Asianet Suvarna News Asianet Suvarna News

ಏಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ: ಅಲ್ಪಸಂಖ್ಯಾತರ ಹೊರಗಿಡಿ ಎಂದ ಮುಸ್ಲಿಂ ಬೋರ್ಡ್‌

ದಕ್ಷಿಣ ಭಾರತದಲ್ಲಿ ಬಿಜೆಪಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷ ಏಕರೂಪ ಸಂಹಿತೆಗೆ ಸಂಬಂಧಿಸಿದಂತೆ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ತಿಳಿಸಿದೆ.

aiadmk opposes universal civil code muslim board wants to keep out minorities ash
Author
First Published Jul 6, 2023, 3:31 PM IST

ಚೆನ್ನೈ / ಲಖನೌ / ಹೊಸದೆಹಲಿ (ಜುಲೈ 6, 2023): ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಇದೀಗ ಬಿಜೆಪಿಯ ಮಿತ್ರ ಪಕ್ಷವೇ ವಿರೋಧಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷ ಏಕರೂಪ ಸಂಹಿತೆಗೆ ಸಂಬಂಧಿಸಿದಂತೆ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಅಧ್ಯಕ್ಷ ಕೆ. ಪಳನಿಸ್ವಾಮಿ, ‘ನಾವು 2019ರ ನಮ್ಮ ಚುನಾವಣೆ ಪ್ರಣಾಳಿಕೆಯ ಬಿಡುಗಡೆ ಮಾಡುವ ಸಮಯದಲ್ಲೇ ಹೇಳಿದ್ದೇವೆ. ನಾವು ಜಾತ್ಯಾತೀತವಾಗಿದ್ದು, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಿದ್ದೇವೆ. ಒಂದು ವೇಳೆ ಅದನ್ನು ಜಾರಿ ಮಾಡಿದರೆ ಅದು ಧರ್ಮವಾರು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿಗೆ ಪರೋಕ್ಷವಾಗಿ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

ಏಕರೂಪ ಸಂಹಿತೆಯಿಂದ ಅಲ್ಪಸಂಖ್ಯಾತರ ಹೊರಗಿಡಿ: ಮುಸ್ಲಿಂ ಬೋರ್ಡ್‌
ಲಖನೌ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ತನ್ನ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಧಾರ್ಮಿಕ ಅಲ್ಪಸಂಖ್ಯಾತರನ್ನು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಬೇಕು ಎಂದು ಬುಧವಾರ ಆಗ್ರಹಿಸಿದೆ. ಈ ಸಂಬಂಧ ಅದು ಕಾನೂನು ಆಯೋಗಕ್ಕೆ ತನ್ನ ಅಭಿಪ್ರಾಯ ಸಲ್ಲಿಸಿದೆ.

ಇದನ್ನು ಓದಿ:  ತೆಲಂಗಾಣದಲ್ಲೂ ಕೈ ‘ಗ್ಯಾರಂಟಿ’ ಘೋಷಣೆ; ಏಕರೂಪ ಸಂಹಿತೆ ಬಗ್ಗೆ ಕಾದು ನೋಡುವ ತಂತ್ರ!

ಏಕರೂಪ ಸಂಹಿತೆ ಕುರಿತ ತನ್ನ ನಿಲುವಿಗೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಕೇವಲ ಬುಡಕಟ್ಟು ಜನಾಂಗ ಮಾತ್ರವಲ್ಲದೇ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರನ್ನು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಬೇಕು ಎಂದು ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ವಕ್ತಾರ ಕಾಸಿಮ್‌ ರಸೂಲ್‌ ಇಲ್ಯಾಸ್‌ ಹೇಳಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮೊದಲಿನಿಂದಲೂ ಏಕರೂಪ ಸಂಹಿತೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಭಾರತ ಹಲವು ಧರ್ಮ ಹಾಗೂ ಸಂಸ್ಕೃತಿಗಳನ್ನು ಹೊಂದಿರುವ ದೇಶವಾಗಿದೆ. ಹಾಗಾಗಿ ಇಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ರಸೂಲ್‌ ಹೇಳಿದ್ದಾರೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಗೆ ಕಾಂಗ್ರೆಸ್‌ ಸಚಿವನ ಬೆಂಬಲ: ಸಂಹಿತೆ ಬಗ್ಗೆ ಮಾತನಾಡದಂತೆ ದೆಹಲಿ ಶಾಹಿ ಇಮಾಂ ಫತ್ವಾ

ಏಕರೂಪ ಸಂಹಿತೆಗೆ ಸಂಬಂಧಿಸಿದಂತೆ ಆಕ್ಷೇಪಗಳನ್ನು ಸಲ್ಲಿಸಲು ಕಾನೂನು ಆಯೋಗ ಜುಲೈ 14 ರವರೆಗೆ ಅವಕಾಶ ನೀಡಿದೆ. ಇದನ್ನು 6 ತಿಂಗಳಿಗೆ ವಿಸ್ತರಿಸುವಂತೆ ಈ ಮೊದಲು ಮುಸ್ಲಿಂ ಮಂಡಳಿ ಮನವಿ ಮಾಡಿತ್ತು.

