ತಮಿಳುನಾಡು ಸರ್ಕಾರದ ಚೈನೀಸ್ ಪ್ರೀತಿಗೆ ಬಿಜೆಪಿ ತಿರುಗೇಟು: ಚೀನಿ ಭಾಷೆಯಲ್ಲಿ ಸಿಎಂಗೆ ಬರ್ತ್ಡೇ ವಿಶ್
ಇತ್ತೀಚೆಗೆ ಇಸ್ರೋ ಉಪಗ್ರಹ ಉಡಾವಣೆ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದ ಜಾಹೀರಾತು ನೀಡುವ ವೇಳೆ ಇಸ್ರೋ ರಾಕೆಟ್ ಮೇಲೆ ಚೀನಾ ಧ್ವಜವಿರುವಂತಹ ಜಾಹೀರಾತು ನೀಡಿ ಎಡವಟ್ಟು ಮಾಡಿದ ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ಬಿಜೆಪಿ ಅವರದೇ ರೀತಿಯಲ್ಲಿ ತಿರುಗೇಟು ನೀಡಿದೆ.
ಚೆನ್ನೈ: ಇತ್ತೀಚೆಗೆ ಇಸ್ರೋ ಉಪಗ್ರಹ ಉಡಾವಣೆ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದ ಜಾಹೀರಾತು ನೀಡುವ ವೇಳೆ ಇಸ್ರೋ ರಾಕೆಟ್ ಮೇಲೆ ಚೀನಾ ಧ್ವಜವಿರುವಂತಹ ಜಾಹೀರಾತು ನೀಡಿ ಎಡವಟ್ಟು ಮಾಡಿದ ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ಬಿಜೆಪಿ ಅವರದೇ ರೀತಿಯಲ್ಲಿ ತಿರುಗೇಟು ನೀಡಿದೆ. ಇಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ಡಿಎಂಕೆ ಹಿರಿಯ ನಾಯಕನಿಗೆ ಬಿಜೆಪಿ ಮಂದಾರಿಯನ್ ಅಂದರೆ ಚೀನಾ ಭಾಷೆಯಲ್ಲಿ ವಿಶ್ ಮಾಡುವ ಮೂಲಕ ಕಾಲೆಳೆದಿದೆ.
ತಮಿಳುನಾಡು ಬಿಜೆಪಿ ಪರವಾಗಿ ತಮಿಳುನಾಡಿನ ಗೌರವನ್ವಿತ ಸಿಎಂ ತಿರು ಎಂ.ಕೆ. ಸ್ಟಾಲಿನ್ ಅವರಿಗೆ ಅವರ ಇಷ್ಟದ ಭಾಷೆಯಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಅವರಿಗೆ ದೀರ್ಘ ಆಯುಷ್ಯ ಆರೋಗ್ಯದಿಂದ ಬಾಳಲಿ ಎಂದು ಬರೆದು ವಿಶ್ ಮಾಡಿರುವ ತಮಿಳುನಾಡು ಬಿಜೆಪಿಯ ಟ್ವಿಟ್ಟರ್ ಪೇಜ್, ಕೆಳಗೆ ಸ್ಟಾಲಿನ್ ಫೋಟೋವನ್ನು ಹಾಕಿದ್ದಾರೆ. ಅದರಲ್ಲಿ ಚೀನಾದ ಮಂದಾರಿಯನ್ ಭಾಷೆಯಲ್ಲಿ ಸಿಎಂ ಸ್ಟಾಲಿನ್ ಅವರಿಗೆ ವಿಶ್ ಮಾಡಲಾಗಿದೆ. ವೈರಲ್ ಆದ ಸ್ವಲ್ಪ ಹೊತ್ತಿನಲ್ಲೇ ಈ ಪೋಸ್ಟನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದರ ಜೊತೆ ಕೆಳಭಾಗದಲ್ಲಿ ಯಾರು ತಮಿಳುನಾಡು ಸಿಎಂ ಅವರಿಗೆ ಮಂದರಿಯನ್ ಭಾಷೆಯಲ್ಲಿ ವಿಶ್ ಮಾಡಲು ಬಯಸುವಿರೋ ಅವರೆಲ್ಲಾ ಸಿಎಂ ಅವರಿಗೆ ಈ ಕೆಳಗೆ ಇರುವ ಮಂದರಿಯನ್ ಭಾಷೆಯ ಶುಭಾಶಯವನ್ನು ಬಳಸಿಕೊಳ್ಳಿ ಎಂದು ಪೋಸ್ಟ್ ಮಾಡಿದೆ.
ಇಸ್ರೋ ಉಪಗ್ರಹ ಮೇಲೆ ಚೀನಾ ಧ್ವಜ, ಡಿಎಂಕೆ ಜಾಹೀರಾತು ಬಂಡವಾಳ ಬಯಲು ಮಾಡಿದ ಅಣ್ಣಾಮಲೈ!
