ಆರೋಪಿಗಳು ಪರಾರಿ: ಮನೆಯಲ್ಲಿದ್ದ ಗಿಣಿಯ ವಿಚಾರಿಸಿದ ಪೊಲೀಸರು..!
ಅಕ್ರಮ ಮದ್ಯ ತಯಾರಿಸುತ್ತಿರುವ ಖದೀಮರು ಕೈಗೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಮನೆಯಲ್ಲಿದ್ದ ಗಿಳಿಯೊಂದನ್ನು ವಿಚಾರಣೆ ನಡೆಸಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರ: ಬಿಹಾರದಲ್ಲಿ ಸರಾಯಿಯನ್ನು ಸರ್ಕಾರ ನಿಷೇಧಿಸಿದ್ದು, ಇದರಿಂದ ಅಕ್ರಮವಾಗಿ ಮದ್ಯ ತಯಾರಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಕ್ರಮ ಮದ್ಯ ಮಾಫಿಯಾವನ್ನು ಹೆಡೆಮುರಿ ಕಟ್ಟುವುದು ಪೊಲೀಸರ ಪಾಲಿಗೆ ದೊಡ್ಡ ತಲೆನೋವಾಗಿದೆ. ಮದ್ಯ ತಯಾರಿಸುವವರು ಚಾಲಾಕಿತನ ಪ್ರದರ್ಶಿಸುತ್ತಿದ್ದು, ಇದರಿಂದ ಪೊಲೀಸರ ನಿದ್ದೆಗೆಟ್ಟಿದೆ. ಅಕ್ರಮ ಮದ್ಯ ತಯಾರಿಗೆ ಸಂಬಂಧಿಸಿದಂತೆ ದಾಳಿ ನಡೆಸಲು ಹೋದ ವೇಳೆ ಕಳ್ಳರು ಪೊಲೀಸರ ಕೈಗೆ ಸಿಗದೇ ಪರಾರಿಯಾಗುತ್ತಿದ್ದಾರೆ. ಅಕ್ರಮ ಮದ್ಯ ತಯಾರಿಸುತ್ತಿರುವ ಖದೀಮರು ಕೈಗೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಮನೆಯಲ್ಲಿದ್ದ ಗಿಳಿಯೊಂದನ್ನು ವಿಚಾರಣೆ ನಡೆಸಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ (Bihar) ಗಯಾದಲ್ಲಿ (Gaya) ಈ ಘಟನೆ ನಡೆದಿದೆ. ಅಕ್ರಮ ಮದ್ಯ ಮಾರಾಟ ಹಾಗೂ ತಯಾರಿಯ ಸುಳಿವು ಸಿಕ್ಕ ಪೊಲೀಸರು ಆರೋಪಿಯ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರ ದಾಳಿಯ ಬಗ್ಗೆ ಮೊದಲೇ ಸುಳಿವು ಪಡೆದಿದ್ದ ಆರೋಪಿಗಳು ಮನೆಯಲ್ಲಿದ್ದ ತಮ್ಮ ಗಿಳಿಯನ್ನು ಅಲ್ಲೇ ಬಿಟ್ಟು ಇಡೀ ಮನೆಮಂದಿಯೆಲ್ಲಾ ಮನೆಯಿಂದ ಪರಾರಿಯಾಗಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಸಬ್ ಇನ್ಸ್ಪೆಕ್ಟರ್ ಕನ್ಹಯ್ಯಾ ಕುಮಾರ್ (Kanhaia Kumar) ಜೊತೆ ಗುರುವಾ ಪೊಲೀಸ್ ಠಾಣೆಯ ಪೊಲೀಸ್ ತಂಡ ಆರೋಪಿ ಅಮ್ರಿತ್ ಮಲ್ಹಾ (Amrith mllha) ಎಂಬಾತನನ್ನು ಬಂಧಿಸಲು ಹೋಗಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆ ಆರೋಪಿ ಸೇರಿದಂತೆ ಮನೆ ಮಂದಿಯೆಲ್ಲಾ ಸ್ಥಳದಿಂದ ಪರಾರಿಯಾಗಿದ್ದಾರೆ.
