ಗೋಹತ್ಯೆ ತಡೆ ಜಗತ್ತಿನ ಎಲ್ಲಾ ಸಮಸ್ಯೆಗೆ ಪರಿಹಾರ: ಜಡ್ಜ್; ಅಕ್ರಮ ಸಾಗಾಟ ಮಾಡಿದವರಿಗೆ ಜೀವಾವಧಿ ಸಜೆ, 5 ಲಕ್ಷ ದಂಡ
ಆದೇಶದ ವೇಳೆ ಹಲವು ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ‘ಧರ್ಮ ಹುಟ್ಟಿದ್ದೇ ಗೋವಿನಿಂದ’ ಎಂದು ಹೇಳಿದ್ದಾರೆ.
ಅಹಮದಾಬಾದ್ (ಜನವರಿ 23, 2023): ‘ಗೋಹತ್ಯೆಯನ್ನು ತಡೆದರೆ ಜಗತ್ತಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿವೆ’ ಎಂದು ಗುಜರಾತ್ನ ತಾಪಿ ಜಿಲ್ಲಾ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದಿಂದ ಹಸುಗಳ ಕಳ್ಳಸಾಗಣೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸುವ ವೇಳೆ ಈ ಅನಿಸಿಕೆಗಳನ್ನು ಅದು ವ್ಯಕ್ತಪಡಿಸಿದೆ. ತಾಪಿ ಜಿಲ್ಲಾ ಕೋರ್ಟ್ನ ನ್ಯಾಯಾಧೀಶರಾದ ಸಮೀರ್ ವಿನೋದ್ಚಂದ್ರ ವ್ಯಾಸ್ ಆದೇಶ ಹೊರಡಿಸಿ, ‘ಹಸು ಕೇವಲ ಒಂದು ಪ್ರಾಣಿಯಲ್ಲ. ಅದು ನಮ್ಮ ತಾಯಿ ಎಂದು ಹೇಳಿದ್ದಾರೆ. ಹಸು ಈ ಜಗತ್ತಿಗೆ ಅತ್ಯಂತ ಮುಖ್ಯವಾದ ಪ್ರಾಣಿಯಾಗಿದೆ. ಹಸುವಿನಲ್ಲಿ 68 ಕೋಟಿ ಪವಿತ್ರ ಕ್ಷೇತ್ರಗಳಿವೆ. 33 ಕೋಟಿ ದೇವತೆಗಳು ಹಸುವಿನ ಉದರದಲ್ಲಿದ್ದಾರೆ. ಯಾವಾಗ ಹಸುವಿನ ಒಂದು ತೊಟ್ಟು ರಕ್ತ ಭೂಮಿಗೆ ಬೀಳುವುದಿಲ್ಲವೋ ಅಂದು ಈ ಜಗತ್ತು ಉದ್ಧಾರವಾಗಲಿದೆ’ ಎಂದು ಹೇಳಿದ್ದಾರೆ.
ಆದೇಶದ ವೇಳೆ ಹಲವು ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ‘ಧರ್ಮ ಹುಟ್ಟಿದ್ದೇ ಗೋವಿನಿಂದ’ ಎಂದು ಹೇಳಿದ್ದಾರೆ. ‘ಕೇವಲ ಧಾರ್ಮಿಕ ವಾದಗಳಷ್ಟೇ ಅಲ್ಲದೇ ಹಸು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ವೈಜ್ಞಾನಿಕವಾಗಿ ಹಲವು ಉಪಯೋಗಗಳನ್ನು ಒದಗಿಸಿದೆ. ಹಸುವಿನ ಸಗಣಿಯಿಂದ ನಿರ್ಮಿಸಿದ ಮನೆಗೆ ವಿಕಿರಣ ಬಾಧಿಸುವುದಿಲ್ಲ. ಗೋಮೂತ್ರದಿಂದ ಅನೇಕ ರೋಗಗಳು ಶಮನವಾಗುತ್ತವೆ’ ಎಂದು ಹೇಳಿದ್ದಾರೆ.
