ಬಿಆರ್ಎಸ್ ನಾಯಕನ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದೆ. 42ರ ಹರೆಯದ ಯುವ ನಾಯಕನ ಮನೆಗೆ ನುಗ್ಗಿ ವ್ಯವಸ್ಥಿತವಾಗಿ ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಹೈದರಾಬಾದ್ (ಮೇ.23) ಬಿಆರ್ಎಸ್ ನಾಯಕ 42 ಹರೆಯದ ಚಿಂತಲಪಾಟಿ ಮಧು ದುರಂತ ಅಂತ್ಯಕಂಡಿದ್ದಾರೆ. ಗೋಣಿಚೀಲದಲ್ಲಿ ನಾಯಕನ ಮೃತದೇಹ ಪತ್ತೆಯಾಗಿದೆ. ತೆಲಂಗಾಣದ ಸೂರ್ಯಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯರಕರಾಮ್ ಸ್ಟೇಜ್ ಬಳಿ ರಸ್ತೆ ಪಕ್ಕದಲ್ಲಿದ್ದ ಗೋಣಿಚೀಲ ಒಂದರಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಎಸೆಯಲಾಗಿದೆ.

ಜಿಲ್ಲೆಯ ಸೂರ್ಯಪೇಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯೆರ್ಕಾರಂ ಸ್ಟೇಜ್ ಬಳಿ ರಸ್ತೆ ಬದಿಯಲ್ಲಿ ಅನುಮಾನಾಸ್ಪದ ಗೋಣಿ ಚೀಲ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸೂರ್ಯಪೇಟೆ ಗ್ರಾಮೀಣ ಠಾಣೆಯ ಉಪ ನಿರೀಕ್ಷಕರು ಹಾಗೂ ಹಿರಿಯ ಅಧಿಕಾರಿಗಳು ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ ಬಿಆರ್ಎಸ್ ಮುಖಂಡ ಚಿಂತಲಪಾಟಿ ಮಧು ಅವರ ಮೃತದೇಹ ಪತ್ತೆಯಾಗಿದೆ.
ಮನೆಯಲ್ಲೇ ಜರುಗಿತು ಭೀಕರ ಕೃತ್ಯ
ಪೊಲೀಸ್ ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ಶುಕ್ರವಾರ ತಡರಾತ್ರಿ ಸುಮಾರು 11:30ರ ಅವಧಿಯಲ್ಲಿ ದುಷ್ಕರ್ಮಿಗಳು ಮಧು ಅವರ ಮನೆಯೊಳಗೆ ನುಗ್ಗಿ, ಅವರನ್ನು ಬೇಟೆಯಾಡಿ ಅತ್ಯಂತ ಕ್ರೂರವಾಗಿ ಕತ್ತರಿಸಿ ಕೊಂದಿದ್ದಾರೆ. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ದೇಹವನ್ನು ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದು, ಶನಿವಾರ ಮುಂಜಾನೆ 3:00 ಗಂಟೆಯ ಸುಮಾರಿಗೆ ಯೆರ್ಕಾರಂ ಹೆದ್ದಾರಿ ಬಳಿ ತಂದು ಬಿಸಾಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸೂರ್ಯಪೇಟೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಕೊಲೆಯಾದ ಚಿಂತಲಪಾಟಿ ಮಧು ಅವರ ಪತ್ನಿ ಬಿಆರ್ಎಸ್ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದು, ಹಳ್ಳಿಯ ಮಾಜಿ ಸರಪಂಚ್ ಆಗಿ ಸೇವೆ ಸಲ್ಲಿಸಿದ್ದರು. ಈ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಸೂರ್ಯಪೇಟೆ ಜಿಲ್ಲೆಯಾದ್ಯಂತ ಭಾರಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಬಿಆರ್ಎಸ್ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ವೈಷಮ್ಯ ಮತ್ತು 20 ವರ್ಷಗಳ ಹಳೇ ದ್ವೇಷ
ಈ ಭೀಕರ ಹತ್ಯೆಯ ಹಿಂದೆ ದಶಕಗಳ ಹಳೆಯ ರಾಜಕೀಯ ದ್ವೇಷ ಹಾಗೂ ಬಣ ರಾಜಕಾರಣ ಅಡಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನರಸಿಂಹ ಗೌಡ್ ತಿಳಿಸಿದ್ದಾರೆ. ಕೊಲೆಯಾದ ಮಧು ಹಿನ್ನೆಲೆಯೂ ಅಪರಾಧ ಕೃತ್ಯಗಳಿಂದ ಕೂಡಿದ್ದು, ಇವರು ಈ ಹಿಂದೆ ಇದೇ ಗ್ರಾಮದ ಮಾಜಿ ಸರಪಂಚ್ ರವೀಂದರ್ ಎಂಬುವವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು.


