ನಡೆದುಕೊಂಡು ಹೋದವರಿಗೂ ದಂಡ ವಿಧಿಸಿದ ಬೆಂಗಳೂರು ಪೊಲೀಸರು
ಬೆಂಗಳೂರಿನಲ್ಲಿ ವಾಕ್ ಹೋದ ದಂಪತಿಯನ್ನು ಪೊಲೀಸರಿಬ್ಬರು ಹಿಡಿದುಕೊಂಡಿದ್ದು ನಿಯಮ ಮೀರಿದ್ದಕ್ಕಾಗಿ 1000 ರೂ ದಂಡ ಪಾವತಿಸುವಂತೆ ದಂಪತಿಗೆ ಬೆದರಿಸಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಕಾರ್ತಿಕ್ ಪತ್ರಿ ಎಂಬುವವರು ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಈ ಟ್ವಿಟ್ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಾಮಾನ್ಯವಾಗಿ ರಾತ್ರಿ ಊಟವಾದ ನಂತರ ಬಹುತೇಕರು ಒಂದು ವಾಕ್ ಹೋಗುತ್ತಾರೆ. ಒಳ್ಳೆಯ ಗಾಳಿ ಸೇವಿಸಲು ತಿಂದ ಕೂಡಲೇ ಮಲಗಬಾರದು ಎಂಬ ಕಾರಣಕ್ಕೆ ಅಥವಾ ತಿಂದಿದ್ದು ಸ್ವಲ್ಪ ಜೀರ್ಣವಾಗಲಿ ಎಂಬ ಕಾರಣಕ್ಕೆ ರಾತ್ರಿ ಊಟದ ನಂತರ ಒಂದು ವಾಕ್ ಹೋಗುವುದು ಸಾಮಾನ್ಯ 'After lunch sleep a while after dinner walk a mile' ಅಂತ ಇಂಗ್ಲೀಷ್ನಲ್ಲಿ ರಾತ್ರಿ ವಾಕ್ಗೆ ಸಂಬಂಧಿಸಿದಂತೆ ಗಾದೆಯೇ ಇದೆ. ಹೀಗಿರುವಾಗ ಬೆಂಗಳೂರಿನಲ್ಲಿ ವಾಕ್ ಹೋದ ದಂಪತಿಯನ್ನು ಪೊಲೀಸರಿಬ್ಬರು ಹಿಡಿದುಕೊಂಡಿದ್ದು ನಿಯಮ ಮೀರಿದ್ದಕ್ಕಾಗಿ 1000 ರೂ ದಂಡ ಪಾವತಿಸುವಂತೆ ದಂಪತಿಗೆ ಬೆದರಿಸಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಕಾರ್ತಿಕ್ ಪತ್ರಿ ಎಂಬುವವರು ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಈ ಟ್ವಿಟ್ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಕಾರ್ತಿಕ್ ಪತ್ರಿ ಹಾಗೂ ಅವರ ಪತ್ನಿ ಗೆಳೆಯರೊಬ್ಬರ ಮನೆಯಲ್ಲಿ ಕೇಕ್ ಕಟ್ಟಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅವರನ್ನು ತಡೆದ ಇಬ್ಬರು ಪೊಲೀಸರು ಅವರಿಗೆ ದಂಡ ವಿಧಿಸಿದ್ದಾರೆ ಎಂದು ಕಾರ್ತಿಕ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಹೀಗೆ ಇವರನ್ನು ತಡೆದು ನಿಲ್ಲಿಸಿದ ಪೇದೆ ಹಾಗೂ ಹೆಡ್ ಕಾನ್ಸ್ಟೇಬಲ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಸೇರಿದವರೆಂದು ಅವರು ಬರೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗ ತನಿಖೆ ನಡೆಯುತ್ತಿದೆ. ಈ ವಿಚಾರವನ್ನು ಅವರು ಟ್ವಿಟ್ಟರ್ ಮೂಲಕ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರ ಗಮನಕ್ಕೂ ತಂದಿದ್ದಾರೆ. ಇನ್ನು ಈ ಟ್ವಿಟ್ಗೆ ಸಂಬಂಧಿಸಿಂತೆ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸ್ ಉಪ ಆಯುಕ್ತ ಅನೂಪ್ ಎ ಶೆಟ್ಟಿ (Anoop A Shetty) ಪ್ರತಿಕ್ರಿಯಿಸಿದ್ದು, ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಕಾರ್ತಿಕ್ ಪತ್ರಿ ಟ್ವಿಟ್ಟರ್ನಲ್ಲಿ ಹೇಳಿದ್ದೇನು
