Asianet Suvarna News Asianet Suvarna News

ಬಾಲ್ಯವಿವಾಹಕ್ಕೆ ಬ್ರೇಕ್‌ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್‌ ಮಾಡಲು ಮುಂದಾದ ಅಸ್ಸಾಂ ಸಿಎಂ

ಈ ವರದಿ ಸಿದ್ಧಪಡಿಸುವ ವೇಳೆ ಸಮಿತಿಯು ಮುಸ್ಲಿಂ ಚಿಂತಕರು, ಧಾರ್ಮಿಕ ಮುಖಂಡರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಿದೆ.

assam planning to ban polygamy amid bid for uniform civil code ash
Author
First Published May 15, 2023, 9:45 AM IST

ಗುವಾಹಟಿ (ಮೇ 15, 2023): ಅಕ್ರಮ ಮದ್ರಸಾಗಳ ಬಂದ್‌, ಬಾಲ್ಯವಿವಾಹಕ್ಕೆ ಕಡಿವಾಣದ ಬೆನ್ನಲ್ಲೇ, ಬಹುಪತ್ನಿತ್ವ ತಡೆಗೆ ಕಾಯ್ದೆ ರೂಪಿಸಲು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಬಹುದೇ ಎಂಬುದರ ಬಗ್ಗೆ ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ನಾಲ್ವರು ತಜ್ಞರ ಸಮಿತಿಯೊಂದನ್ನು ರಚಿಸಿದೆ. ಈ ಮೂಲಕ ಇಂಥ ಕಾಯ್ದೆ ರಚನೆಗೆ ಮುಂದಾದ ಮೊದಲ ರಾಜ್ಯ ಎನ್ನಿಸಿಕೊಂಡಿದೆ.

ಈ ಸಮಿತಿಯು ಮುಸ್ಲಿಮರ ವೈಯಕ್ತಿಕ ಕಾನೂನು (ಷರಿಯಾ) ಕಾಯ್ದೆ, 1937 ಮತ್ತು ಭಾರತೀಯ ಸಂವಿಧಾನದ 25ನೇ ವಿಧಿಯನ್ನು ಪರಿಶೀಲಿಸಿ ತನ್ನ ವರದಿಯನ್ನು ಸಿದ್ಧಪಡಿಸಲಿದೆ. ಈ ವರದಿ ಸಿದ್ಧಪಡಿಸುವ ವೇಳೆ ಸಮಿತಿಯು ಮುಸ್ಲಿಂ ಚಿಂತಕರು, ಧಾರ್ಮಿಕ ಮುಖಂಡರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಿದೆ.

ಇದನ್ನು ಓದಿ: ಸಿನಿಮಾ ಥಿಯೇಟರ್‌ನಲ್ಲಿ ಮಹಿಳೆಗೆ ಕಚ್ಚಿದ ಇಲಿ: ಪ್ರೇಕ್ಷಕಿಗೆ 67 ಸಾವಿರ ರೂ. ಪರಿಹಾರ ನೀಡಲು ಸೂಚನೆ

ಸರ್ಕಾರ ರಚಿಸಿದ ಸಮಿತಿಯಲ್ಲಿ ನ್ಯಾ.ರುಮಿ ಫುಕಾನ್‌, ಅಸ್ಸಾಂ ಅಡ್ವೋಕೇಟ್‌ ಜನರಲ್‌ ದೇಬಜಿತ್‌ ಸೈಕಿಯಾ, ಅಸ್ಸಾಂ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ನಳಿನ್‌ ಕೊಹ್ಲಿ ಮತ್ತು ರಾಜ್ಯ ಹೈಕೋರ್ಟ್‌ನ ಹಿರಿಯ ವಕೀಲ ನೇಕಿಬುರ್‌ ಝಮಾನ್‌ ಸದಸ್ಯರಾಗಿದ್ದಾರೆ.

ಬಹುವಿವಾಹ ಪದ್ಧತಿ ಎಂದರೆ ಏನು?
ಆತ ಅಥವಾ ಆಕೆ ಒಬ್ಬರಿಗಿಂತ ಹೆಚ್ಚಿನ ಸಂಗಾತಿಯನ್ನು ಮದುವೆಯಾಗುವುದನ್ನು ಬಹುವಿವಾಹ ಎನ್ನಲಾಗುತ್ತದೆ. ಆದರೆ ಮಹಿಳೆಯರು ಒಬ್ಬರಿಗಿಂತ ಹೆಚ್ಚಿನ ಪುರುಷರನ್ನು ಮದುವೆಯಾಗುವ ಉದಾಹರಣೆ ತೀರಾ ಕಡಿಮೆ. ಆದರೆ ಪುರುಷರು ಒಬ್ಬರಿಗಿಂತ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವ ಉದಾಹರಣೆ ಸಾಕಷ್ಟಿದೆ. ಇದನ್ನು ಬಹುಪತ್ನಿತ್ವ ಎನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಆದರೆ ಇಸ್ಲಾಂನಲ್ಲಿ ಒಬ್ಬ ವ್ಯಕ್ತಿ ನಾಲ್ವರು ಮಹಿಳೆಯರನ್ನು ವಿವಾಹವಾಗಲು ಅವಕಾಶ ನೀಡುತ್ತದೆ. ಇದಕ್ಕೆ ಷರಿಯಾ ಕಾನೂನು ಅವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ: ದುಬೈ ಬಿಸಿನೆಸ್‌ ಬಿಟ್ಟು ಉಗ್ರನಾದ ಅಮೃತ್‌ಪಾಲ್‌ ಸಿಂಗ್: ಪಂಜಾಬ್‌ ಬದಲು ಅಸ್ಸಾಂ ಜೈಲಿಗೆ ಹಾಕಿದ್ದೇಕೆ!

ಬಾಲ್ಯ ವಿವಾಹ ಮಾಡಿಕೊಂಡ 3000 ಜನರ ಬಂಧನ
ಅಸ್ಸಾಂ ಸರ್ಕಾರ ಈಗಾಗಲೇ ಬಾಲ್ಯ ವಿವಾಹದ ವಿರುದ್ಧ ರಾಜ್ಯದಲ್ಲಿ ಸಮರ ಸಾರಿದೆ. ಬಾಲ್ಯ ವಿವಾಹ ಮಾಡಿಕೊಂಡ 6707 ಜನರನ್ನು ಸರ್ಕಾರ ಗುರುತಿಸಿದ್ದು, ಈ ಸಂಬಂಧ 4235 ಪ್ರಕರಣ ದಾಖಲಿಸಿಕೊಂಡು, 3047 ಜನರನ್ನು ಬಂಧಿಸಿದೆ. ಈ ಪೈಕಿ 93 ಮಹಿಳೆಯರು ಮತ್ತು 2954 ಪುರುಷರು. ಈ ಅಭಿಯಾನವನ್ನು 2026ರವರೆಗೂ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

 

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್‌: ‘ಕೈ’ ನಾಯಕ ಶ್ರೀನಿವಾಸ್‌ ವಿರುದ್ಧ ಎಫ್‌ಐಆರ್‌; ಅಸ್ಸಾಂ ಪೊಲೀಸರಿಂದ ಬಂಧನ ಸಾಧ್ಯತೆ

Follow Us:
Download App:
  • android
  • ios