ಅಮರನಾಥ ಯಾತ್ರಾ ಬೇಸ್ ಕ್ಯಾಂಪ್ ವಲಯದಲ್ಲಿ ಮೇಘಸ್ಫೋಟ 16 ಭಕ್ತರು ಸಾವು, ಹಲವರು ಭಕ್ತರು ಕಣ್ಮರೆ ಪ್ರವಾಹ ಕಾರಣ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ
ಕಾಶ್ಮೀರ(ಜು.11): ಮೇಘಸ್ಫೋಟ, ಭಾರಿ ಪ್ರವಾಹ ದುರಂತದಿಂದ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆ ಇದೀಗ ಮತ್ತೆ ಆರಂಭಗೊಂಡಿದೆ. ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ವಲಯದಲ್ಲಿ ಭಾರಿ ಮಳೆಗೆ ದಿಢೀರ್ ಪ್ರವಾಹ ಸೃಷ್ಟಿಯಾಗಿತ್ತು. ಹೀಗಾಗಿ ಬೇಸ್ ಕ್ಯಾಂಪ್ನಲ್ಲಿದ್ದ ಹಲವು ಭಕ್ತರು ಕೊಚ್ಚಿ ಹೋಗಿದ್ದರು. ಈ ಪೈಕಿ 16 ಭಕ್ತರು ಸಾವನ್ನಪ್ಪಿದ್ದಾರೆ. ಇನ್ನು ಹಲವರು ಭಕ್ತರು ಕಣ್ಮರೆಯಾಗಿದ್ದರೆ. ಪ್ರತಿಕೂಲ ಹವಾಮಾನ, ಪ್ರವಾಹ ದುರಂತದಿಂದ ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಎರಡು ದಿನದ ಬಳಿಕ ಇದೀಗ ಮತ್ತೆ ಅಮರನಾಥ ಯಾತ್ರೆ ಆರಂಭಗೊಂಡಿದೆ.
ಇಂದು(ಜು.11) ಅಮರನಾಥ ಯಾತ್ರೆ ಮತ್ತೆ ಆರಂಭಗೊಂಡಿದೆ. ಮೊದಲ ಹಂತದಲ್ಲಿ 2,000 ದಿಂದ 3,000 ಯಾತ್ರಾರ್ಥಿಗಳನ್ನು ಬಿಡಲಾಗುತ್ತದೆ ಎಂದು ಸ್ಥಳೀಯ ಜಿಲ್ಲಾಡಳಿತ ಹೇಳಿದೆ. ಇಂದು ಬೆಳಗ್ಗೆ 4.30ಕ್ಕೆ ಫಾಲ್ಗಾಮ್ ಬೇಸ್ ಕ್ಯಾಂಪ್ನಿಂದ ಯಾತ್ರಾರ್ಥಿಗಳು ಪ್ರಯಾಣ ಆರಂಭಿಸಿದ್ದಾರೆ. ಫಾಲ್ಗಾಮ್ ಹಾಗೂ ಬಲ್ಟಾಲ್ ಎಂಬ ಎರಡು ದಾರಿಗಳಿಂದ ಯಾತ್ರಾರ್ಥಿಗಳು ಪ್ರಯಾಣ ಆರಂಭಿಸಿದ್ದಾರೆ.
ಅಮರನಾಥದಲ್ಲಿ ಮೇಘ ಸ್ಫೋಟ: ಹಿಮಲಿಂಗ ದರ್ಶನಕ್ಕೆ ಹೋದವರು ಜಲಸಮಾಧಿ!
ಇನ್ನು ಯಾತ್ರೆ ಸ್ಥಗಿತಗೊಂಡಿದ್ದ ಕಾರಣ ಜಮ್ಮು ನಗರದ ಯಾತ್ರಿ ನಿವಾಸ ಕ್ಯಾಂಪ್ನಲ್ಲಿ ಹಲವು ಭಕ್ತರು ಉಳಿದುಕೊಂಡಿದ್ದರು. ಇದೀಗ ಯಾತ್ರಿ ನಿವಾಸದಿಂದ ಫಾಲ್ಗಾಮ್ ಬೇಸ್ಕ್ಯಾಂಪ್ಗೆ ಭಕ್ತರು ಪ್ರಯಾಣ ಆರಂಭಿಸಿದ್ದಾರೆ. ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿದೆ. ಮತ್ತೆ ಮಳೆ ಸೂಚನೆ ಇರುವದರಿಂದ ಯಾವುದೇ ಕ್ಷಣದಲ್ಲಿ ಭಕ್ತರ ರಕ್ಷಣಾ ಕಾರ್ಯಕ್ಕೆ ರಕ್ಷಣಾ ಪಡೆಗಳು ಸನ್ನದ್ಧವಾಗಿದೆ. ಶುಕ್ರವಾರ(ಜು.08) ಸಂಜೆ ಮೇಘಸ್ಫೋಟಕ್ಕೆ ದಿಢೀರ್ ಪ್ರವಾಹ ಸೃಷ್ಟಿಯಾಗಿತ್ತು.
