Asianet Suvarna News Asianet Suvarna News

ಸತತ 4ನೇ ದಿನವೂ ಸಂಸತ್‌ ಕಲಾಪ ಬಲಿ, ಆರೋಪಗಳಿಗೆ ಸಂಸತ್ತಿನಲ್ಲೇ ಉತ್ತರ: ರಾಹುಲ್‌

ಲಂಡನ್‌ ಪ್ರವಾಸದ ವೇಳೆ ಆಡಿದ ಮಾತುಗಳ ಸಂಬಂಧ ಆಡಳಿತಾರೂಢ ಬಿಜೆಪಿ ಸದಸ್ಯರು ತಮ್ಮ ಮಾಡಿರುವ ಗಂಭೀರ ಆರೋಪಗಳಿಗೆ ಸದನದಲ್ಲೇ ಉತ್ತರ ನೀಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

4th day of the parliament also wasted Rahul said he will answer to allegations in the parliament akb
Author
First Published Mar 17, 2023, 9:24 AM IST

ನವದೆಹಲಿ: ಲಂಡನ್‌ ಪ್ರವಾಸದ ವೇಳೆ ಆಡಿದ ಮಾತುಗಳ ಸಂಬಂಧ ಆಡಳಿತಾರೂಢ ಬಿಜೆಪಿ ಸದಸ್ಯರು ತಮ್ಮ ಮಾಡಿರುವ ಗಂಭೀರ ಆರೋಪಗಳಿಗೆ ಸದನದಲ್ಲೇ ಉತ್ತರ ನೀಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಅಲ್ಲದೆ ತಮಗೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನೀಡುವಂತೆ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ (Om Birla) ಅವರನ್ನು ಭೇಟಿ ಮನವಿ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಓಂ ಬಿರ್ಲಾರನ್ನು ಭೇಟಿಯಾಗಿದ್ದ ರಾಹುಲ್‌, ನನಗೆ ಮಾತನಾಡಲು ಅವಕಾಶ ಕೊಟ್ಟರೆ ನಾನು ಲೋಕಸಭೆಯಲ್ಲಿ ಮಾತನಾಡುವೆ, ಒಂದು ವೇಳೆ ಅವಕಾಶ ನೀಡದಿದ್ದರೆ ಮಾತ್ರವೇ ಈ ಬಗ್ಗೆ ಸಂಸತ್ತಿನ ಹೊರಗೆ ಮಾತನಾಡುವೆ ಎಂದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌, ದೇಶದ ಮುಂದಿರುವ ಈಗಿನ ಪ್ರಶ್ನೆಯೆಂದರೆ, ನಾಲ್ವರು ಸಚಿವರಿಗೆ ನನ್ನ ಮೇಲೆ ಆರೋಪ ಮಾಡಲು ಅವಕಾಶ ನೀಡಲಾಗಿದೆ ಎಂದರೆ ನನಗೂ ನೀಡಲಾಗುತ್ತದೆಯೋ ಅಥವಾ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳಲಾಗುತ್ತದೆಯೋ ಎಂಬುದು. ಸಂಸತ್‌ ಸದಸ್ಯನಾಗಿ ಮೊದಲು ಸಂಸತ್ತಿಗೆ ಉತ್ತರ ನೀಡುವುದು ನನ್ನ ಕರ್ತವ್ಯ. ನನ್ನ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸುವ ಹಕ್ಕು ನನಗಿದೆ. ಹೀಗಾಗಿ ಸಂಸತ್ತಿನೊಳಗೆ ನನ್ನ ಮೇಲಿನ ಆರೋಪಗಳಿಗೆ ಮೊದಲು ಪ್ರತಿಕ್ರಿಯೆ ನೀಡಬಯಸುತ್ತೇನೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ ಎಂದಾದರೆ ನನಗೆ ಮಾತನಾಡಲು ಅವಕಾಶ ಸಿಗಲಿದೆ. ಇದು ಪ್ರಜಾಪ್ರಭುತ್ವದ ಪರೀಕ್ಷೆ. ಅದಾನಿ ವಿಷಯದ ಮೇಲಿನ ಚರ್ಚೆ ತಪ್ಪಿಸಲು ಈ ಎಲ್ಲಾ ನಾಟಕ ಮಾಡಲಾಗುತ್ತಿದೆ ಎಂದು ರಾಹುಲ್‌ ಹೇಳಿದರು.

