ಮಧ್ಯಪ್ರದೇಶದ ಸಾಗರ್‌ನಲ್ಲಿ, ಬಿಜೆಪಿ ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಪುತ್ರಿ ಪ್ರಿಯಾಂಕಾ, ರಾಜೇಶ್ ಶರ್ಮಾ ಎಂಬ ಯುವಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ರಾಜಕೀಯ ದ್ವೇಷವೇ ಹಲ್ಲೆಗೆ ಕಾರಣ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

ಸಾಗರ್ (ಏ.14): ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ದೇವರಿ ಕ್ಷೇತ್ರದ ಬಿಜೆಪಿ ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಪುತ್ರಿ ಪ್ರಿಯಾಂಕಾ ಪಟೇರಿಯಾ ವಿರುದ್ಧ ಹಲ್ಲೆಯ ಗಂಭೀರ ಆರೋಪ ಕೇಳಿಬಂದಿದೆ. ಯುವಕನೊಬ್ಬನ ಮೇಲೆ ಪ್ರಿಯಾಂಕಾ ಚಪ್ಪಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಜಮುನಿಯಾ ಗ್ರಾಮದ ನಿವಾಸಿ ರಾಜೇಶ್ ಶರ್ಮಾ ಎಂಬುವವರು ಈ ಬಗ್ಗೆ ಗೌರ್ಝಾಮರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂತ್ರಸ್ತ ರಾಜೇಶ್ ಶರ್ಮಾ ಸೋಮವಾರ ಗೌರ್ಝಾಮರ್ ಪ್ರದೇಶದ ಬ್ಯಾಂಕ್‌ಗೆ ತೆರಳಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬಂದು "ಶಾಸಕರ ಮಗಳು ಪ್ರಿಯಾಂಕಾ ನಿಮ್ಮನ್ನು ಹೊರಗೆ ಕರೆಯುತ್ತಿದ್ದಾರೆ" ಎಂದು ತಿಳಿಸಿದ್ದಾನೆ. ರಾಜೇಶ್ ಬ್ಯಾಂಕ್‌ನಿಂದ ಹೊರಬರುತ್ತಿದ್ದಂತೆ, ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತಿದ್ದ ಪ್ರಿಯಾಂಕಾ ಪಟೇರಿಯಾ ಆತನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಯುವಕನಿಗೆ ಮನಬಂದಂತೆ ಹೊಡೆದಿದ್ದಾರೆ. ಈ ವೇಳೆ ಪ್ರಿಯಾಂಕಾ "ನೀನು ನನ್ನ ತಂದೆಯ ವಿರುದ್ಧ ಕೆಲಸ ಮಾಡುತ್ತಿದ್ದೀಯಾ" ಎಂದು ಕಿರುಚಾಡುತ್ತಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ಪ್ರಿಯಾಂಕಾ ಪಟೇರಿಯಾ ನೀಡಿದ ಸ್ಪಷ್ಟನೆ ಏನು?

ತಮ್ಮ ಮೇಲಿನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಪಟೇರಿಯಾ, "ಸಂಬಂಧಿತ ಯುವಕ ನನ್ನ ಕಾರನ್ನು ಬೆನ್ನಟ್ಟುತ್ತಿದ್ದ. ಆತನಿಂದ ನನಗೆ ಪ್ರಾಣಭಯ ಉಂಟಾಯಿತು, ಈ ಕಾರಣದಿಂದಲೇ ರಕ್ಷಣೆಗಾಗಿ ಸಿಟ್ಟಿನಲ್ಲಿ ನಾನು ಅಂತಹ ಹೆಜ್ಜೆ ಇಡಬೇಕಾಯಿತು" ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನು ರಾಜೇಶ್ ಶರ್ಮಾ ಅವರು ಜನಪದ ಅಧ್ಯಕ್ಷ ಪ್ರತಿನಿಧಿಯಾಗಿರುವ ವಿನೀತ್ ಪಟೇರಿಯಾ ಅವರ ಆಪ್ತರಾಗಿದ್ದಾರೆ. ವಿನೀತ್ ಪಟೇರಿಯಾ ಅವರು ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಸ್ವಂತ ಸಹೋದರ. ಈ ಎರಡೂ ಕುಟುಂಬಗಳ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ರಾಜೇಶ್ ಶರ್ಮಾ ಅವರು ಶಾಸಕರ ಸಹೋದರನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸಿಟ್ಟಿನಿಂದ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ರಾಜೇಶ್ ಶರ್ಮಾ ದೂರು ನೀಡಿದ್ದಾರೆ. ಆದರೆ ಪ್ರಕರಣ ಶಾಸಕರ ಮಗಳಿಗೆ ಸಂಬಂಧಿಸಿದ್ದಾದ್ದರಿಂದ ಪೊಲೀಸರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. "ಪ್ರಕರಣದ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ, ಪ್ರಭಾವಿ ರಾಜಕೀಯ ಕುಟುಂಬವಾದ್ದರಿಂದ ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಸಂತ್ರಸ್ತರು ಆತಂಕ ವ್ಯಕ್ತಪಡಿಸಿದ್ದಾರೆ.

Scroll to load tweet…