ಕೇಂದ್ರದ ಧೋರಣೆಗಳನ್ನು ಸದಾ ವಿರೋಧಿಸುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷ (ಆಪ್‌), ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆಗೆ ‘ತಾತ್ವಿಕ ಬೆಂಬಲ’ ಪ್ರಕಟಿಸಿದೆ.

ಲಖನೌ / ನವದೆಹಲಿ (ಜೂನ್ 29, 2023): ‘ಏಕರೂಪ ನಾಗರಿಕ ಸಂಹಿತೆ ಜಾರಿ ಇಂದಿನ ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಭೋಪಾಲ್‌ನಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಮಂಗಳವಾರ ತಡರಾತ್ರಿ ಮುಸ್ಲಿಮರ ಪರಮೋಚ್ಚ ಮಂಡಳಿತಾದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದೆ.
‘ಇದು ಮಾಮೂಲಿ ಸಭೆ. ಮೋದಿ ಹೇಳಿಕೆಗೂ ಸಭೆಗೂ ಸಂಬಂಧವಿಲ್ಲ’ ಮಂಡಳಿ ಸದಸ್ಯ ಖಾಲಿದ್‌ ರಶೀದ್‌ ಫರಂಗಿ ಮಹಲಿ ಅವರು ಹೇಳಿದ್ದಾರಾದರೂ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿದ್ದನ್ನು ಅವರೇ ಧೃಢಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಸಂಹಿತೆ ಬಗ್ಗೆ ಕೇಂದ್ರ ಕಾನೂನು ಆಯೋಗಕ್ಕೆ ಅಭಿಪ್ರಾಯ ಸಲ್ಲಿಸಲು ಜುಲೈ 14 ಕಡೆಯ ದಿನ. ಆ ಬಗ್ಗೆ ಮೊದಲೇ ನಿರ್ಧರಿಸಿದಂತೆ ಸಭೆ ನಡೆಸಿದ್ದೆವು. ಮೋದಿ ಹೇಳಿಕೆಗೂ ನಮ್ಮ ಸಭೆಗೂ ಸಂಬಂಧವಿಲ್ಲ. ಆದರೆ ಸಂಹಿತೆ ಜಾರಿಗೆ ನಮ್ಮ ವಿರೋಧವಿದೆ. ಏಕೆಂದರೆ ಅನೇಕ ಧರ್ಮೀಯರರು ವಾಸಿಸುವ ವೈವಿಧ್ಯಮಯ ದೇಶ ಭಾರತ. ಒಂದೇ ಕಾನೂನು ಜಾರಿಗೆ ತಂದರೆ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳು, ಸಿಖ್ಖರು, ಬೌದ್ಧರು, ಕ್ರೈಸ್ತರು, ಜೈನರು, ಯೆಹೂದುಗಳು, ಪಾರ್ಸಿಗಳು ಹಾಗೂ ಇತರ ಸಮುದಾಯಗಳ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಮಹಲಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನು ಓದಿ: ಏಕರೂಪದ ಸಂಹಿತೆ ಪ್ರಸ್ತಾಪಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲ: ಮುಸ್ಲಿಂ ಮಂಡಳಿ ಆಕ್ಷೇಪ

ಏಕರೂಪ ಸಂಹಿತೆಗೆ ಆಪ್‌ ಅಚ್ಚರಿಯ ‘ತಾತ್ವಿಕ ಬೆಂಬಲ’: ಎಲ್ಲರೊಡನೆ ಚರ್ಚಿಸಿ ಸಹಮತದಿಂದ ಜಾರಿ ಮಾಡಿ: ಷರತ್ತು ವಿಧಿಸಿದ ಪಕ್ಷ
ನವದೆಹಲಿ: ಅಚ್ಚರಿಯ ನಡೆಯೊಂದರಲ್ಲಿ, ಕೇಂದ್ರದ ಧೋರಣೆಗಳನ್ನು ಸದಾ ವಿರೋಧಿಸುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷ (ಆಪ್‌), ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆಗೆ ‘ತಾತ್ವಿಕ ಬೆಂಬಲ’ ಪ್ರಕಟಿಸಿದೆ. ಆದರೆ, ಸಂಹಿತೆಯನ್ನು ಎಲ್ಲ ಸಂಬಂಧಪಟ್ಟವರ ಜತೆ ಚರ್ಚಿಸಿ ಸಹಮತಕ್ಕೆ ಬಂದ ನಂತರವೇ ಜಾರಿಗೊಳಿಸಬೇಕು ಎಂಬ ಷರತ್ತನ್ನು ಅದು ವಿಧಿಸಿದೆ. ಬಹುತೇಕ ವಿಪಕ್ಷಗಳು ಸಂಹಿತೆ ವಿರೋಧಿಸುತ್ತಿದ್ದರೆ ಆಪ್‌ ಮಾತ್ರ ಅದರ ಬೆಂಬಲಕ್ಕೆ ನಿಂತಿರುವುದು ಗಮನಾರ್ಹವಾಗಿದೆ.

