- Home
- Technology
- Science
- ಗಣಿತದಲ್ಲಿ 51 ಮಾರ್ಕ್ಸ್.. ಇಂದು 'ವಿಕ್ರಮ್-I' ಉಡಾವಣೆ ಯಶಸ್ಸಿನ ಹಿಂದೆ IIT ಯುವಕನ ಸ್ಫೂರ್ತಿದಾಯಕ ಕತೆ
ಗಣಿತದಲ್ಲಿ 51 ಮಾರ್ಕ್ಸ್.. ಇಂದು 'ವಿಕ್ರಮ್-I' ಉಡಾವಣೆ ಯಶಸ್ಸಿನ ಹಿಂದೆ IIT ಯುವಕನ ಸ್ಫೂರ್ತಿದಾಯಕ ಕತೆ
ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಪವನ್ ಕುಮಾರ್ ಚಂದನಾ, ಇಸ್ರೋದಲ್ಲಿನ ಕೆಲಸ ತೊರೆದು 'ಸ್ಕೈರೂಟ್ ಏರೋಸ್ಪೇಸ್' ಸ್ಥಾಪಿಸಿದರು. ಸವಾಲುಗಳನ್ನು ಮೆಟ್ಟಿ ನಿಂತು, 'ವಿಕ್ರಮ್-I' ರಾಕೆಟ್ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯ ಬರೆದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು

ಕನಸುಗಾರನ ಪರಿಶ್ರಮ
ಹೊಸದಿಲ್ಲಿ: ಭಾರತದ ಬಾಹ್ಯಾಕಾಶ ಯಾನದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಬೆಳಿಗ್ಗೆ 'ವಿಕ್ರಮ್-I' (Vikram-I) ರಾಕೆಟ್ನ ಉಡಾವಣೆ ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದೆ ಒಬ್ಬ ಐಐಟಿ ಪದವೀಧರ, ಇಸ್ರೋದ ಮಾಜಿ ವಿಜ್ಞಾನಿ ಹಾಗೂ ಅದ್ಭುತ ಕನಸುಗಾರನ ಪರಿಶ್ರಮವಿದೆ. ಅವರೇ ಪವನ್ ಕುಮಾರ್ ಚಂದನಾ.
ಸಾಮಾನ್ಯವಾಗಿ ರಾಕೆಟ್ ವಿಜ್ಞಾನಿಗಳ ಕಥೆ ಅಂದ ಕೂಡಲೇ ನಮಗೆ ನೆನಪಾಗುವುದು ಶಾಲೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುತ್ತಿದ್ದ ಬುದ್ಧಿವಂತ ವಿದ್ಯಾರ್ಥಿಗಳು. ಆದರೆ ಪವನ್ ಅವರ ಕಥೆ ಶುರುವಾಗುವುದು ಗಣಿತದಲ್ಲಿ ಪಡೆದ ಕೇವಲ 51 ಅಂಕಗಳಿಂದ!
ಸೋಲಿನಿಂದ ಯಶಸ್ಸಿನವರೆಗೆ..
ಹೈದರಾಬಾದ್ನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪವನ್ ಕುಮಾರ್ ಚಂದನಾ ಅವರಿಗೆ ಗಣಿತ ಎಂದಿಗೂ ಸುಲಭದ ವಿಷಯವಾಗಿರಲಿಲ್ಲ. ಆದರೆ ಅವರಿಗೆ ಯಂತ್ರಗಳ ಬಗ್ಗೆ ಅಪಾರ ಕುತೂಹಲವಿತ್ತು. ಅಂಕಗಳಿಗಿಂತ ಹೆಚ್ಚಾಗಿ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ? ಎಂಬುದು ಅವರನ್ನು ಕಾಡುತ್ತಿತ್ತು. ಈ ಕುತೂಹಲವೇ ಅವರನ್ನು ಮೊದಲ ಪ್ರಯತ್ನದಲ್ಲೇ ಐಐಟಿ ಖರಗ್ಪುರ (IIT Kharagpur) ಸೇರುವಂತೆ ಮಾಡಿತು. ಐಐಟಿಯಲ್ಲಿ ಓದುತ್ತಿರುವಾಗಲೇ ಅನೇಕರು ಲಕ್ಷಾಂತರ ಸಂಬಳದ ಐಟಿ ಕೆಲಸಗಳ ಹಿಂದೆ ಓಡುತ್ತಿದ್ದರೆ, ಪವನ್ ಕಣ್ಣು ಮಾತ್ರ ಬಾಹ್ಯಾಕಾಶದ ಮೇಲಿತ್ತು. ಹೀಗಾಗಿಯೇ ಅವರು ಐಐಟಿ ಕ್ಯಾಂಪಸ್ನಿಂದ ನೇರವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿಕೊಂಡರು.
ಇಸ್ರೋದಿಂದ ಉದ್ಯಮಶೀಲತೆಯತ್ತ..
