ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವು ತೀವ್ರ ಹೊಯ್ದಾಟಕ್ಕೆ ಸಿಲುಕಿ 300 ಅಡಿ ಕೆಳಗೆ ಕುಸಿದಿದೆ. ಈ ಘಟನೆಯ ನಂತರ ನಡೆಸಿದ ಡೋಪ್ ಪರೀಕ್ಷೆಯಲ್ಲಿ, ವಿಮಾನದ ಪೈಲಟ್ ಒಬ್ಬರು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದ್ದು, ಡಿಜಿಸಿಎ ಇಬ್ಬರೂ ಪೈಲಟ್ಗಳನ್ನು ಅಮಾನತುಗೊಳಿಸಿದೆ.
ನವದೆಹಲಿ: ಫುಕೆಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಹಾರಾಟದ ವೇಳೆ ತೀವ್ರ ಹೊಯ್ದಾಟಕ್ಕೆ (ಟರ್ಬುಲೆನ್ಸ್) ತುತ್ತಾಗಿ ದಿಢೀರ್ 300 ಅಡಿ ಕೆಳಗೆ ಕುಸಿದಿದ್ದು, ಘಟನೆಯ ಬಳಿಕ ನಡೆಸಿದ ಪರೀಕ್ಷೆಯಲ್ಲಿ ವಿಮಾನದ ಪೈಲಟ್ ಒಬ್ಬರು ಮಾದಕ ವಸ್ತು (ಡ್ರಗ್ಸ್) ಸೇವಿಸಿರುವುದು ದೃಢಪಟ್ಟಿದೆ.ಇಬ್ಬರು ಪೈಲಟ್ಗಳ ಪೈಕಿ ಒಬ್ಬರು ನಿಷೇಧಿತ ಪದಾರ್ಥ ಸೇವಿಸಿದ್ದುದು ಡೋಪ್ ಪರೀಕ್ಷೆಯಿಂದ ಪತ್ತೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಇದೇ ವೇಳೆ, ಟರ್ಬುಲನ್ಸ್ಗೆ ಸಂಬಂಧಿಸಿದಂತೆ ಡ್ರಗ್ಸ್ ಸೇವಿಸಿದ ಪೈಲಟ್ ಸೇರಿ ವಿಮಾನದ ಇಬ್ಬರೂ ಪೈಲಟ್ಗಳನ್ನು ಡಿಜಿಸಿಎ ಅಮಾನತು ಮಾಡಿದೆ.
ಆಗಸ್ಟ್ 5 ರಂದು ಥಾಯ್ಲೆಂಡ್ನ ಫುಕೆಟ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (AI-2379) ದೆಹಲಿ ತಲುಪುವ ವೇಳೆಗೆ, ಬೆಳಗಿನ ಜಾವ 10:00 ಗಂಟೆಯ ಸುಮಾರಿಗೆ ದಿಢೀರ್ ಎಂದು ತೀವ್ರ ಕುಲುಕಾಟಕ್ಕೆ ಒಳಗಾಯಿತು. ಈ ವೇಳೆ ವಿಮಾನವು ಸುಮಾರು 5 ನಿಮಿಷಗಳ ಕಾಲ ನಿಯಂತ್ರಣ ತಪ್ಪಿ ಏಕಾಏಕಿ 300 ಅಡಿಗಳಷ್ಟು ಕೆಳಕ್ಕೆ ಕುಸಿಯಿತು. ವಿಮಾನದಲ್ಲಿದ್ದ 134ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಸೇರಿ ಒಟ್ಟು 142 ಜನರ ಪೈಕಿ, 4 ಕ್ರೂ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದರು.
ಪ್ರಯಾಣಿಕರ ಭೀಕರ ಅನುಭವ
ವಿಮಾನದಲ್ಲಿದ್ದ ಪ್ರಯಾಣಿಕರ ಪ್ರಕಾರ, ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ವಿಮಾನವು ಕೆಳಕ್ಕೆ ಕುಸಿದಿದ್ದರಿಂದ ಸೀಟ್ ಬೆಲ್ಟ್ ಧರಿಸದಿರುತ್ತಿದ್ದ ಹಲವು ಪ್ರಯಾಣಿಕರು ಆಸನಗಳಿಂದ ಕೆಳಗೆ ಬಿದ್ದರು. ಕೆಲವರ ತಲೆ ವಿಮಾನದ ಮೇಲ್ಭಾಗದ ಸೀಲಿಂಗ್ಗೆ ಗಟ್ಟಿಯಾಗಿ ಡಿಕ್ಕಿ ಹೊಡೆದರೆ, ಇನ್ನು ಕೆಲವರು ವಿಮಾನದ ನೆಲದ ಮೇಲೆ ಉರುಳಿಬಿದ್ದರು. ಈ ಘಟನೆಯು ಪ್ರಯಾಣಿಕರಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣವನ್ನು ಸೃಷ್ಟಿಸಿತ್ತು. ಈ ಎಲ್ಲಾ ಆತಂಕಗಳ ನಡುವೆಯೂ ವಿಮಾನವು ಬೆಳಿಗ್ಗೆ 11:30 ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಲಾಯಿತು.