ಇದನ್ನು ಓದಿ: ಗೋಹತ್ಯೆ, ಮತಾಂತರ ತಡೆಗೆ ಹೋರಾಟ ಅವಶ್ಯಕ: ಪ್ರಮೋದ್ ಮುತಾಲಿಕ್
ನ್ಯಾಯಾಲಯವು ನವೆಂಬರ್ನಲ್ಲಿ ಪ್ರಕರಣದಲ್ಲಿ ತನ್ನ ಆದೇಶವನ್ನು ನೀಡಿದೆ ಎಂದು ವೆಬ್ಸೈಟ್ವೊಂದು ವರದಿ ಮಾಡಿದೆ. ಈ ಸಂಬಂಧ ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಮೀರ್ ವಿನೋದಚಂದ್ರ ವ್ಯಾಸ್ ಮಾತನಾಡಿ, ವಿಶ್ವಕ್ಕೆ ಗೋವು ಮುಖ್ಯವಾಗಿದ್ದು, ಗೋವಿನ ರಕ್ತವು ಭೂಮಿಯ ಮೇಲೆ ಬೀಳದಿದ್ದರೆ ಭೂಮಿ ಸ್ಥಾಪನೆಯಾಗುತ್ತದೆ ಎಂದಿದ್ದಾರೆ. ತೀರ್ಪು ನೀಡಿದ ಅವರು, ಗೋವು ಕೇವಲ ಪ್ರಾಣಿಯಲ್ಲ ಅದು ತಾಯಿ. ಹಸುವಿನಷ್ಟು ಕೃತಜ್ಞತೆ ಯಾವುದೂ ಇಲ್ಲ ಎಂದು ಹೇಳಿದರು.
"ಇಡೀ ಬ್ರಹ್ಮಾಂಡದ ಮೇಲೆ ಗೋವಿನ ಬಾಧ್ಯತೆ ವಿವರಣೆಯನ್ನು ನಿರಾಕರಿಸುತ್ತದೆ. ಹಸುವಿನ ರಕ್ತವು ಭೂಮಿಯ ಮೇಲೆ ಬೀಳದ ದಿನ ಭೂಮಿಯ ಎಲ್ಲಾ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ ಮತ್ತು ಭೂಮಿಯ ಯೋಗಕ್ಷೇಮವು ಸ್ಥಾಪನೆಯಾಗುತ್ತದೆ" ಎಂದು ತೀರ್ಪು ನೀಡುವಾಗ ಅವರು ಹೇಳಿದರು. ಆದೇಶ ಗುಜರಾತಿ ಭಾಷೆಯಲ್ಲಿತ್ತು ಎಂದೂ ತಿಳಿದುಬಂದಿದೆ. ಗೋಸಂರಕ್ಷಣೆಗೆ ಸಂಬಂಧಿಸಿದ ಮಾತುಕತೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗೋ ರಕ್ಷಣೆಗಾಗಿ ಗೋಶಾಲೆ ಸ್ಥಾಪನೆ: ಸಚಿವ ಪ್ರಭು ಚವ್ಹಾಣ್
ಹಸುವಿನ ಧಾರ್ಮಿಕ ಅಂಶವನ್ನು ಮಾತ್ರವಲ್ಲದೆ ಅದರ ಸಾಮಾಜಿಕ, ಆರ್ಥಿಕ ಮತ್ತು ವೈಜ್ಞಾನಿಕ ಪ್ರಯೋಜನಗಳನ್ನು ಪರಿಗಣಿಸುವಂತೆ ನ್ಯಾಯಾಧೀಶರು ಜನರಿಗೆ ಕರೆ ನೀಡಿದರು. ವಿವಿಧ ಶ್ಲೋಕಗಳನ್ನು ಉಲ್ಲೇಖಿಸುವಾಗ, ಯಾರಾದರೂ ಹಸುವನ್ನು ಅತೃಪ್ತಿಗೊಳಿಸಿದರೆ, ಅವನ ಎಲ್ಲಾ ಸಂಪತ್ತು ಮತ್ತು ಆಸ್ತಿಯು ಕಣ್ಮರೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ?:
16 ಹಸುಗಳನ್ನು ಅಕ್ರಮವಾಗಿ ಕಳ್ಳಸಾಗಣಿಕೆ ಮಾಡುತ್ತಿದ್ದಾನೆ ಎಂದು 2020ರ ಆಗಸ್ಟ್ 27ರಂದು ಗುಜರಾತ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಂದ ನಂತರ ಗೋಹತ್ಯೆ ತಡೆಗಟ್ಟಲಾಗಿದೆ: ಅರುಣ ಸಿಂಗ್