ಅಣ್ಣಾಡಿಎಂಕೆ ಬೆಂಬಲದಿಂದ ರಾಜ್ಯಸಭೆಯಲ್ಲಿ ಎನ್‌ಡಿಎ ಬಲ 130ಕ್ಕೆ ಏರಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೈನಾರ್‌ ಆಯ್ಕೆಯಾಗಿದ್ದು, ಅಣ್ಣಾ ಡಿಎಂಕೆ ಬಿಜೆಪಿಗೆ ಶರಣಾಗಿರುವುದನ್ನು ಸ್ಟಾಲಿನ್ ಟೀಕಿಸಿದ್ದಾರೆ.

ನವದೆಹಲಿ: ಅಣ್ಣಾಡಿಎಂಕೆ ಬೆಂಬಲದಿಂದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಲ 130ಕ್ಕೆ ಹೆಚ್ಚಿದೆ. ರಾಜ್ಯಸಭೆಯ ಒಟ್ಟು ಬಲ 245 ಆಗಿದ್ದು, ಅದರಲ್ಲಿ 9 ಸ್ಥಾನಗಳು ಖಾಲಿ ಇವೆ. ಇದರರ್ಥ ಈಗ 236 ಸದಸ್ಯರು ಮಾತ್ರ ಇದ್ದು, ಬಹುಮತಕ್ಕೆ 119 ಸ್ಥಾನ ಸಾಕು. ಈವರಗೆ ಎನ್‌ಡಿಎ 127 ಬಲವನ್ನು ಹೊಂದಿತ್ತು. ಈಗ ಎಐಎಡಿಎಂಕೆಯ ಮೂವರು ಸಂಸದರಾದ ಸಿ.ವಿ. ಷಣ್ಮುಗಂ, ಎಂ. ತಂಬಿದುರೈ ಮತ್ತು ಎನ್. ಚಂದ್ರಶೇಖರನ್ ಸೇರ್ಪಡೆಯೊಂದಿಗೆ, ಬಿಜೆಪಿ ಕೂಟದ ಬಲ 130ಕ್ಕೆ ಹಿಗ್ಗಿದೆ. ಈ ಪೈಕಿ 123 ಚುನಾಯಿತ ಸದಸ್ಯರಿದ್ದರೆ, ಮಿಕ್ಕ 7 ಜನ ನಾಮನಿರ್ದೇಶಿತರು.

Add Asianetnews Kannada as a Preferred SourcegooglePreferred

ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೈನಾರ್‌ ಆಯ್ಕೆ
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಸಂಸದ ನೈನಾರ್‌ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕ, ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಂಗ್‌ ಅವರು ಘೋಷಿಸಿದ್ದಾರೆ.

ಈ ವೇಳೆ ಮಾತನಾಡಿದ ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ‘2026ರ ವಿಧಾನಸಭೆ ಚುನಾವಣೆಯಲ್ಲಿ ದುಷ್ಟಶಕ್ತಿಯಾದ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವುದು ನಮ್ಮ ಗುರಿಯಾಗಿದೆ. ಅಣ್ಣಾ ಡಿಎಂಕೆ ಜೊತೆಗಿನ ಮೈತ್ರಿ ಮತ್ತು ನಾಗೇಂದ್ರನ್ ಅವರ ಆಯ್ಕೆ ಸರ್ವಾನುಮತದಿಂದ ಕೂಡಿದೆ’ ಎಂದರು. ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಗೆ ಅನುಕೂಲವಾಗಲೆಂದೇ ಅಣ್ಣಾಮಲೈ ಅವರು ರಾಜ್ಯಾಧ್ಯಕ್ಷ ಸ್ಥಾನವನ್ನು ತೊರೆದಿದ್ದರು.

ಇದನ್ನೂ ಓದಿ: ಸುಪ್ರೀಂ ಹೊಸ ಇತಿಹಾಸ: ಮಸೂದೆಗೆ ಸಹಿ ಹಾಕಲು ರಾಷ್ಟ್ರಪತಿಗೂ ಡೆಡ್‌ಲೈನ್

ಬಿಜೆಪಿಗೆ ಶರಣಾದ ಅಣ್ಣಾ ಡಿಎಂಕೆ ‘ಗುಲಾಮ’: ಸ್ಟಾಲಿನ್‌ ಟೀಕೆ
ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, ಅಣ್ಣಾ ಡಿಎಂಕೆ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಟೀಕಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ‘ಎಐಎಡಿಎಂಕೆ ಹಳೆಯ ಗುಲಾಮರ ಶಿಬಿರ’ ಎಂದಿದ್ದಾರೆ.

‘ಹಳೆಯ ಗುಲಾಮ ಶಿಬಿರವಾಗಿರುವ ಎಐಎಡಿಎಂಕೆ ಬಹಳ ಹಿಂದಿನಿಂದಲೂ ಬಿಜೆಪಿಗೆ ಶರಣಾಗುತ್ತಿದೆ. ಅತ್ತ ಬಿಜೆಪಿ, ತನ್ನ ಪಿತೂರಿಗಳನ್ನು ಜಾರಿಗೆ ತರಲು ಅದನ್ನು ಬೆದರಿಸಿ ಒತ್ತಾಯಿಸುತ್ತಿದೆ. ಅಧಿಕಾರದಾಸೆಯಿಂದ ಈ ಮೈತ್ರಿಯಾಗಿದೆ’ ಎಂದು ಅವರು ಟೀಕಿಸಿದ್ದಾರೆ.

ಅಣ್ಣಾ ಡಿಎಂಕೆಯ ಸಿದ್ಧಾಂತಗಳನ್ನು ಪ್ರಶ್ನಿಸಿದ ಸ್ಟಾಲಿನ್‌, ‘ಅವರು ನೀಟ್‌, ಹಿಂದಿ ಹೇರಿಕೆ, ತ್ರಿಭಾಷಾ ಸೂತ್ರ, ವಕ್ಫ್‌ ಕಾಯ್ದೆ, ಕ್ಷೇತ್ರ ಮರುವಿಂಗಡಣೆಯಿಂದ ರಾಜ್ಯದ ಪ್ರಾತಿನಿಧ್ಯ ಕುಸಿತವನ್ನು ವಿರೋಧಿಸುತ್ತೇವೆ ಎಂದರು. ಆದರೆ ಚೆನ್ನೈಗೆ ಬಂದಿದ್ದ ಅಮಿತ್‌ ಶಾ ಅವುಗಳ ಬಗ್ಗೆ ಮಾತನಾಡಲಿಲ್ಲ. ಎಐಎಡಿಎಂಕೆ ನಾಯಕರಿಗೂ ಮಾತಾಡಲು ಬಿಡಲಿಲ್ಲ’ ಎಂದರು. ಅಂತೆಯೇ, ‘ಈ ಮೈತ್ರಿಯ ಸೋಲು ಖಚಿತ’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಗೌರ್ನರ್‌ ಸಹಿ ಇಲ್ಲದಿದ್ರೂ ತಮಿಳುನಾಡಿನಲ್ಲಿ 10 ಬಿಲ್ ಜಾರಿ: ದೇಶದಲ್ಲಿ ಇದೇ ಮೊದಲು!