ ಇದ್ದನು
ನನ್ನ ಮಗ ಗಾಡಿ ಓಡಿಸಿಲ್ಲ, ಚಾಲಕ ಇದ್ದ. ಅಪಘಾತ ಆಗಿದೆ, ನನಗೂ ಅನುಕಂಪವಿದೆ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ಹೇಳಿದ್ದಾರೆ. ನಿನ್ನೆ ರಾತ್ರಿ ಗುಡೇಮಾರನಹಳ್ಳಿ ಟೋಲ್ ಬಳಿ ಅಪಘಾತ ಆಗಿದೆ. ಪೂಜೆ ಮುಗಿಸಿ ಬರುವಾಗ ಘಟನೆ ಆಗಿದೆ. ಅಪಘಾತ ಬಳಿಕ ಅಲ್ಲಿ ಗಲಾಟೆ ಆಗುತ್ತೆ ಅಂತ ಮುಂದೆ ಬಂದಿದ್ದಾರೆ.
ಕಾರನ್ನು ನನ್ನ ಮಗ ಶಶಾಂಕ್ ಓಡಿಸುತ್ತಿರಲಿಲ್ಲ. ಡ್ರೈವರ್ ಕಾರು ಓಡಿಸುತ್ತಿದ್ದರು. ಇದೇ ಕಾರಿನಲ್ಲಿ ಅವನ ಮಗು, ಪತ್ನಿ ಕೂಡ ಇದ್ದರು. ಅಪಘಾತದ ನಂತರ ಗಲಾಟೆಯ ಭಯದಿಂದ ಮುಂದೆ ಬಂದಿದ್ದಾರೆ. ಈ ಘಟನೆ ಆಗಿದ್ದಕ್ಕೆ ಕ್ಷಮೆ ಇರಲಿ. ಸಂತ್ರಸ್ತ ಕುಟುಂಬವನ್ನು ನಾನೇ ಸ್ವತಃ ಹೋಗಿ ಭೇಟಿಯಾಗಿ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
