ಅಯೋಧ್ಯೆ ರಾಮಮಂದಿರದ ಶೌಚಾಲಯದಲ್ಲಿ ಸಿಕ್ಕ 40,000 ರೂ. ಹಣದಿಂದ ದೇಗುಲದ ಹುಂಡಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು 80 ಲಕ್ಷ ರೂ. ವಶಪಡಿಸಿಕೊಂಡು ಎಂಟು ಮಂದಿಯನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿ ವಹಿಸಿಕೊಂಡಿದೆ.

ಅಯೋಧ್ಯೆ (ಜು.18): ಅಯೋಧ್ಯೆ ರಾಮಮಂದಿರ(Ayodhya Ram mandir)ದಲ್ಲಿನ ಹುಂಡಿ ಹಣ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ದೇಗುಲದ ಭದ್ರತಾ ಸಿಬ್ಬಂದಿಯೊಬ್ಬರಿಗೆ ಶೌಚಾಲಯದಲ್ಲಿ ಸಿಕ್ಕ 40000 ರು. ಹಣದಿಂದ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಣ ಪತ್ತೆಯಾದ ಬೆನ್ನಲ್ಲೇ ದೇಗುಲದ ಆಡಳಿತ ಮಂಡಳಿ ಅಲರ್ಟ್‌ ಆದ ಕಾರಣ ಕಳ್ಳತನವಾಗಿದ್ದ 80 ಲಕ್ಷ ರು. ಹಣವನ್ನು ಪೊಲೀಸರ ಮುಖಾಂತರ ಕೇವಲ 17 ಗಂಟೆಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿಗಳು ತಿಳಿಸಿವೆ

ಶೌಚಾಲಯದೊಳಗೆ ಕಂತೆ ಕಂತೆ ನೋಟು!

ಮೇ ತಿಂಗಳ ಕೊನೆಯ ವಾರ ದೇಗುಲದ ಶೌಚಾಲಯದಲ್ಲಿ ನೋಟುಗಳ ಕಂತೆ ಅಡಗಿಸಿಟ್ಟಿರುವುದು ಗಾರ್ಡ್‌ ಕಣ್ಣಿಗೆ ಬಿತ್ತು. ತಕ್ಷಣ ಗಾರ್ಡ್‌ ಈ ಕುರಿತು ದೇಗುಲದ ಟ್ರಸ್ಟ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಟ್ರಸ್ಟ್‌ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾಥಮಿಕ ಆಂತರಿಕ ತನಿಖೆ ನಡೆಸಿದ್ದು, ತರುವಾಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಪೊಲೀಸರು ದೇಗುಲದ ದೇಣಿಗೆ ಕೌಂಟರ್‌ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ಬಳಿಕ ಹಲವೆಡೆ ದಾ‍‍ಳಿ ನಡೆಸಿದರು. ಅಯೋಧ್ಯೆ ಮತ್ತು ಉತ್ತರಪ್ರದೇಶದ ಹಲವೆಡೆ ಪೊಲೀಸರು 80 ಲಕ್ಷ ರು.ಗಳನ್ನು ವಶಕ್ಕೆ ಪಡೆದರು. ಜತೆಗೆ ಎಂಟು ಮಂದಿ ಆರೋಪಿಗಳನ್ನೂ ಬಂಧಿಸಿದ್ದು, ಅವರು ನೀಡಿದ ಮಾಹಿತಿ ಆಧರಿಸಿ ಇನ್ನಷ್ಟು ಆಭರಣಗಳು, ಹಣವನ್ನು ವಶಕ್ಕೆ ಪಡೆಯಲಾಯಿತು.

ಈ ವೇಳೆ ಟ್ರಸ್ಟ್ ಕೂಡ 21 ಮಂದಿಯ ತಂಡವನ್ನು ರಚಿಸಿ ಡೊನೇಷನ್‌ ಕೌಂಟರ್‌ನ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿತು. ಪೊಲೀಸರ ಜತೆಗೂ ಸಮನ್ವಯ ಸಾಧಿಸಿ ತನಿಖೆಗೆ ಸಹಕರಿಸಿತು. ಇದಾದ ನಂತರವೇ ಪೊಲೀಸರು ಅಧಿಕೃತವಾಗಿ ಕ್ರಿಮಿನಲ್‌ ತನಿಖೆ ಆರಂಭಿಸಿದರು. ಆ ಬಳಿಕ ಪ್ರಕರಣದ ತನಿಖೆಯನ್ನು ಎಸ್‌ಐಟಿ ವಹಿಸಿಕೊಂಡಿತು.

ಅಯೋಧ್ಯೆ ಹುಂಡಿ ಹಣ ಲೂಟಿ: ನಾಡಿದ್ದು ಮಧ್ಯಂತರ ವರದಿ

ಲಖನೌ: ಅಯೋಧ್ಯೆ ರಾಮಮಂದಿರದ ಹುಂಡಿ ಲೂಟಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಸುಪ್ರೀಂಕೋರ್ಟ್‌ಗೆ ತನ್ನ ಮಧ್ಯಂತರ ವರದಿ ಸಲ್ಲಿಸುವ ಸಾಧ್ಯತೆಯಿದೆ. ದೇಣಿಗೆ ಲೂಟಿ ಪ್ರಕರಣದ ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ವೇಳೆ ನ್ಯಾಯಾಲಯ ವಸ್ತು ಸ್ಥಿತಿ ವರದಿ ಕೇಳಿತ್ತು. ಅದನ್ನೀಗ ನೀಡಲು ಎಸ್‌ಐಟಿ ಮುಂದಾಗಿದೆ. ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡವು, ತನಿಖೆಗೆ ಇನ್ನಷ್ಟು ಸಮಯ ಕೋರಿ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದೇಗುಲ ಶುದ್ಧೀಕರಣ

ಅಯೋಧ್ಯೆ: ರಾಮ ಮಂದಿರದಲ್ಲಿ ನಡೆದ ಇತ್ತೀಚಿನ ದೇಣಿಗೆ ವಿವಾದಗಳ ನಡುವೆ ದೇವಸ್ಥಾನ ಮಂಡಳಿಯು ಪ್ರಾಯಃಶ್ಚಿತದ ಭಾಗವಾಗಿ 10 ದಿನಗಳ ಕಾಲ ದೇವಸ್ಥಾನದ ಶುದ್ಧೀಕರಣ ಕಾರ್ಯ ಕೈಗೊಂಡಿದೆ