ಘಟನಾ ಸ್ಥಳದಲ್ಲಿ ಶುಕ್ರವಾರದಿಂದಲೇ ಎನ್ಡಿಆರ್ಎಫ್, ಸೇನೆ, ಬಿಎಸ್ಎಫ್, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶುಕ್ರವಾರ ಸಂಜೆಯಿಂದೀಚೆಗೆ 15 ಸಾವಿರಕ್ಕೂ ಹೆಚ್ಚು ಜನರನ್ನು ಸಮೀಪದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿವೆ. ಅತ್ಯಾಧುನಿಕ ಯಂತ್ರೋಪಕರಣ, ತರಬೇತಿ ಪಡೆದ ಶ್ವಾನಗಳನ್ನು ಬಳಸಿಕೊಂಡು ಅವಶೇಷಗಳ ಅಡಿಯಲ್ಲಿ ಸಿಕ್ಕಿದವರ ಪತ್ತೆಗೆ ಯತ್ನ ನಡೆಸಲಾಗುತ್ತಿದೆ. ಇದಲ್ಲದೆ ಎಂಐ-17 ಕಾಪ್ಟರ್ಗಳನ್ನೂ ಗಾಯಾಳುಗಳ ತ್ವರಿತ ತೆರವಿಗಾಗಿ ಬಳಸಿಕೊಳ್ಳಲಾಗಿದೆ.
ಅಮರನಾಥದಲ್ಲಿ ಸಿಲುಕಿರುವ ನೂರು ಕನ್ನಡಿಗರೂ ಸೇಫ್: ಸಿಎಂ ಬೊಮ್ಮಾಯಿ
ಘಟನೆಯಲ್ಲಿ 25 ಜನರು ಗಾಯಗೊಂಡಿದ್ದು ಅವರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಘಟನಾ ಪ್ರದೇಶದಲ್ಲಿ ಭಾರೀ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು 15 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಶುಕ್ರವಾರ ಸಂಜೆ 5.30ರ ವೇಳೆಗೆ ಅಮರನಾಥ ಗುಹೆ ಸಮೀಪದ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ದಿಢೀರ್ ಪ್ರವಾಹ ಕಾಣಿಸಿಕೊಂಡು, ಭಕ್ತರು ಉಳಿದುಕೊಂಡಿದ್ದ ಟೆಂಟ್ಗಳು ಕೊಚ್ಚಿಹೋಗಿದ್ದವು. ಪ್ರವಾಹದ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಕಲ್ಲು ಮತ್ತು ಮಣ್ಣು ಕೂಡಾ ಹರಿದುಬಂದ ಕಾರಣ ಅವಗಢದ ತೀವ್ರತೆ ಹೆಚ್ಚಾಗಿದೆ.
ಪವಿತ್ರ ಅಮರನಾಥ ಯಾತ್ರೆಯನ್ನು ವರದಿ ಮಾಡುತ್ತಿದ್ದ ಖಾಸಗಿ ಸುದ್ದಿವಾಹಿನಿ ಎನ್ಡಿಟಿವಿಯ ಪತ್ರಕರ್ತರು ದುರ್ಘಟನೆಯಿಂದ ಕೆಲವೇ ಕ್ಷಣಗಳಲ್ಲಿ ತಪ್ಪಿಸಿಕೊಂಡಿದ್ದಾರೆ. ಮೇಘಸ್ಫೋಟ ಸಂಭವಿಸಿದ ಸ್ಥಳದಿಂದಲೇ ರಿಪೋರ್ಟರ್ ಶರದ್ ಶರ್ಮಾ ಮತ್ತು ಕ್ಯಾಮರಾ ಪರ್ಸನ್ ಅಶ್ವಿನಿ ಮೆಹ್ರಾ ಅವರು ವರದಿ ನೀಡುತ್ತಿದ್ದರು. ಸುಮಾರು 24 ಗಂಟೆಗಳ ಕಾಲ ಅಲ್ಲಿಂದಲೇ ವರದಿ ಪ್ರಸಾರ ಮಾಡಿದ ತಂಡ ದುರ್ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು ಅಲ್ಲಿಂದ ವಾಪಸಾಗಿದೆ. ಅಲ್ಲಿಂದ ಕೆಳಗೆ ಬರುತ್ತಿದ್ದಂತೆ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದೆ ಎಂಬ ವರದಿ ಬಂದಿತು. ಅಲ್ಲಿದ್ದ ಜನರ ಟೆಂಟ್ಗಳು, ಅಂಗಡಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವು. ಜನರು ನೀರಿನಲ್ಲಿ ತೇಲಿಹೋಗುತ್ತಿದ್ದರು ಎಂದು ಅವರು ದುರ್ಘಟನೆಯನ್ನು ವಿವರಿಸಿದ್ದಾರೆ.