Vijayapura: ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ರಾಹುಲ್‌ ಕ್ಷಮೆ ಕೇಳಲಿ: ಬಿಜೆಪಿ ತಿರುಗೇಟು

ಈ ನಡುವೆ ಮೊದಲು ರಾಹುಲ್‌ ಗಾಂಧಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ನಾಯಕರಾದ ಪ್ರಹ್ಲಾದ್‌ ಜೋಶಿ (Prlhad Joshi), ಪಿಯೂಷ್‌ ಗೋಯಲ್‌, ರವಿಶಂಕರ್‌ ಪ್ರಸಾದ್‌ (Ravishankar Prasad) ಒತ್ತಾಯಿಸಿದ್ದಾರೆ. ಇ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಲಂಡನ್‌ನಲ್ಲಿ ಭಾರತದ ಸಂಸತ್ತಿಗೆ ರಾಹುಲ್‌ ಆಡಿದ ಅವಮಾನದಿಂದ ಸಂಸದರು ಮಾತ್ರವಲ್ಲ, ಇಡೀ ದೇಶ ಸಿಟ್ಟಾಗಿದೆ. ಎಳ್ಳಷ್ಟೂ ಸತ್ಯವಿಲ್ಲದ ಆರೋಪಗಳನ್ನು ರಾಹುಲ್‌ ಮಾಡಿದ್ದಾರೆ. ಈ ಬಗ್ಗೆ ಮೊದಲು ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನಿಸ್ತೇಜವಾಗಿದ್ದು ಈ ಬಗ್ಗೆ ಅಮೆರಿಕ ಮತ್ತು ಯುರೋಪ್‌ ದೇಶಗಳು ಮಧ್ಯಪ್ರವೇಶ ಮಾಡಬೇಕು ಎಂಬ ಭಾಷಣವನ್ನು ರಾಹುಲ್‌ ನಿರಾಕರಿಸಿಲ್ಲ ಎಂದೂ ಈ ನಾಯಕರು ಹೇಳಿದ್ದಾರೆ.

ರಾಹುಲ್‌ ಗಾಂಧಿಗೆ ದೆಹಲಿ ಪೊಲೀಸ್‌ ನೋಟಿಸ್‌
ಇತ್ತೀಚೆಗೆ ಭಾರತ್‌ ಜೋಡೋ ಯಾತ್ರೆ (Bharat Jodo Yatra) ವೇಳೆ ರಾಹುಲ್‌ ಗಾಂಧಿ ಅವರು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಶ್ರೀನಗರದಲ್ಲಿ (Sringara) ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಹುಲ್‌ಗೆ ನೋಟಿಸ್‌ ನೀಡಿರುವ ದಿಲ್ಲಿ ಪೊಲೀಸರು, ‘ಈ ಬಗ್ಗೆ ಮಾಹಿತಿ ಕೊಡಿ. ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದಿದ್ದಾರೆ. ಇದಕ್ಕೆ ಕಿಡಿಕಾರಿರುವ ಕಾಂಗ್ರೆಸ್‌, ಇದು ಕೇಂದ್ರದ ಕಿರುಕುಳ ತಂತ್ರ. ಸೂಕ್ತ ಉತ್ತರ ನೀಡುತ್ತೇವೆ ಎಂದಿದೆ.

Watch: 'ದುರಾದೃಷ್ಟಕ್ಕೆ ನಾನು ಸಂಸದ..' ಎಂದ ರಾಹುಲ್‌ ಗಾಂಧಿ, ಸುದ್ದಿಗೋಷ್ಠಿಯ ಮಧ್ಯೆಯೇ ತಿದ್ದಿದ ಜೈರಾಮ್‌ ರಮೇಶ್‌!