ಈ ಬಗ್ಗೆ ಮಾತನಾಡಿದ ಆಪ್‌ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂದೀಪ್‌ ಪಾಠಕ್‌, ‘ಏಕರೂಪ ಸಂಹಿತೆಗೆ ಆಪ್‌ ತಾತ್ವಿಕ ಬೆಂಬಲ’ ನೀಡಲಿದೆ. ಸಂವಿಧಾನದ 44ನೇ ಪರಿಚ್ಛೇದವೂ ಏಕರೂಪ ಸಂಹಿತೆಯನ್ನು ಬೆಂಬಲಿಸಿದೆ. ಆದರೆ ಎಲ್ಲ ಭಾಗೀದಾರರ ಜತೆ ಸಮನ್ವಯ ಸಾಧಿಸಿ ಒಮ್ಮತಕ್ಕೆ ಬಂದ ನಂತರ ಮಾತ್ರ ಸಂಹಿತೆ ಜಾರಿಗೊಳಿಸಬೇಕು’ ಎಂದು ಹೇಳಿದರು.

ಇದನ್ನೂ ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್‌

ಏಕರೂಪ ಸಂಹಿತೆ ಬಗ್ಗೆ ಕಾನೂನು ಆಯೋಗ ಜನಾಭಿಪ್ರಾಯ ಬಯಸಿದ್ದು, ಜುಲೈ 14 ಕಡೆಯ ದಿನವಾಗಿದೆ. ಇನ್ನು ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಸಂಹಿತೆ ಪರ ಬ್ಯಾಟ್‌ ಬೀಸಿದ್ದರು.

ಸಮಾನ ನಾಗರಿಕ ಸಂಹಿತೆಗೆ 8.5 ಲಕ್ಷ ಜನ ಪ್ರತಿಕ್ರಿಯೆ
ನವದೆಹಲಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಬಗ್ಗೆ ಜನರ ಅಭಿಪ್ರಾಯ ಆಲಿಸಲು ಕಾನೂನು ಆಯೋಗವು ಅವಕಾಶ ನೀಡಿದ್ದಕ್ಕೆ ಈವರೆಗೂ 8.5 ಲಕ್ಷ ಪ್ರತಿಕ್ರಿಯೆಗಳು ಬಂದಿದೆ. ಈ ಮಾಹಿತಿಯನ್ನು ಕಾನೂನು ಆಯೋಗದ ಮುಖ್ಯಸ್ಥರಾದ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ,‘ಜನರ ಪ್ರತಿಕ್ರಿಯೆ ಕೇಳಲು ಅವಕಾಶ ನೀಡಿದ 2 ವಾರದಲ್ಲಿ ಈಗಾಗಲೇ 8.5 ಲಕ್ಷ ಪ್ರತಿಕ್ರಿಯೆಗಳು ಬಂದಿದೆ ಎಂದು ಮಾಹಿತಿ ನೀಡಿದರು. ಜುಲೈ 14ರವರೆಗೂ ಜನರಿಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡಲಾಗಿದೆ. ಯುಸಿಸಿ ಎಂದರೆ ದೇಶದ ಎಲ್ಲ ಧರ್ಮ, ಜಾತಿ ಜನರಿಗೆ ಸಮಾನವಾದ ಒಂದೇ ಕಾನೂನು ಅನ್ವಯವಾಗುವುದು.

ಇದನ್ನೂ ಓದಿ: ಏಕರೂಪದ ಸಂಹಿತೆ ರೂಪಿಸಲು ರಾಜ್ಯಗಳಿಗೆ ಅಧಿಕಾರ: ಸುಪ್ರೀಂಕೋರ್ಟ್‌