ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ 7 ಕೋಟಿ ರೂ. ಅಕ್ರಮ ನಡೆದಿದೆ ಎನ್ನಲಾಗಿದ್ದು, ಮೂವರು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕಡಿಮೆ ಸಂಬಳ ಪಡೆಯುತ್ತಿದ್ದ ಈ ಸಿಬ್ಬಂದಿ ಇತ್ತೀಚೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದು, ಓರ್ವನ ಮನೆಯಿಂದ 12 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಲಖನೌ: ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ 7 ಕೋಟಿ ರು. ಅಕ್ರಮ ನಡೆದಿದೆ ಎಂಬ ಆರೋಪದ ತನಿಖೆಗೆ ಎಸ್ಐಟಿ ರಚನೆ ಬೆನ್ನಲ್ಲೇ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ 3 ಸಿಬ್ಬಂದಿಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ಓರ್ವನ ಮನೆಯಿಂದ 10-12 ಲಕ್ಷ ರು. ಜಪ್ತಿ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸಿಬ್ಬಂದಿ ಲವಕುಶ್ ಮಿಶ್ರಾ ಎಂಬಾತ ಸೇರಿ ಇಬ್ಬರು ಸಿಬ್ಬಂದಿ ಪೊಲೀಸರ ವಶದಲ್ಲಿದ್ದಾರೆ. ಲವಕುಶ್ ಮನೆಯಲ್ಲಿ ನಗದು ಪತ್ತೆ ಮಾಡಿದ್ದಲ್ಲದೆ ಆತನಿಗಿರುವ ಸಂಪರ್ಕಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ದೇವಾಲಯದಲ್ಲಿ ಕೆಲಸ ಪಡೆಯುವ ಮೊದಲು ಮಿಶ್ರಾ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ, ನಂತರ ಆತನ ಆರ್ಥಿಕ ಸ್ಥಿತಿ ಅಲ್ಪಾವಧಿಯಲ್ಲಿಯೇ ತೀವ್ರವಾಗಿ ಸುಧಾರಿಸಿತ್ತು ಎಂದು ಮೂಲಗಳು ಹೇಳಿವೆ.
1.5 ಕೋಟಿ ರು. ಮೌಲ್ಯದ ಭೂಮಿ ಖರೀದಿ
ಈ ನಡುವೆ, ವಶದಲ್ಲಿರುವ ಇನ್ನಿಬ್ಬರು ಟ್ರಸ್ಟ್ ಸಿಬ್ಬಂದಿಯ ವಿಚಾರಣೆ ನಡೆದಿದೆ. ದೇವಾಲಯದಲ್ಲಿ ಸ್ವೀಕರಿಸಿದ ಕಾಣಿಕೆ ಎಣಿಸುವ ಜವಾಬ್ದಾರಿಯನ್ನು ಇಬ್ಬರೂ ನೌಕರರಿಗೆ ವಹಿಸಲಾಗಿತ್ತು ಮತ್ತು ಅವರು ಮಾಸಿಕ 18,000 ರಿಂದ 20,000 ರು.ಗಳ ವೇತನವನ್ನು ಗಳಿಸುತ್ತಿದ್ದರು. ಇಬ್ಬರಲ್ಲಿ ಒಬ್ಬರು ಇತ್ತೀಚೆಗೆ 1.5 ಕೋಟಿ ರು. ಮೌಲ್ಯದ ಭೂಮಿಯನ್ನು ಖರೀದಿಸಿದ್ದರೆ, ಇನ್ನೊಬ್ಬರು 40 ಲಕ್ಷ ರು. ಮೌಲ್ಯದ ಪ್ಲಾಟ್ ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇನ್ನು ರಾಮ ಮಂದಿರದಲ್ಲಿ ದೇಣಿಗೆ ಎಣಿಕೆ ಕಾರ್ಯ ನಿರ್ವಹಿಸುತ್ತಿದ್ದ ಹಲವು ಅಧಿಕಾರಿಗಳ ಮೇಲೆ ತನಿಖಾ ತಂಡ ನಿಗಾ ವಹಿಸಿದೆ ಎಂದು ತಿಳಿದು ಬಂದಿದೆ.