ಡೋಪ್ ಪರೀಕ್ಷೆಯಲ್ಲಿ ಪೈಲಟ್ ಫೇಲ್: ಇಬ್ಬರ ಅಮಾನತು
ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದ ನಂತರ, ನಿಗದಿತ ನಿಯಮಾವಳಿಗಳಂತೆ (ಪ್ರೋಟೋಕಾಲ್) ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳನ್ನು 'ಡೋಪ್ ಪರೀಕ್ಷೆಗೆ' (ಮಾದಕದ್ರವ್ಯ ಸೇವನೆ ಪರೀಕ್ಷೆ) ಒಳಪಡಿಸಲಾಯಿತು. ಈ ವರದಿಯಲ್ಲಿ ಇಬ್ಬರು ಪೈಲಟ್ಗಳ ಪೈಕಿ ಮುಖ್ಯ ಪೈಲಟ್/ಕಾಕ್ಪಿಟ್ ಸಿಬ್ಬಂದಿಯೊಬ್ಬರು ನಿಷೇಧಿತ ಮಾದಕ ವಸ್ತುವನ್ನು ಸೇವಿಸಿರುವುದು ದೃಢಪಟ್ಟಿದೆ. ವಿಮಾನಯಾನ ಭದ್ರತಾ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಕ್ಷಣವೇ ಕ್ರಮ ಕೈಗೊಂಡು ಘಟನೆಯಲ್ಲಿದ್ದ ಇಬ್ಬರೂ ಪೈಲಟ್ಗಳನ್ನು ಅಮಾನತುಗೊಳಿಸಿದೆ.
ಡಿಜಿಸಿಎ ತನಿಖೆ ಹಾಗೂ ಏರ್ ಇಂಡಿಯಾ ಸ್ಪಷ್ಟನೆ
ಇದೇ ವೇಳೆ, ಇದ್ದಕ್ಕಿದ್ದಂತೆ ವಿಮಾನದ ಎತ್ತರ ಕುಸಿತವಾದ ಕಾರಣ ಪತ್ತೆಗೆ ತನಿಖೆಯನ್ನು ದೇಶದ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಯಾಗಿರುವ ಡಿಜಿಸಿಎ ಕೈಗೆತ್ತಿಕೊಂಡಿದೆ. ಇದರ ತನಿಖೆಯ ವರದಿ ಬಂದ ನಂತರ ಈ ಪ್ರಕರಣವನ್ನು ವಿಮಾನ ಅಪಘಾತ ತನಿಖಾ ಸಂಸ್ಥೆಗೆ (AAIB) ವಹಿಸಬೇಕೇ ಬೇಡವೇ ಎಂಬ ನಿರ್ಧಾರವನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಪೈಲಟ್ಗಳು ಅಮಾನತಿನಲ್ಲಿರಲಿದ್ದಾರೆಂದು ತಿಳಿಸಿದೆ.
ಏರ್ ಇಂಡಿಯಾ ಪ್ರತಿಕ್ರಿಯೆ: ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, "ನಿಯಮಾವಳಿಗಳ ಪ್ರಕಾರ ಪ್ರತಿಯೊಂದು ಹಾರಾಟಕ್ಕೂ ಮುನ್ನ ಸಿಬ್ಬಂದಿಯ ವೈದ್ಯಕೀಯ ಮತ್ತು ಡ್ರಗ್ಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ, ಈ ನಿರ್ದಿಷ್ಟ ಪ್ರಕರಣದ ಅಧಿಕೃತ ಡೋಪ್ ಪರೀಕ್ಷೆಯ ವರದಿ ನಮಗೆ ಇನ್ನೂ ಪೂರ್ಣವಾಗಿ ಲಭ್ಯವಾಗಿಲ್ಲ. ತನಿಖಾಧಿಕಾರಿಗಳ ಜತೆ ಸಂಪೂರ್ಣ ಸಹಕಾರ ನೀಡಲಾಗುವುದು" ಎಂದು ತಿಳಿಸಿದೆ.
ಟರ್ಬುಲೆನ್ಸ್ಗೆ ಕಾರಣವೇನು?
ಸಾಮಾನ್ಯವಾಗಿ ಹಾರಾಟದ ಸಮಯದಲ್ಲಿ ಗಾಳಿಯ ಒತ್ತಡದಲ್ಲಾಗುವ ದಿಢೀರ್ ವ್ಯತ್ಯಾಸ, ಉಷ್ಣಾಂಶದ ಏರಿಳಿತ ಅಥವಾ ಗಾಳಿಯ ಚಲನೆಯ ದಿಕ್ಕು ಬದಲಾಗುವುದರಿಂದ ವಿಮಾನಗಳಲ್ಲಿ ಇಂತಹ ತೀವ್ರ ಕುಲುಕಾಟ (Turbulence) ಮತ್ತು ಎತ್ತರ ಕುಸಿತದ ಘಟನೆಗಳು ಸಂಭವಿಸುತ್ತವೆ.


