ಟೀಂ ಇಂಡಿಯಾ ಸೋಲಿಗೆ ನೊಂದು ವಿಷ ಕುಡಿದ ಯುವಕ!
ಟೂರ್ನಿಯಿಂದ ಟೀಂ ಇಂಡಿಯಾ ಹೊರಬಿದ್ದಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ಹಲವರು ಕಣ್ಣೀರಿನೊಂದಿಗೆ ಮನೆ ಬಿಟ್ಟು ಹೊರಬಂದಿಲ್ಲ. ಸೋಲಿನ ನೋವಿಗೆ ನೊಂದ 24 ವರ್ಷದ ಯುವಕನೊರ್ವ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಒಡಿಶಾ(ಜು.11): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋಲು ಹಲವರಿಗೆ ಆಘಾತ ತಂದಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸುತ್ತಿದ್ದಂತೆ ಹಲವರು ಕಣ್ಣೀರಿಟ್ಟಿದ್ದಾರೆ. ಆದರೆ ಒಡಿಶಾದ ಕಲಹಂಡಿ ಜಿಲ್ಲೆಯ ಸಿಂಗಭಾದಿ ಗ್ರಾಮದ ಯುವಕ ಭಾರತದ ಸೋಲಿನ ನೋವಿನಿಂದ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: ನನ್ನ ಕೊನೆ ಉಸಿರಿರುವರೆಗೂ ಹೋರಾಡುತ್ತೇನೆ; ಜಡೇಜಾ ಭಾವನಾತ್ಮಕ ಸಂದೇಶ!
24 ವರ್ಷದ ಸಂಬರು ಭೊಯಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ. ಸಂಬರು ಭೋಯಿ ಗೆಳೆಯರ ಜೊತೆ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಿದ್ದ. ಈ ವೇಳೆ ಗೆಳೆಯರೊಂದಿಗೆ ಟೀಂ ಇಂಡಿಯಾ ಗೆಲ್ಲೋದಾಗಿ ಪಂಥ ಕಟ್ಟಿದ್ದ. ಆದರೆ ಭಾರತ 18 ರನ್ ಸೋಲು ಕಾಣುತ್ತಿದ್ದಂತೆ ನೇರವಾಗಿ ಮನೆಗೆ ಬಂದ ಸಂಬರು ಭೋಯಿ ರಾತ್ರಿಯಿಡಿ ನಿದ್ದೆ ಮಾಡಿಲ್ಲ. ಮರು ದಿನ(ಜು.12) ಬೆಳಗ್ಗೆ ಹೊಲದ ಕಡೆ ತೆರಳಿ ವಿಷ ಕುಡಿದಿದ್ದಾರೆ. ಕುಟುಂಬ ಸದಸ್ಯರು ಹೊಲ ಕಡೆ ತೆರಳಿದಾಗ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿರುವ ಸಂಬರು ಭೋಯಿನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಫಿಸಿಯೋ ಪ್ಯಾಟ್ರಿಕ್ ವಿದಾಯ!
ಸದ್ಯ ತೀವ್ರ ನಿಘಾಘಟಕದಲ್ಲಿರುವ ಸಂಬರು ಭೋಯಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಆದರೆ 24 ಗಂಟೆಗಳ ಕಾಲ ಪರಿವೀಕ್ಷೆಣೆಯಲ್ಲಿ ಇಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ. ಸಂಬರು ಭೋಯಿ ತಂದೆ ಇದೀಗ ಮಗನನ್ನು ಉಳಿಸುವಂತೆ ಅಂಗಲಾಚಿದ್ದಾರೆ. ಇತ್ತ ಭಾವನಿಪಾಟ್ನ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.