ಸತತ 4ನೇ ದಿನವೂ ಸಂಸತ್‌ ಕಲಾಪ ಬಲಿ

ಕಳೆದ ಮೂರು ದಿನಗಳಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಬಲಿಪಡೆದಿದ್ದ ಲಂಡನ್‌ನಲ್ಲಿ ರಾಹುಲ್‌ ಗಾಂಧಿ ಭಾಷಣ ಮತ್ತು ಉದ್ಯಮಿ ಗೌತಮ್‌ ಅದಾನಿ ಗದ್ದಲ, ಗುರುವಾರವೂ ಸಂಸತ್‌ ಕಲಾಪವನ್ನು ಬಲಿಪಡೆದಿದೆ. ಗುರುವಾರ ಬೆಳಗ್ಗೆ ಉಭಯ ಸದನಗಳಲ್ಲೂ ಕಲಾಪ ಆರಂಭವಾಗುತ್ತಲೇ ರಾಹುಲ್‌ ಗಾಂಧಿಗೆ ಒತ್ತಾಯಿಸಿ ಆಡಳಿತಾರೂಢ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಮತ್ತೊಂದೆಡೆ ಕಾಂಗ್ರೆಸ್‌ ನಾಯಕರು ಅದಾನಿ ವಿಷಯ ಮುಂದಿಟ್ಟು ಪ್ರಧಾನಿ ಮೋದಿ (PM Narendra Modi) ಕ್ಷಮೆಗೆ ಒತ್ತಾಯಿಸಿ ಘೋಷಣೆ ಕೂಗಿದರು. ಇನ್ನೊಂದೆಡೆ ಟಿಎಂಸಿ (Rahul Gandhi) ಸದಸ್ಯರು ತಮಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬಾಯಿಗೆ ಕಪ್ಪುಬಟ್ಟೆಕಟ್ಟಿಕೊಂಡು ಸದನದ ಭಾವಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ, ನಿಮ್ಮ ವಿಷಯಗಳನ್ನು ಚರ್ಚೆ ಮಾಡಲು ಅವಕಾಶ ನೀಡಲಾಗುವುದು ಎಂದು ಉಭಯ ಸದನಗಳಲ್ಲಿ ಸ್ಪೀಕರ್‌ ಮತ್ತು ಸಭಾಪತಿಗಳು ಮಾಡಿದ ಮನವಿಗೆ ಸದಸ್ಯರ ಓಗೊಡದ ಕಾರಣ, ಬೆಳಗ್ಗೆ ಕಲಾಪ ಆರಂಭವಾದ ಕೆಲವೆ ನಿಮಿಷಗಳಲ್ಲಿ ಮಧ್ಯಾಹ್ನಕ್ಕೆ ಕಲಾಪ ಮುಂದೂಡಲಾಯಿತು. ಆದರೆ ಮಧ್ಯಾಹ್ನ ಕಲಾಪ ಆರಂಭವಾದ ಬಳಿಕ ಅದೇ ಪರಿಸ್ಥಿತಿ ಪುನರಾವರ್ತನೆಯಾದ ಕಾರಣ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಈ ನಡುವೆ ಇಡೀ ಗದ್ದಲದ ಕೇಂದ್ರಬಿಂದುವಾದ ರಾಹುಲ್‌ ಗಾಂಧಿ ಗುರುವಾರ ಮಧ್ಯಾಹ್ನ ಮೊದಲ ಬಾರಿ ಸದನದಲ್ಲಿ ಕಾಣಿಸಿಕೊಂಡರು.

ಈ ನಡುವೆ ಸದನದ ಹೊರಗೆ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) , ಆಡಳಿತಾರೂಢ ಸದಸ್ಯರೇ ಸದನದ ಕಲಾಪಕ್ಕೆ ಅಡ್ಡಿ ಮಾಡುವ ಹೊಸ ಸಂಪ್ರದಾಯವನ್ನು ನಾವು ಕಾಣುತ್ತಿದ್ದೇವೆ. ಅದಾನಿ ವಿಷಯದ ಚರ್ಚೆ ತಪ್ಪಿಸಲು ಮತ್ತು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಸದಸ್ಯರು ಈ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಕಿಡಿಕಾರಿದರು. ಜೊತೆಗೆ ಲಂಡನ್‌ ಭಾಷಣ ಸಂಬಂಧ ರಾಹುಲ್‌ ಗಾಂಧಿ ಕ್ಷಮೆ ಯಾಚಿಸುವ ಪ್ರಮೇಯವೇ ಇಲ್ಲ. ಇರುವ ವಿಷಯವನ್ನೇ ರಾಹುಲ್‌ ಹೇಳಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ, ಸಂಸತ್ತಿನ ಹೊರಗೆ ಪ್ರತಿಪಕ್ಷ ನಾಯಕರ ಮಾನವ ಸರಪಳಿ ನಿರ್ಮಿಸಿ ಅದಾನಿ (Adani) ಹಗರಣ ಕುರಿತು ಜೆಪಿಸಿ ತನಿಖೆಗೆ ಆಗ್ರಹಿಸಿದರು.

Follow Us:
Download App:
  • android
  • ios