ಮಧ್ಯರಾತ್ರಿ 12.30ಕ್ಕೆ ನಮಗಾದ ಭಯಾನಕ ಅನುಭವವನ್ನು ನಾನು ನಿಮ್ಮ ಮುಂದಿಡುತ್ತಿದ್ದೇನೆ. ಸ್ನೇಹಿತರೊಬ್ಬರ ಮನೆಯಿಂದ ನಾನು ಹಾಗೂ ಪತ್ನಿ ಮಾನ್ಯತಾ ಟೆಕ್ ಪಾರ್ಕ್ ಹಿಂಬದಿ ಇರುವ ಸೊಸೈಟಿಯಲ್ಲಿರುವ ನಮ್ಮ ಮನೆಗೆ ನಡೆದುಕೊಂಡು ಬರುತ್ತಿದ್ದೆವು. ಇನ್ನೇನು ಮನೆ ತಲುಪಲು ಕೆಲವು ಮೀಟರ್ ದೂರವಿದ್ದಾಗ, ಪಿಂಕ್ ಬಣ್ಣದ ಹೊಯ್ಸಳ ಗಸ್ತುವಾಹನ (pink Hoysala petrol van) ನಮ್ಮ ಮುಂದೆ ಬಂದು ನಿಂತಿತು. ಇಬ್ಬರು ಪೊಲೀಸರು ಅದರಿಂದ ಇಳಿದು ನಮ್ಮತ್ತ ಬಂದರು. ಬಂದವರೇ ನಮ್ಮ ಬಳಿ ಐಡಿ ಕಾರ್ಡ್ ತೋರಿಸುವಂತೆ ಹೇಳಿದರು. ಇದರಿಂದ ನಾವು ಆಶ್ಚರ್ಯಗೊಂಡೆವು. ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಐಡಿ ಕಾರ್ಡ್ ಏಕೆ ಬೇಕು. ಅಲ್ಲದೇ ಆ ಜೋಡಿಯ ಬಳಿ ಇದ್ದ ಫೋನ್ನ್ನು ಕೂಡ ಪೊಲೀಸರು ವಶಕ್ಕೆ ಪಡೆದರು. ನಂತರ ಒಬ್ಬಾತ ತಮ್ಮ ಜೊತೆ ಚಲನ್ನಂತಿದ್ದ ಪುಸ್ತಕದಲ್ಲಿ ನಮ್ಮ ಹೆಸರು ಆಧಾರ್ ನಂಬರ್ (Aadhaar numbers) ಬರೆದುಕೊಂಡು ಇವರಿಗೆ ಒಂದು ಸಾವಿರ ರೂಪಾಯಿ ದಂಡ ಕಟ್ಟುವಂತೆ ಹೇಳಿದ್ದಾನೆ. ಅಲ್ಲದೇ ರಾತ್ರಿ 11 ಗಂಟೆಯ ನಂತರ ರಸ್ತೆಯಲ್ಲಿ ಓಡಾಡುವಂತಿಲ್ಲ ಎಂದು ಇವರಿಗೆ ಹೇಳಿದ್ದಾನೆ.
ಇದರಿಂದ ಹೆದರಿದ ನಾವು ಅಕ್ಷರಶಃ ಅವರಲ್ಲಿ ಏನು ಮಾಡದ ತಪ್ಪಿಗೆ ಬಿಟ್ಟು ಬಿಡುವಂತೆ ಬೇಡಿದೆವು ಎಂದು ಕಾರ್ತಿಕ್ (Karthik Patre)ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಪೊಲೀಸ್ ಪೇಟಿಎಂ (PayTm) ಮೂಲಕ ಹಣ ಪಾವತಿ ಮಾಡುವಂತೆ ಹೇಳಿ ಎಂದು ದಂಪತಿ ದೂರಿದ್ದಾರೆ. ನಂತರ ಹಣ ನೀಡಿದ ನಂತರ ಈ ದಂಪತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಒಟ್ಟಿನಲ್ಲಿ ಕೆಲವೇ ಕೆಲವು ಪೊಲೀಸರ ಈ ಕೆಟ್ಟ ವರ್ತನೆಯಿಂದ ಪೊಲೀಸ್ ಇಲಾಖೆಯ (Police Departement) ಮರ್ಯಾದೆ ಹೋಗುತ್ತಿರುವುದಲ್ಲದೇ ಲಂಚದ ಆಸೆಗೆ ರಾಷ್ಟ್ರಮಟ್ಟದಲ್ಲಿ ಸಿಲಿಕಾನ್ ಸಿಟಿಯ ಮಾನವನ್ನು ಇವರು ಕಳೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.
18 ವರ್ಷದ ಬಳಿಕ ಕೊಲೆ ಆರೋಪಿ ಅರೆಸ್ಟ್, ತಂತ್ರಜ್ಞಾನ ಮೂಲಕ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸ್!
Bengaluru Crime: ಬೆಂಗಳೂರಲ್ಲಿ ಬೈಕ್ ಕದ್ದು ಉತ್ತರ ಕರ್ನಾಟಕದಲ್ಲಿ ಮಾರಾಟ: ಇಬ್ಬರ ಬಂಧನ