Ram Mandir donation theft: ಅಯೋಧ್ಯೆಯ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಧರ್ಮದರ್ಶಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ದೇಣಿಗೆ ಕಳ್ಳತನ ಪ್ರಕರಣ ಈಗ ದೊಡ್ಡ ತಿರುವು ಪಡೆದುಕೊಂಡಿದೆ. ಪ್ರಕರಣದ ನೈತಿಕ ಹೊಣೆ ಹೊತ್ತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಎಸ್‌ಐಟಿ (SIT) ತನಿಖೆ ಆರಂಭವಾಗಿತ್ತು. ಎಸ್‌ಐಟಿಯ ಆರಂಭಿಕ ವರದಿಯ ಪ್ರಕಾರ, ದೇಣಿಗೆಯ ಮೇಲ್ವಿಚಾರಣೆಯಲ್ಲಿ ಲೋಪಗಳಾಗಿವೆ ಮತ್ತು ಎಸ್‌ಒಪಿ (SOP) ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿಲ್ಲ ಎಂಬುದು ದೃಢಪಟ್ಟಿದೆ. ಸದ್ಯಕ್ಕೆ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ಹೆಸರು ಎಫ್‌ಐಆರ್‌ನಲ್ಲಿ ಇಲ್ಲದಿದ್ದರೂ, ತನಿಖೆಯ ಕಾವು ಹೆಚ್ಚಾಗುವ ಮುನ್ನವೇ ಅವರು ರಾಜೀನಾಮೆ ನೀಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಯಾರು ಈ ಚಂಪತ್ ರಾಯ್?

1980ರ ದಶಕದಿಂದಲೂ ರಾಮಮಂದಿರ ಚಳವಳಿಯ ಪ್ರಮುಖ ಮುಖವಾಗಿದ್ದ ಚಂಪತ್ ರಾಯ್ ಅವರು ಮೂಲತಃ ಉತ್ತರ ಪ್ರದೇಶದ ಬಿಜನೋರ್‌ನವರು. ಆರ್‌ಎಸ್‌ಎಸ್ (RSS) ಸಿದ್ಧಾಂತದಿಂದ ಪ್ರೇರಿತರಾದ ಇವರು, ಮಂದಿರ ಚಳವಳಿಗೆ ಸೇರುವ ಮುನ್ನ ರಸಾಯನಶಾಸ್ತ್ರದ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. 1992ರ ಕರಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಇವರು, ಅವಿವಾಹಿತರಾಗಿ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂಟು ಮಂದಿ ಅರೆಸ್ಟ್

ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 8 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಚಂಪತ್ ರಾಯ್ ಅವರ ಆಪ್ತ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಕೂಡ ಸೇರಿದ್ದಾರೆ. ಬಂಧಿತರನ್ನು ವೈದ್ಯಕೀಯ ತಪಾಸಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹಣ ಎಣಿಕೆಯ ಮೇಲ್ವಿಚಾರಣೆಯಲ್ಲಿದ್ದ ಸುಭಾಷ್ ಶ್ರೀವಾಸ್ತವ ಎಂಬುವವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ

ಇನ್ನೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಷಯದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಜನರ ನಂಬಿಕೆಯೊಂದಿಗೆ ಆಟವಾಡುವವರನ್ನು ಸುಮ್ಮನೆ ಬಿಡುವುದಿಲ್ಲ. ಸತ್ಯ ಹೊರಬರಲಿದೆ. ಭಕ್ತರ ಕಾಣಿಕೆಯನ್ನು ಕಳ್ಳತನ ಮಾಡಿದ ಪ್ರತಿಯೊಬ್ಬರಿಂದಲೂ ಲೆಕ್ಕ ಚುಕ್ತಾ ಮಾಡಲಾಗುವುದು," ಎಂದು ಅವರು ಎಚ್ಚರಿಸಿದ್ದಾರೆ. ಎಸ್‌ಐಟಿ ವರದಿ ಬಂದ ಒಂದು ವಾರದೊಳಗೆ ಇಷ್ಟೆಲ್ಲಾ ಕ್ರಮಗಳಾಗಿರುವುದು ಸರ್ಕಾರದ ಗಂಭೀರತೆಯನ್ನು ತೋರಿಸುತ್ತದೆ.

ಸನಾತನ ಧರ್ಮದ ನಂಬಿಕೆಯ ಮೇಲೆ ಹೊಡೆತ ನೀಡಿದ ಯಾರನ್ನೇ ಆದರೂ ಎಸ್‌ಐಟಿ ಬಿಡುವುದಿಲ್ಲ ಎಂದು ಯೋಗಿ ಭರವಸೆ ನೀಡಿದ್ದಾರೆ. ಈ ರಾಜೀನಾಮೆಗಳ ಬೆನ್ನಲ್ಲೇ ಟ್ರಸ್ಟ್‌ನಲ್ಲಿ ಹಲವು ಆಡಳಿತಾತ್ಮಕ ಬದಲಾವಣೆಗಳು ನಡೆಯುವ ಸಾಧ್ಯತೆಯಿದೆ.