ಎರಡು ದಿನದ ಹಿಂದಷ್ಟೇ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ದೇಶದ 2ನೇ ರಾಕೆಟ್ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ಶಂಕು ಸ್ಥಾಪನೆ ನೆರವೇರಿಸಿದರು. ತಮಿಳುನಾಡಿನಲ್ಲಿ ಈ ಇಸ್ರೋ ಉಡಾವಣಾ ಕೇಂದ್ರದ ಸ್ಥಾಪನಾ ಕಾರ್ಯ ಆದುದ್ದರಿಂದ ತಮಿಳುನಾಡು ಸರ್ಕಾರ ಇಸ್ರೋ ಉಪಗ್ರಹ ಉಡಾವಣೆ ಕೇಂದ್ರದ ಶಿಲನ್ಯಾಸದ ಕುರಿತು ಪತ್ರಿಕಾ ಜಾಹೀರಾತು ನೀಡಿತ್ತು. ಆದರೆ ಈ ಜಾಹೀರಾತಿನಲ್ಲಿ ಇಸ್ರೋ ಉಪಗ್ರಹದ ಮೇಲೆ ಚೀನಾ ಧ್ವಜವನ್ನು ಪ್ರಕಟಿಸಲಾಗಿತ್ತು. ಇದಕ್ಕೆ ಬಿಜೆಪಿ ಸೇರಿದಂತೆ ವಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು.
ಡಿಎಂಕೆ ಸರ್ಕಾರ ಅತ್ತ ಈ ಈ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳಲು ಆಗದೆ, ಇತ್ತ ಉತ್ತರ ನೀಡಲೂ ಆಗದೆ ಪೇಚಿಗೆ ಸಿಲುಕಿತ್ತು. ಡಿಎಂಕೆ ಸಚಿವೆ ಅನಿತಾ ರಾಧಾಕೃಷ್ಣನ್ ಈ ಜಾಹೀರಾತನ್ನು ನೀಡಿದ್ದರು. ಇಲ್ಲಿ ಬಳಸಿರುವ ಚಿತ್ರಗಳು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಚಿತ್ರವನ್ನು ಪ್ರಕಟಿಸಲಾಗಿದೆ. ಜೊತೆಗೆ ಈ ಚಿತ್ರದ ಹಿಂಭಾಗದಲ್ಲಿ ಉಪಗ್ರಹ ನೌಕೆ ಫೋಟೋವನ್ನು ಬಳಸಲಾಗಿದೆ. ದೊಡ್ಡದಾಗಿ ಚಿತ್ರಿಸಿರುವ ಉಪಗ್ರಹದ ಫೋಟೋ ಮೇಲೆ ಚೀನಾ ಧ್ವಜ ಬಳಸಲಾಗಿದೆ.
ಕುಲಶೇಖರಪಟ್ಟಿಣಂನಲ್ಲಿ ಇಂದು ಇಸ್ರೋದ 2ನೇ ಉಡ್ಡಯನ ಕೇಂದ್ರಕ್ಕೆ ಪ್ರಧಾನಿ ಶಂಕುಸ್ಥಾಪನೆ
ತಮಿಳುನಾಡು ಸರ್ಕಾರದ ಈ ನಡೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇಸ್ರೋ ದೇಶದ ಎರಡನೇ ಉಡಾವಣೆ ಕೇಂದ್ರವನ್ನು ತಮಿಳುನಾಡಿನ ಕುಲಶೇಖರಪಟ್ಟಣದಲ್ಲಿ ನಿರ್ಮಿಸುವುದಾಗಿ ಘೋಷಣೆಯಾದ ಬೆನ್ನಲ್ಲೇ ಡಿಎಂಕೆ ತನ್ನ ಭ್ರಷ್ಟಾಚಾರ, ದುರಾಡಳಿತ ಮುಚ್ಚಿಕೊಳ್ಳಲು ಈ ರೀತಿಯ ಸ್ಟಿಕ್ಕರ್ ಅಂಟಿಸುತ್ತಿದೆ ಎಂದು ಅಣ್ಣಾಮಲೈ ಹೇಳಿದ್ದರು.
ಡಿಎಂಕೆ ಸರ್ಕಾರ ಹಾಗೂ ಪಕ್ಷ ಹತಾಶೆಯಲ್ಲಿದೆ. ಹಿಂದೆ ಮಾಡಿರುವ ದುಷ್ಕೃತ್ಯಗಳು, ದುರಾಡಳಿತ, ಭ್ರಷ್ಟಾಚಾರ ಆಳ್ವಿಕೆಯನ್ನು ಮುಚ್ಚಿಹಾಕುವ ಪ್ರಯತ್ನದ ಫಲವಾಗಿ ಇಂತಹ ಜಾಹೀರಾತುಗಳು ಪ್ರಕಟಗೊಳ್ಳುತ್ತಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರ ಆಂಧ್ರಪ್ರದೇಶದಲ್ಲಿ ಏಕಿದೆ? ತಮಿಳುನಾಡಿನಲ್ಲಿ ಏಕಿಲ್ಲ ಅನ್ನೋದರ ಇತಿಹಾಸವನ್ನೂ ಡಿಎಂಕೆಗೆ ನೆನಪಿಸಬೇಕಾಗುತ್ತದೆ ಎಂದು ಅಣ್ಣಾಮಲೈ ಹೇಳಿದ್ದರು.