ಜ.29ರ ಮೌನಿ ಅಮಾವಾಸ್ಯೆಯಂದು 10 ಕೋಟಿ ಜನ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. 

ಪ್ರಯಾಗರಾಜ್ (ಜ.25): ಜ.29ರ ಮೌನಿ ಅಮಾವಾಸ್ಯೆಯಂದು 10 ಕೋಟಿ ಜನ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಯಾತ್ರಿಕರ ಸುರಕ್ಷತೆ, ಜನದಟ್ಟನೆ ಮತ್ತು ಸಂಚಾರ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ತಿಳಿಸಿದೆ. ಮಹಾಕುಂಭ ಮೇಳದಲ್ಲಿ ಕೆಲವು ವಿಶೇಷ ದಿನಗಳ ಸ್ನಾನವನ್ನು ‘ಅಮೃತ ಸ್ನಾನ /ಶಾಹಿ ಸ್ನಾನ’ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ, ಪುಷ್ಯ ಹುಣ್ಣಿಮೆ ಬಳಿಕ ಮೌನಿ ಅಮಾವಾಸ್ಯೆ ಅಂಥ 3ನೇ ವಿಶೇಷ ದಿನವಾಗಿದೆ. ನಂತರ ಫೆ.3ರಂದು ಬಸಂತ ಪಂಚಮಿ, ಫೆ.12ರಂದು ಮಾಘಿ ಪೂರ್ಣಿಮಾ ಹಾಗೂ ಫೆ.26ರ ಶಿವರಾತ್ರಿಯಂದೂ ಶಾಹಿ ಸ್ನಾನಗಳು ನಡೆಯಲಿವೆ.

ನಟನೆ ತೊರೆದು ಸನ್ಯಾಸ ಸ್ವೀಕರಿಸಿದ ನಟಿ ಮಮತಾ!: ಒಂದೊಮ್ಮೆ ಬಾಲಿವುಡ್ ಹಾಗೂ ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಮಮತಾ ಕುಲಕರ್ಣಿ ಇದೀಗ ಲೌಕಿಕ ಜಗತ್ತನ್ನು ತೊರೆದು ಸನ್ಯಾಸ ಸ್ವೀಕರಿಸಿದ್ದಾರೆ.ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿದ ಕುಲಕರ್ಣಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನ ಮಾಡುವ ಮೂಲಕ ಜೂನಾ ಅಖಾಡದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಿನ್ನರ ಅಖಾಡಕ್ಕೆ ಸೇರಿಕೊಂಡಿದ್ದು, ಮಹಾಮಂಡಲೇಶ್ವರರಾಗಿದ್ದಾರೆ. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಲಿದ್ದಾರೆ. ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿದ್ದಾರೆ.

10 ಕೋಟಿ ಜನರಿಂದ ಪುಣ್ಯಸ್ನಾನ: ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 10 ದಿನದಲ್ಲಿ 10 ಕೋಟಿಗೂ ಅಧಿಕ ಜನರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮಸ್ಥಾನದಲ್ಲಿ ಜ.13ರಿಂದ ಆರಂಭವಾಗಿರುವ ಕುಂಭಮೇಳದಲ್ಲಿ ದಿನಂಪ್ರತಿ ಸರಾಸರಿಯಾಗಿ 1 ಕೋಟಿ ಜನರು ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಮಕರ ಸಂಕ್ರಾಂತಿ ಹಬ್ಬದಂದು ಅತಿ ಹೆಚ್ಚು 3.5 ಕೋಟಿ ಜನರು, ಪೌಷ್ಯ ಪೂರ್ಣಿಮೆಯಂದು 1.7 ಕೋಟಿ ಜನರು ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ. ಗುರುವಾರ ಒಂದೇ ದಿನ ಮಧ್ಯಾಹ್ನ 12 ಗಂಟೆವರೆಗೆ 30 ಲಕ್ಷ ಜನರು ಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆ.26ರಂದು ಕುಂಭ ಮೇಳ ಮುಕ್ತಾಯಗೊಳ್ಳಲಿದೆ.

ತ್ರಿವೇಣಿಯಲ್ಲಿ ಎಷ್ಟು ದಿನ ಸ್ನಾನ ಮಾಡಿದ್ರೆ ಪಾಪ ಪರಿಹಾರ, ಸದ್ಗುರು ಹೇಳೋದೇನು?

ಪ್ರಯಾಗದಲ್ಲಿ ರೈಲ್ವೆ ಸೌಲಭ್ಯ ಪರೀಶೀಲಿಸಿದ ಸೋಮಣ್ಣ: ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಆಗಮಿಸಿದರು ಹಾಗೂ ಅಲ್ಲಿ ರೈಲ್ವೆ ನಿರ್ಮಿಸಿರುವ ಸೌಕರ್ಯಗಳನ್ನು ಪರಿಶೀಲಿಸಿ, ಜನರು, ಸಿಬ್ಬಂದಿಗಳ ಜೊತೆ ಸಂವಾದ ನಡೆಸಿದರು. ತಮ್ಮ ಭೇಟಿ ವೇಳೆ ಸಂಗಮ ಕ್ಷೇತ್ರದಲ್ಲಿ ರೈಲ್ವೆ/ಐಆರ್‌ಸಿಟಿಸಿ ನಿರ್ಮಿಸಿದ್ದ ವ್ಯವಸ್ಥೆಗಳ ಬಳಿ ತೆರಳಿ ಪರಿಶೀಲಿಸಿದರು. ಬಳಿಕ ರೈಲ್ವೆ ನಿಲ್ದಾಣಕ್ಕೆ ತೆರಳಿ, ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಜನರಿಗೆ ಅನುಕೂಲಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಅಭಿನಂದಿಸಿದರು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ನಡುವೆ, ‘ಪ್ರಯಾಗರಾಜ್‌ನ ರೈಲ್ವೆ ಟಿಕೆಟ್ ಕೌಂಟರ್‌ಗೆ ಭೇಟಿ ನೀಡಿ, ಟಿಕೆಟ್ ವಿತರಣೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಯಿತು’ ಎಂದು ಸೋಮಣ್ಣ ಟ್ವೀಟ್‌ ಮಾಡಿದ್ದಾರೆ. ಅಂದೇ ಕುಂಭಮೇಳದಲ್ಲಿ ಪತ್ನಿ ಸಮೇತರಾಗಿ ಸಚಿವರು ಪವಿತ್ರ ಸ್ನಾನ ಮಾಡಿದರು.