ಇಸ್ರೋದಲ್ಲಿ ಕೆಲಸ ಮಾಡುವಾಗ ಪವನ್, ಭಾರತದ ಅತ್ಯಂತ ತೂಕದ ಉಡಾವಣಾ ವಾಹನವಾದ GSLV Mk III ಯೋಜನೆಯಲ್ಲಿ ಕೆಲಸ ಮಾಡಿದರು. ಅಲ್ಲಿನ ಅವರ ನಾವೀನ್ಯತೆಗೆ ಪ್ರಶಸ್ತಿಯೂ ಒಲಿದು ಬಂತು. ಆದರೆ ಆರು ವರ್ಷಗಳ ಕೆಲಸದ ನಂತರ ಪವನ್ ಅವರ ಮನಸ್ಸಿನಲ್ಲಿ ಒಂದು ಹೊಸ ಆಲೋಚನೆ ಚಿಗುರಿತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಯಾಕೆ ರಾಕೆಟ್ ನಿರ್ಮಿಸಬಾರದು? 2018ರಲ್ಲಿ ತಮ್ಮ ಇಸ್ರೋ ಸಹೋದ್ಯೋಗಿ ನಾಗಾ ಭರತ್ ದಾಕಾ ಅವರೊಂದಿಗೆ ಸೇರಿ ಹೈದರಾಬಾದ್ನಲ್ಲಿ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಎಂಬ ಸ್ಟಾರ್ಟ್ಅಪ್ ಸ್ಥಾಪಿಸಿದರು.
ಅಡೆತಡೆಗಳನ್ನು ಮೆಟ್ಟಿ ನಿಂತ ಸಾಹಸ
ಖಾಸಗಿ ಬಾಹ್ಯಾಕಾಶ ಸಂಸ್ಥೆ ಆರಂಭಿಸುವುದು ಸುಲಭದ ಮಾತಾಗಿರಲಿಲ್ಲ. ಫಂಡಿಂಗ್ ಸಮಸ್ಯೆ, ಹೂಡಿಕೆದಾರರ ಹಿಂದೇಟು ಇವುಗಳ ನಡುವೆ ಫ್ಲಿಪ್ಕಾರ್ಟ್ ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ ಅವರು 1.5 ಮಿಲಿಯನ್ ಡಾಲರ್ ಹೂಡಿಕೆ ಮಾಡಿ ಬೆನ್ನೆಲುಬಾಗಿ ನಿಂತರು. ನಂತರ ಕೋವಿಡ್ ಸಾಂಕ್ರಾಮಿಕ ಬಂದರೂ ಪವನ್ ಪಟ್ಟು ಬಿಡಲಿಲ್ಲ. ಅಂತಿಮವಾಗಿ ಜುಲೈ 2020 ರಲ್ಲಿ, ರಾಕೆಟ್ ಇಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಸ್ಕೈರೂಟ್ ಪಾತ್ರವಾಯಿತು. ಈ ಇಂಜಿನ್ಗೆ ನೋಬೆಲ್ ಪುರಸ್ಕೃತ ಸಿ.ವಿ. ರಾಮನ್ ಅವರ ನೆನಪಿನಲ್ಲಿ 'ರಾಮನ್-1' ಎಂದು ಹೆಸರಿಡಲಾಗಿತ್ತು.
ಸತತ ಮೈಲಿಗಲ್ಲುಗಳು
ನವೆಂಬರ್ 18, 2022: ಭಾರತದ ಮೊದಲ ಖಾಸಗಿ ಸಬ್ಆರ್ಬಿಟಲ್ ರಾಕೆಟ್ 'ವಿಕ್ರಮ್-ಎಸ್' ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದರು. ಮೇ 7, 2024: ಪ್ರಧಾನಿ ನರೇಂದ್ರ ಮೋದಿ ಅವರು ಸ್ಕೈರೂಟ್ನ ಭಾರತದ ಅತಿದೊಡ್ಡ ಖಾಸಗಿ ರಾಕೆಟ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.
ವಿಕ್ರಮ್-I ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಯುವಜನತೆಗೆ ಪವನ್ ನೀಡುವ ಸಂದೇಶ ಏನೆಂದರೆ, ಉದ್ಯಮಶೀಲತೆ (Entrepreneurship) ಅತ್ಯುತ್ತಮ ವೃತ್ತಿ ಆಯ್ಕೆ. ಇದು ನಮಗೆ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ದೇಶವನ್ನು ಕಟ್ಟಲು ಹಾಗೂ ಉದ್ಯೋಗ ಸೃಷ್ಟಿಸಲು ಅವಕಾಶ ನೀಡುತ್ತದೆ ಎಂಬುದು ಪವನ್ ಅವರ ನಂಬಿಕೆ.
ಗಣಿತದಲ್ಲಿ 51 ಅಂಕ ಪಡೆದಿದ್ದ ಹುಡುಗ ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಕಂಪನಿ ಕಟ್ಟಿ, ಸಾವಿರಾರು ಜನರಿಗೆ ಉದ್ಯೋಗ ನೀಡಿ, ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಇದು ಕೇವಲ ರಾಕೆಟ್ ವಿಜ್ಞಾನದ ಕಥೆಯಲ್ಲ, ಅಂಕಗಳಿಗಿಂತ ಹೆಚ್ಚಾಗಿ ಮನುಷ್ಯನ ಕುತೂಹಲ ಮತ್ತು ಪರಿಶ್ರಮ ಹೇಗೆ ಇತಿಹಾಸ ನಿರ್ಮಿಸಬಹುದು ಎಂಬುದಕ್ಕೆ ಸಾಕ್ಷಿ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