ಮದಿರೆಯ ನಶೆಯಲ್ಲಿ ಊರಿಗೆ ಊರೇ ಸುಸ್ತು: ಬೋರ್ವೆಲ್ ಜಗ್ಗಿದ್ರೂ ಶರಾಬು ಬಂತು
ಗೂಡೊಂದರಲ್ಲಿದ್ದ ಗಿಳಿಯ (Parrot) ಹೊರತಾಗಿ ಇಡೀ ಮನೆ ಮಂದಿಯೇ ಸ್ಥಳದಿಂದ ಜೂಟ್ ಹೇಳಿದ್ದಾರೆ. ಮನೆಯಲ್ಲಿ ಯಾರನ್ನು ಪತ್ತೆ ಮಾಡಲು ವಿಫಲರಾದ ಪೊಲೀಸರನ್ನು ಗೂಡಿನಲ್ಲೇ ಬೊಬ್ಬೆ ಹೊಡೆಯುತ್ತಿದ್ದ ಗಿಳಿಯ ಸದ್ದು ಸೆಳೆದಿದ್ದು, ಗಿಳಿಯ ಪಂಜರದತ್ತ (Cage) ಬಂದ ಪೊಲೀಸರು ಮನೆ ಮಂದಿಯ ಬಗ್ಗೆ ಗಿಳಿ ಏನಾದರೂ ಸುಳಿವು ನೀಡಬಹುದೇ ಎಂಬ ಕುತೂಹಲದಿಂದ ಗಿಳಿಯ ಬಳಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಉತ್ತರ ಮಾತ್ರ ಸಿಕ್ಕಿಲ್ಲ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೆ ತೊತ್ವ ಕಹಾ ಗಯೇ ತುಮ್ಹಾರಾ ಮಾಲೀಕ್( ಹೆಲೋ ಗಿಳಿಯೇ ನಿನ್ನ ಮಾಲೀಕ ಎಲ್ಲಿ ಹೋಗಿದ್ದಾನೆ)? ಅಮೃತ್ ಮಲ್ಹಾ ಕಹಾಂ ಗಯೆ( ಅಮೃತ್ ಮಲ್ಹಾ ಎಲ್ಲೋಗಿದ್ದಾನೆ) ನಿನ್ನೊಬ್ಬನನ್ನು ಇಲ್ಲಿ ಬಿಟ್ಟು ಎಲ್ಲರೂ ಎಲ್ಲಿ ಹೋಗಿದ್ದಾರೆ ಎಂದು ಎಸ್ ಐ ಕನ್ಹಯ್ಯಕುಮಾರ್ ಗಿಳಿಯನ್ನು ಪ್ರಶ್ನಿಸಿದ್ದಾರೆ. ಆದರೆ ಗಿಳಿ ಮಾತ್ರ ಇವರ ಯಾವ ಪ್ರಶ್ನೆಗೂ ಉತ್ತರಿಸದೇ ಮೌನವಾಗಿದೆ.
Uttarakannada: ಗೋವಾದಿಂದ ಕೋಟಿಗಟ್ಟಲೆ ಮೌಲ್ಯದ ಅಕ್ರಮ ಮದ್ಯ ಸಾಗಾಟ, ಆರೋಪಿಗಳು ಅಂದರ್
ಗಿಳಿಗಳು ಸಾಮಾನ್ಯವಾಗಿ ಮನುಷ್ಯರ ಮಾತನ್ನು ಅನುಕರಣೆ ಮಾಡುವ ಸ್ವಭಾವವನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಗಿಳಿಯ ಬಳಿ ಆರೋಪಿ ಮಾಲೀಕನ ಬಗ್ಗೆ ಹಾಗೂ ನಾಪತ್ತೆಯಾಗಿರುವ ಕುಟುಂಬದ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಎಂಬ ನೀರಿಕ್ಷೆಯಲ್ಲಿ ಪ್ರಶ್ನಿಸಿದ್ದಾರೆ. ಆದರೆ ಗಿಳಿ ಮೌನವಾಗಿದ್ದು, ಪೊಲೀಸರ ತಂತ್ರ ಪಲಿಸದಾಗಿದೆ. ಬಿಹಾರದಲ್ಲಿ ಸರಾಯಿ ನಿಷೇಧವಾದಾಗಿನಿಂದಲೂ ಪೊಲೀಸರು ಬಹಳ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಟ್ಟು 2.54 ಲಕ್ಷ ಮಂದಿಯನ್ನು ರಾಜ್ಯದಲ್ಲಿ ಬಂಧಿಸಲಾಗಿದೆ.