ದೆಹಲಿ ಆಡಳಿತದ ಮೇಲೆ ಕೇಂದ್ರಕ್ಕೆ ಅಧಿಕಾರ ನೀಡಿರುವ ಸುಗ್ರಿವಾಜ್ಞೆ ವಿರುದ್ಧ ಆಮ್ ಆದ್ಮಿ ಪಾರ್ಟಿ ಸತತ ಹೋರಾಟ ನಡೆಸುತ್ತಿದೆ. ಹಲವು ಪಕ್ಷಗಳ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಇದೀಗ ಕಾನೂನು ಹೋರಾಟ ತೀವ್ರಗೊಳಿಸಿದ್ದಾರೆ. ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ನವದೆಹಲಿ(ಜೂ.30) ದೆಹಲಿ ಸರ್ಕಾರದ ಆಡಳಿತದ ಮೇಲೆ ಕೇಂದ್ರಕ್ಕೆ ಅಧಿಕಾರ ಹೊಂದಿರುವ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಾರ್ಟಿ ಸತತ ಹೋರಾಟ ನಡೆಸುತ್ತಿದೆ. ಈ ಮಸೂದೆ ವಿರುದ್ಧ ಮತ ಹಾಕಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಲವು ಪಕ್ಷಗಳ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಒಂದೆಡೆ ರಾಜಕೀಯ ಹೋರಾಟವಾದರೆ, ಮತ್ತೊಂದೆಡೆ ಕಾನೂನು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಇದೀಗ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 

ಕೇಂದ್ರದ ಸುಗ್ರೀವಾಜ್ಞೆ ಅಸಂವಿಧಾನಿಕವಾಗಿದೆ. ಸಂವಿಧಾನದ ಆರ್ಟಿಕಲ್ 239ಎಎ ಪರಿಚ್ಚೇದದ ತಿದ್ದುಪಡಿ ಮಾಡದೇ, ಚುನಾಯಿತ ಸರ್ಕಾರದ ಅಧಿಕಾರದ ನಿಯಂತ್ರಣವನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ. ದೆಹಲಿ ಆಡಳಿತವನ್ನು ಚುನಾಯಿತರಲ್ಲದ ಲೆಫ್ಟಿನೆಂಟ್ ಗರ್ವನರ್ ಪರಿಧಿಗೆ ಒಳಪಡಿಸುವುದು ಅಸಂವಿಧಾನಿಕವಾಗಿದೆ. ಹೀಗಾಗಿ ದೆಹಲಿ ಸುಗ್ರೀವಾಜ್ಞೆ ಜಾರಿಗೆ ತಡೆ ನೀಡಬೇಕು ಎಂದು ಕೋರಿ ಆಮ್ ಆದ್ಮಿ ಪಾರ್ಟಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಜೈಲುವಾಸ ತಪ್ಪಿಸಲು ಕೇಜ್ರಿವಾಲ್ ತಂತ್ರ, ಆಪ್ ಕುತಂತ್ರ ಬಯಲು ಮಾಡಿದ ಕಾಂಗ್ರೆಸ್ ನಾಯಕ!

ಮೇ 19 ರಂದು ದೆಹಲಿಯಲ್ಲಿ ಐಎಎಸ್ ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆ, ಅಧಿಕಾರವನ್ನು ನೀಡುವ ಕುರಿತು ಸುಗ್ರೀವಾಜ್ಞೆಯನ್ನು ಕೇಂದ್ರ ಪ್ರಕಟಿಸಿತ್ತು. ಈ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ವಿರೋಧಿಸಿತ್ತು.ಸುಗ್ರೀವಾಜ್ಞೆಯಲ್ಲಿ ಮುಖ್ಯಕಾರ್ಯದರ್ಶಿಗೆ ಸಚಿವ ಸಂಪುಟಕ್ಕಿಂತ ಉನ್ನತ ಸ್ಥಾನ ನೀಡಲಾ​ಗಿ​ದೆ ಎಂದು ಆರೋಪಿಸಿತ್ತು. 

