ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ಪಟು ದೀಪಿಕಾ ಪಲ್ಲಿಕಲ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಯುಗಾದಿ ಹಬ್ಬದಂದು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ಮಗಳಿಗೆ 'ರಾಹಾ ಪಲ್ಲಿಕಲ್ ಕಾರ್ತಿಕ್' ಎಂದು ಹೆಸರಿಟ್ಟಿದ್ದಾರೆ. 

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ತಮ್ಮ ಅಭಿಮಾನಿಗಳಿಗೆ ಯುಗಾದಿಯ ಹಬ್ಬದಂದೇ ಗುಡ್ ನ್ಯೂಸ್ ನೀಡಿದ್ದಾರೆ. ದಿನೇಶ್ ಕಾರ್ತಿಕ್ ಪತ್ನಿ, ಸ್ಕ್ವಾಷ್‌ ಪಟು ದೀಪಿಕಾ ಪಲ್ಲಿಕಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಇದೀಗ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ರಾಹಾ ಪಲ್ಲಿಕಲ್ ಕಾರ್ತಿಕ್ ಎಂದು ಹೆಸರಿಟ್ಟಿದ್ದಾರೆ.

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿಕೆ-ದೀಪಿಕಾ

ಈ ಖುಷಿಯ ವಿಚಾರವನ್ನು ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ಮೊದಲು ದೀಪಿಕಾ ಪಲ್ಲಿಕಲ್ ಕಬೀರ್ ಹಾಗೂ ಜಿಹಾನ್ ಎನ್ನುವ ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಸುಂದರ ಕುಟುಂಬಕ್ಕೆ ಇದೀಗ ರಾಹಾ ಸೇರ್ಪಡೆ ಮತ್ತಷ್ಟು ಖುಷಿ ಹೆಚ್ಚುವಂತೆ ಮಾಡಿದೆ.

View post on Instagram

ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಜೋಡಿಯೂ ಆಗಸ್ಟ್ 25, 2015ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದಾಗಿ ಆರು ವರ್ಷಗಳ ಬಳಿಕ ಅಂದರೆ 2021ರಲ್ಲಿ ದೀಪಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಐಪಿಎಲ್‌ಗೂ ಮೊದಲೇ ಮೂರನೇ ಮಗುವಿಗೆ ತಂದೆಯಾದ ದಿನೇಶ್ ಕಾರ್ತಿಕ್:

ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿಯೇ ಗುರುತಿಸಿಕೊಂಡಿದ್ದಾರೆ. ಸದ್ಯ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ವಿದಾಯ ಹೇಳಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವಲ್ಲಿ ದಿನೇಶ್ ಕಾರ್ತಿಕ್ ಅವರ ಮಾರ್ಗದರ್ಶನ ಪ್ರಮುಖವಾಗಿತ್ತು. ಇದೀಗ ಮಾರ್ಚ್ 28ರಿಂದ 19ನೇ ಸೀಸನ್ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಇದಕ್ಕೂ ಮೊದಲೇ ದಿನೇಶ್ ಕಾರ್ತಿಕ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ.

ಇನ್ನು ದೀಪಿಕಾ ಪಲ್ಲಿಕಲ್ ಕೂಡಾ ಸ್ಕ್ವಾಷ್‌ನಲ್ಲಿ ತನ್ನದೇ ಆದ ಹೆಜ್ಜೆಗುರುತು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ ಮಹಿಳಾ ಸ್ಕ್ವಾಷ್‌ನಲ್ಲಿ ಟಾಪ್ 10 ಶ್ರೇಯಾಂಕ ಪಟ್ಟಿಯೊಳಗೆ ಸ್ಥಾನ ಪಡೆದ ಮೊದಲ ಭಾರತೀಯ ಸ್ಕ್ವಾಷ್ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ದೀಪಿಕಾ, ಕಾಮನ್‌ವೆಲ್ತ್ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಹಲವು ಪದಕ ಗೆಲ್ಲುವ ಮೂಲಕ ದೇಶದ ಹಿರಿಮೆ ಹೆಚ್ಚಿಸಿದ್ದಾರೆ.