ಥೂ ಪಾಪಿಗಳಾ: ಮಾತೂ ಬಾರದ ಕಿವಿಯೂ ಕೇಳದ 11 ವರ್ಷದ ಬಾಲಕಿ ಮೇಲೆ ಕಾಮುಕರ ಕ್ರೌರ್ಯ

Synopsis
ಉತ್ತರ ಪ್ರದೇಶದ ರಾಮಂಪುರದಲ್ಲಿ 11 ವರ್ಷದ ಮಾತು ಬಾರದ ಕಿವಿಯೂ ಕೇಳದ ಬಾಲಕಿಯ ಮೇಲೆ ಕ್ರೌರ್ಯ ನಡೆದಿದ್ದು, ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ರಾಮಂಪುರ: ರಾಜ್ಯದ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಬಲಾತ್ಕಾರವೆಸಗಿ ಕೊಲೆ ಮಾಡಿದ ಪ್ರಕರಣ ನಡೆದು ವಾರವೂ ಕಳೆದಿಲ್ಲ. ಅಷ್ಟರಲ್ಲೇ ಉತ್ತರ ಪ್ರದೇಶದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. ಕಿವಿಯೂ ಕೇಳದ ಮಾತೂ ಬಾರದ 11 ವರ್ಷದ ಬಾಲಕಿಯೊಬ್ಬಳ ಮೇಲೆ ಭೀಕರವಾಗಿ ಬಲಾತ್ಕಾರ ಮಾಡಲಾಗಿದೆ. ಉತ್ತರ ಪ್ರದೇಶದ ರಾಮಂಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾಲಿಗೆ ಗುಂಡು ಹಾರಿಸುವ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ.
ಬಲಾತ್ಕಾರಕ್ಕೊಳಗಾದ ಬಾಲಕಿ ಮಂಗಳವಾರ ಸಂಜೆಯಿಂದಲೂ ನಾಪತ್ತೆಯಾಗಿದ್ದಳು. ಹೀಗಾಗಿ ಆಕೆಯ ಕುಟುಂಬ ಸದಸ್ಯರು ಆಕೆಗಾಗಿ ಹುಡುಕಾಟ ನಡೆಸಿದ್ದರು. ಆದರೆ ನಿನ್ನೆಯ ದಿನ ಮುಂಜಾನೆ ಆಕೆ ಬೆತ್ತಲೆಯಾಗಿ ಗಾಯಗೊಂಡ ಸ್ಥಿತಿಯಲ್ಲಿ ಹೊಲವೊಂದರಲ್ಲಿ ಪತ್ತೆಯಾಗಿದ್ದಳು. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ಗೆ ಕರೆದೊಯ್ಯಲಾಯಿತು. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ಮೇಲಿನ ಬಲಾತ್ಕಾರ ಆರೋಪ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಕಠಿಣ ವಿಭಾಗಗಳ ಅಡಿಯಲ್ಲಿ ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಘಟನೆಯ ಬಳಿಕ ಆರೋಪಿಯ ಸುಳಿವು ಪತ್ತೆ ಮಾಡಲು ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದೇ ಗ್ರಾಮದ ನಿವಾಸಿ ಡಾನ್ ಸಿಂಗ್ (24) ಎಂಬಾತನ ಮೇಲೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಆತನನ್ನು ಬಂಧಿಸಲು ಹೋಗಿದ್ದಾರೆ. ಆದರೆ ಈ ವೇಳೆ ಆತ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದು, ಆತನ ಕಾಲಿಗೆ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರೀಲ್ಸ್ಗೆ ಆಕ್ಷೇಪ: ಲವರ್ ಜೊತೆ ಸೇರಿ ಗಂಡನ ಕತೆ ಮುಗಿಸಿದ ಇನ್ಸ್ಟಾ ಸ್ಟಾರ್
ಘಟನೆಯ ನಂತರ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯೆ ಅಂಜು ಸಿಂಗ್, ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಮಾಹಿತಿಯಂತೆ , ಇಲ್ಲಿ ಬಾಲಕಿ ಮೇಲೆ ಒಬ್ಬರೇ ಕೃತ್ಯ ನಡೆಸಿದಂತೆ ಕಾಣುತ್ತಿಲ್ಲ, ಒಬ್ಬರಿಗಿಂತ ಹೆಚ್ಚು ಜನ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಏಕೆಂದರೆ ಆಕೆಯ ಖಾಸಗಿ ಭಾಗಗಳಲ್ಲಿ ಅನೇಕ ಗಾಯಗಳಾಗಿದ್ದವು. ಆಕೆಯ ಮುಖಕ್ಕೆ ಯಾವುದೋ ಗಟ್ಟಿಯಾದ ವಸ್ತುವಿನಿಂದ ಹೊಡೆದಿದ್ದರಿಂದ ಮುಖ ಊದಿಕೊಂಡಿತ್ತು. ಆಕೆ ಭಯಭೀತಳಾಗಿದ್ದಳು ಮತ್ತು ಏನನ್ನೂ ವಿವರಿಸಲು ಆಕೆಗೆ ಸಾಧ್ಯವಾಗಲಿಲ್ಲ. ನಾನು ನೋಡಿದ ಅತ್ಯಂತ ಭಯಾನಕ ಲೈಂಗಿಕ ಅಪರಾಧಗಳಲ್ಲಿ ಇದು ಒಂದು ಎಂದು ಅವರು ಘಟನೆಯ ಘೋರ ಚಿತ್ರಣವನ್ನು ತೆರೆದಿಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಂಪುರ ಪೊಲೀಸ್ ಮುಖ್ಯಸ್ಥೆ ವಿದ್ಯಾ ಸಾಗರ್ ಮಿಶ್ರಾ ಮಾತನಾಡಿ, ಬಾಲಕಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮಗಳಿಗೆ ಮಾತನಾಡುವುದಕ್ಕೆ ಹಾಗೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡು ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದೇವೆ. ಆರೋಪಿಯನ್ನು ಪತ್ತೆಹಚ್ಚಲು ಮೂರು ತಂಡಗಳನ್ನು ರಚಿಸಲಾಗಿದೆ. ನಾವು ಆತನನ್ನು ಬಂಧಿಸಲು ಪ್ರಯತ್ನಿಸಿದಾಗ, ಆತ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಿಂದ ಆತನಿಗೆ ಗುಂಡೇಟು ತಗುಲಿತು. ಆರೋಪಿಯ ವಿರುದ್ಧ ನಮ್ಮಲ್ಲಿ ಎಲೆಕ್ಟ್ರಾನಿಕ್ ಪುರಾವೆಗಳಿವೆ. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ಬಾಲಕಿಯೊಂದಿಗೆ ಆಕೆಯ ಮನೆಯ ಹೊರಗೆ ಮಾತನಾಡುತ್ತಿರುವುದು ಕಂಡುಬಂದಿದೆ. ನಂತರ ಅವನು ಆಕೆಯನ್ನು ಕೃತ್ಯ ನಡೆದ ಸ್ಥಳಕ್ಕೆ ತನ್ನೊಂದಿಗೆ ಬರುವಂತೆ ಮನವೊಲಿಸುತ್ತಾನೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಪಾಕಿಸ್ತಾನಿಯಿಂದ ತೆಲಂಗಾಣದ ಇಬ್ಬರು ಕೆಲಸಗಾರರ ಹತ್ಯೆ!