ದೆಹಲಿಯಲ್ಲಿ ಸಚಿವರಿಗಿಂತ ಅಧಿಕಾರಿಗಳೆ ಉನ್ನತ ಸ್ಥಾನ ಹೊಂದಿರುತ್ತಾರೆ. ಮಂತ್ರಿಗಳು ತೆಗದುಕೊಂಡ ನಿರ್ಧಾರವನ್ನು ಅಧಿಕಾರಿಗಳು ವಜಾ ಮಾಡುತ್ತಾರೆ. ಇದು ಚುನಾಯಿತ ಸರ್ಕಾರದ ಕೈಗಳನ್ನು ಕಟ್ಟಿಹಾಕಿದಂತೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಈ ನಿರ್ಧಾರದ ವಿರುದ್ಧ ಕೇಜ್ರಿವಾಲ್ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಾಯಕರನ್ನು ಬೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ ಕಾಂಗ್ರೆಸ್ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಇತರ ಕೆಲ ಪಕ್ಷಗಳು ಕೇಜ್ರಿವಾಲ್‌ಗೆ ಬೆಂಬಲ ಸೂಚಿಸಿದೆ. ಕಾಂಗ್ರೆಸ್ ಸ್ಪಷ್ಟ ನಿಲುವು ಸೂಚಿಸದ ಕಾರಣ ವಿಪಕ್ಷಗಳ ಮೈತ್ರಿ ಸಭೆಯಿಂದ ಹೊರಗುಳಿಯಲು ಆಪ್ ನಿರ್ಧರಿಸಿದೆ.

 ಇತ್ತೀಚೆಗೆ ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ತಮ್ಮ ಪರ ಬೆಂಬಲ ಪಡೆಯಲು ದೇಶದ ಬಿಜೆಪಿಯೇತರ ಎಲ್ಲ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದ ಕೇಜ್ರಿವಾಲ್‌ ಲಖನೌದಲ್ಲಿ ಅಖಿಲೇಶ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಳಿಕ ಮಾತನಾಡಿದ ಅಖಿಲೇಶ್‌, ‘ಸುಗ್ರೀವಾಜ್ಞೆ ವಿಷಯದಲ್ಲಿ ನಮ್ಮ ಪಕ್ಷವು ದೆಹಲಿ ಆಪ್‌ ಸರ್ಕಾರವನ್ನು ಬೆಂಬಲಿಸುತ್ತದೆ ಎಂದಿದ್ದರು. 

ವಿಪಕ್ಷ ಸಭೆ ಬೆನ್ನಲ್ಲೇ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟ ಆಮ್ ಆದ್ಮಿ!

ದೆಹಲಿ ಆಡಳಿತದ ಮೇಲೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವ ಸುಗ್ರೀವಾಜ್ಞೆಗೆ ವಿರುದ್ಧ ದೆಹಲಿಯ ಆಡಳಿತಾರೂಢ ಆಪ್‌ಗೆ ಬೆಂಬಲ ಸೂಚಿಸುವುದಾಗಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಘೋಷಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ಬೆಂಬಲ ಸೂಚಿಸಿದ್ದರು. ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೇಜ್ರಿವಾಲ್‌, ಸಂಸತ್ತಿನಲ್ಲಿ ಮತಕ್ಕೆ ಬಂದಾಗ ಈ ಸುಗ್ರೀವಾಜ್ಞೆಯನ್ನು ಎಲ್ಲರೂ ಒಮ್ಮತದಿಂದ ವಿರೋಧಿಸಬೇಕು ಎಂದು ಹೇಳಿದರು. ‘ಪ್ರಜಾಪ್ರಭುತ್ವದ ಮೇಲೆ ಕೇಂದ್ರ ಸರ್ಕಾರ ನಿರಂತರವಾಗಿ ದಾಳಿ ನಡೆಸುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಹೇಮಂತ್‌ ಸೋರೆನ್‌ ಹೇಳಿದರು.