ಆದಿವಾಸಿಗಳಿಗೆ ಏಕರೂಪ ಸಂಹಿತೆ ಬೇಡ: ಸಂಸದೀಯ ಸಮಿತಿ
ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ಕಾನೂನು ಆಯೋಗ ಮತ್ತು ಕಾನೂನು ಸಚಿವಾಲಯದ ಜೊತೆ ಸಂಸದೀಯ ಸ್ಥಾಯಿ ಸಮಿತಿ ಸೋಮವಾರ ಸಭೆ ನಡೆಸಿದೆ. ಇದರಲ್ಲಿ ಸಮಿತಿ ಮುಖ್ಯಸ್ಥ ಸುಶೀಲ್‌ ಕುಮಾರ್‌ ಮೋದಿ ಅವರು ಈಶಾನ್ಯದ ಆದಿವಾಸಿಗಳು ಸೇರಿದಂತೆ ದೇಶದ ಇತರ ಆದಿವಾಸಿಗಳಿಗೆ ಸಂಹಿತೆ ಅನ್ವಯ ಆಗಬಾರದು ಎಂಬ ಅಭಿಪ್ರಾಯ ಮಂಡಿಸಿದ್ದಾರೆ.

ಇದನ್ನು ಓದಿ: ಏಕರೂಪ ನಾಗರಿಕ ಸಂಹಿತೆ ದೇಶದಲ್ಲೇ ಮೊದಲು ಉತ್ತರಾಖಂಡದಲ್ಲಿ ಜಾರಿ? ಉದ್ಧವ್‌ ಠಾಕ್ರೆಯಿಂದ್ಲೂ ಬೆಂಬಲ!

ಆದರೆ ಸಮಿತಿಯಲ್ಲಿನ ವಿಪಕ್ಷಗಳ ಸದಸ್ಯರು, ‘ಲೋಕಸಭೆ ಚುನಾವಣೆ ಕಾರಣಕ್ಕೆ ಸಂಹಿತೆ ಜಾರಿ ಬಗ್ಗೆ ಸರ್ಕಾರ ಪ್ರಸ್ತಾಪಿಸುತ್ತಿದೆ. 2018ರಲ್ಲಿ ಸಂಹಿತೆ ಅಗತ್ಯವಿಲ್ಲ ಎಂದು ಅಂದಿನ ಕಾನೂನು ಆಯೋಗ ಹೇಳಿತ್ತು. ಆದರೆ ಈಗ ಮತ್ತೆ ಅದೇ ಆಯೋಗದ ಮೂಲಕ ಸಂಹಿತೆಯ ಬಗ್ಗೆ ಜನಾಭಿಪ್ರಾಯ ಯಾಚಿಸಲಾಗುತ್ತಿದೆ. ಇದು ರಾಜಕೀಯ ಪ್ರೇರಿತ’ ಎಂದು ಕಿಡಿಕಾರಿದರು ಎಂದು ಮೂಲಗಳು ಹೇಳಿವೆ.

ಆದರೆ ಸುಶೀಲ್‌ ಮೋದಿ ಮಾತ್ರ, ‘ಆದಿವಾಸಿಗಳಿಗೆ ಮಾತ್ರ ಸಂಹಿತೆ ಬೇಡ. ಏಕೆಂದರೆ ಅವರ ಪರಂಪರೆಯೇ ವಿಭಿನ್ನ. ಕೇಂದ್ರದ ಅನೇಕ ಕಾನೂನು ಅವರಿಗೆ ಅನ್ವಯಿಸಲ್ಲ. ಅದೇ ರೀತಿ ಸಂಹಿತೆ ಕೂಡ ಬೇಡ’ ಎಂದರು.

ಇದನ್ನೂ ಓದಿ: Uniform Civil Code: ರಾತ್ರೋರಾತ್ರಿ ಮುಸ್ಲಿಂ ಮಂಡಳಿ ಸಭೆ; ಸಂಹಿತೆಗೆ ಆಪ್‌ ಅಚ್ಚರಿಯ ತಾತ್ವಿಕ ಬೆಂಬಲ

ಸಭೆಯಲ್ಲಿ ಕಾನೂನು ಆಯೋಗ ಮತ್ತು ಕಾನೂನು ಸಚಿವಾಲಯದ ಪ್ರತಿನಿಧಿಗಳು ಕೂಡ ಪಾಲ್ಗೊಂಡು ಮಾಹಿತಿ ನೀಡಿದರು. ಏಕರೂಪ ನಾಗರಿಕ ಸಂಹಿತೆಯ ಕುರಿತಾಗಿ ಕಾನೂನು ಆಯೋಗ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.

ಇದನ್ನೂ ಓದಿ: ಏಕರೂಪದ ಸಂಹಿತೆ ಪ್ರಸ್ತಾಪಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲ: ಮುಸ್ಲಿಂ ಮಂಡಳಿ ಆಕ್ಷೇಪ

Follow Us:
Download App:
  • android
  • ios