ಬಿಹಾರದ ರೈಲು ನಿಲ್ದಾಣದಲ್ಲಿ, ಸೌತೆಕಾಯಿಗಳನ್ನು ತಾಜಾ ಎಂದು ತೋರಿಸಲು ರಾಸಾಯನಿಕ ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಮಹಿಳೆಯರ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಪ್ರಯಾಣಿಕರಲ್ಲಿ ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೇಸಿಗೆಯ ತಾಪ ಹೆಚ್ಚಿದಂತೆ ಏನಾದರೂ ತಣ್ಣನೆಯ ವಸ್ತು, ಪಾನೀಯ ತಿನ್ನಬೇಕು, ಕುಡಿಯಬೇಕು ಎನ್ನುವ ಹಂಬಲ ಉಂಟಾಗುತ್ತದೆ. ಅದರಲ್ಲಿಯೂ ಪ್ರಯಾಣದ ಸಮಯದಲ್ಲಿ ಏನಾದರೂ ತಂಪು ಸಿಕ್ಕರೆ ಎಷ್ಟು ಚೆನ್ನ ಎನ್ನುವವರೇ ಎಲ್ಲರೂ. ತಂಪು ಎಂದಾಕ್ಷಣ ಮೊದಲಿಗೆ ಕಾಣಬರುವುದು ಸೌತೇಕಾಯಿ. ರೈಲ್ವೆ ನಿಲ್ದಾಣಗಳಲ್ಲಿ, ಬಸ್​ ನಿಲ್ದಾಣಗಳಲ್ಲಿ ತಾಜಾ ತಾಜಾ ಸೌತೆಕಾಯಿ ನೋಡಿ ಬಾಯಲ್ಲಿ ನೀರೂರುತ್ತದೆ. ಅದಕ್ಕೆ ಉಪ್ಪು, ಮೆಣಸಿನ ಪುಡಿ ಸೇರಿಸಿ ಕೊಟ್ಟರೆ ಆಹಾ, ಬೇಸಿಗೆ ಮಾತ್ರವಲ್ಲದೇ ಎಲ್ಲಾ ಕಾಲದಲ್ಲಿಯೂ ತಿನ್ನಲು ಬಲು ರುಚಿ. ಆದರೆ ಹಾಗೆಂದು ಕಂಡಕಂಡಲ್ಲಿ ಇದನ್ನು ಖರೀದಿಸಿ ಸೇವಿಸುವವರಿಗೆ ಬಿಗ್​ ಶಾಕ್​ ಎನ್ನುವಂಥ ವಿಡಿಯೋ ಒಂದು ರೈಲ್ವೆ ನಿಲ್ದಾಣದಿಂದ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಣ್ಣದಲ್ಲಿ ಅದ್ದಿದ ಸೌತೆಕಾಯಿ

ಬಿಹಾರದ ರೈಲು ನಿಲ್ದಾಣದಲ್ಲಿ ಕೆಲವು ಮಹಿಳೆಯರು ಸೌತೆಕಾಯಿ ಫ್ರೆಷ್​ ಆಗಿರಲಿ ಎನ್ನುವ ಕಾರಣಕ್ಕೆ ಅದರ ಸಿಪ್ಪೆ ತೆಗೆದು ರಾಸಾಯನಿಕ ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿರುವ ಶಾಕಿಂಗ್​ ವಿಡಿಯೋ ಇದಾಗಿದೆ. ಇದನ್ನು ಯಾರೋ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಇದು ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪ್ರಯಾಣದ ಸಂದರ್ಭಗಳಲ್ಲಿ ಅಲ್ಲಿ ಸಿಗುವುದನ್ನೆಲ್ಲಾ ಕೊಂಡು ತಿನ್ನುವವರಿಗೆ ಇದು ದೊಡ್ಡ ಪಾಠವಾಗಿದೆ. ಇದಾಗಲೇ ರೈಲ್ವೆಯಲ್ಲಿಮಾರಾಟ ಆಗುವ ಚಹ, ನೀರು ಇವುಗಳ ಬಗ್ಗೆಯೂ ಸಾಕಷ್ಟು ವಿಡಿಯೋಗಳು ಬಂದಿವೆ. ಇದೀಗ ಸೌತೆಕಾಯಿಯ ವಿಡಿಯೋ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

ವಿಡಿಯೋ ವೈರಲ್​

ಈ ವಿಡಿಯೋ ವೈರಲ್ ಆಗುತ್ತಲೇ ರೈಲ್ವೆ ಇಲಾಖೆಯ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸೌತೆಕಾಯಿಗಳನ್ನು ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಒಂಬತ್ತು ಮಂದಿ ಮಹಿಳೆಯರನ್ನು ವಶಕ್ಕೆ ಪಡೆದುಕೊಂಮಡಿದ್ದಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಈ 9 ಮಂದಿಯೂ ಇರುವುದು ಖಚಿತವಾಗಿದೆ.

ಜನರ ಆಕ್ರೋಶ

ವಿಚಾರಣೆ ವೇಳೆ ಇನ್ನೂ ಶಾಕಿಂಗ್​ ವಿಷ್ಯ ತಿಳಿಸಿದ್ದಾರೆ ಮಹಿಳೆಯರು. ಮದುವೆ ಸಮಾರಂಭಗಳಲ್ಲಿ ಸಿಹಿತಿಂಡಿಗಳನ್ನು ತಯಾರಿಸಲು ಬಳಸುವಂತಹ ಹಸಿರು ಬಣ್ಣವನ್ನೇ ತಾನು ಬಳಸುತ್ತಿರುವುದಾಗಿ ಹೇಳಿದ್ದಾಳೆ. ಇದರಿಂದ ಸಿಹಿ ಪದಾರ್ಥಗಳ ಮೇಲೆಯೂ ಈಗ ಸಂದೇಹ ವ್ಯಕ್ತವಾಗಿದೆ. ಇವರು ಬಳಸುತ್ತಿದ್ದ ಕೆಮಿಕಲ್ಸ್​ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವಿಡಿಯೋ ವೈರಲ್​ ಆಗುತ್ತಲೇ, ಆಹಾರ ಸುರಕ್ಷತೆ ಮತ್ತು ಅಧಿಕಾರಿಗಳ ಹೊಣೆಗಾರಿಕೆಯ ಕುರಿತು ಭಾರಿ ಪ್ರಶ್ನೆ ಕೇಳುತ್ತಿದ್ದಾರೆ ಪ್ರಶ್ನಿಸುತ್ತಿದ್ದಾರೆ. ಸೂಕ್ತ ಕಠಿಣ ಕ್ರಮ ಅಗತ್ಯ. ಎಚ್ಚರಿಕೆ ಕೊಟ್ಟು ಬಿಟ್ಟರೆ ಏನೂ ಪ್ರಯೋಜನವಿಲ್ಲ. ರೈಲ್ವೆ ಅಧಿಕಾರಿಗಳು ಇದರ ಜವಾಬ್ದಾರಿ ಹೊರಬೇಕು ಎಂದೆಲ್ಲಾ ಹೇಳಿದ್ದಾರೆ.

Bihar Railway Station | Cucumber