ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಆದರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಎದುರಿನ ಪಂದ್ಯದ ವೇಳೆಯಲ್ಲಿ ರೆಫ್ರಿಗಳ ತೀರ್ಮಾನದ ಬಗ್ಗೆ ಹಾಕಿ ಇಂಡಿಯಾ ಅಧಿಕೃತ ದೂರು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್‌: ಭಾರತ ಹಾಗೂ ಗ್ರೇಟ್‌ ಬ್ರಿಟನ್‌ ನಡುವಿನ ಒಲಿಂಪಿಕ್ಸ್‌ ಹಾಕಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅಂಪೈರಿಂಗ್‌ ಗುಣಮಟ್ಟ ಹಾಗೂ ರೆಫ್ರಿಗಳ ಕೆಲ ತೀರ್ಪುಗಳ ಬಗ್ಗೆ ಆಯೋಜಕರಿಗೆ ಹಾಕಿ ಇಂಡಿಯಾ ದೂರು ಸಲ್ಲಿಸಿದೆ. ಈ ಬಗ್ಗೆ ಹಾಕಿ ಇಂಡಿಯಾ ಪ್ರಕಟಣೆ ಹೊರಡಿಸಿದೆ. 

ಪಂದ್ಯದ 2ನೇ ಕ್ವಾರ್ಟರ್‌ನಲ್ಲಿ ಭಾರತದ ಅಮಿತ್‌ ರೋಹಿದಾಸ್‌ಗೆ ರೆಫ್ರಿ ಕೆಂಪು ಕಾರ್ಡ್‌ ನೀಡಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿರುವ ಹಾಕಿ ಇಂಡಿಯಾ, ಪೆನಾಲ್ಟಿ ಶೂಟೌಟ್‌ ವೇಳೆ ಬ್ರಿಟನ್‌ ಗೋಲ್‌ಕೀಪರ್‌ ವಿಡಿಯೋ ಟ್ಯಾಬ್ಲೆಟ್‌ ಬಳಸಿದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿದೆ. ರೆಫ್ರಿಗಳ ನಿರ್ಧಾರದ ಬಗ್ಗೆ ಅಧಿಕೃತವಾಗಿ ಅಕ್ಷೇಪ ವ್ಯಕ್ತಪಡಿಸಿದ್ದಾಗಿ ಮಾಹಿತಿ ನೀಡಿದೆ.

ಸೆಮೀಸ್‌ ಕದನ ಸೋತ ಲಕ್ಷ್ಯ ಸೇನ್‌ಗಿದೆ ಇಂದು ಕಂಚು ಗೆಲ್ಲುವ ಬೆಸ್ಟ್ ಚಾನ್ಸ್..!

ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

ಪ್ಯಾರಿಸ್: ಭಾರತೀಯ ಹಾಕಿಯ ಮಹಾಗೋಡೆ ಎಂದೇ ಕರೆಸಿಕೊಳ್ಳುವ ಹಿರಿಯ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್‌ರ ಸಾಹಸ, ಅಮೋಘ ರಕ್ಷಣಾ ಕೌಶಲ್ಯಗಳ ಫಲವಾಗಿ ಭಾರತ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನ ಸೆಮಿಫೈನಲ್ ಪ್ರವೇಶಿಸಿದೆ. ಭಾನುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್ ವಿರುದ್ಧ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಗೆದ್ದ ಭಾರತ, ಚಿನ್ನದ ಪದಕ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಪಂದ್ಯದ 18ನೇ ನಿಮಿಷದಲ್ಲೇ ಡಿಫೆಂಡರ್ ಅಮಿತ್ ರೋಹಿದಾಸ್‌ಗೆ ರೆಫ್ರಿ ಕೆಂಪು ಕಾರ್ಡ್ ನೀಡಿ ಹೊರ ಕಳುಹಿಸಿದ ಬಳಿಕ, ಭಾರತ ಮುಂದಿನ 42 ನಿಮಿಷ ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು. ಆದರೆ, ಛಲ ಬಿಡದೆ ಹೋರಾಡಿದ ಭಾರತ, ಬ್ರಿಟನ್‌ನ ಎಲ್ಲಾ ಅಸ್ತ್ರಗಳಿಗೂ ಸಮರ್ಥ ರೀತಿಯಲ್ಲಿ ಉತ್ತರಿಸಿ 60 ನಿಮಿಷಗಳ ಆಟ ಮುಕ್ತಾಯಗೊಳ್ಳುವ ವೇಳೆಗೆ 1-1ರಲ್ಲಿ ಸಮಬಲ ಸಾಧಿಸಲು ಯಶಸ್ವಿಯಾಯಿತು.

ಟೆನಿಸ್ ಲೆಜೆಂಡ್‌ ನೋವಾಕ್ ಜೋಕೋವಿಚ್‌ಗೆ ಒಲಿದ ಚೊಚ್ಚಲ ಒಲಿಂಪಿಕ್ಸ್‌ ಚಿನ್ನ..!

ಪಂದ್ಯದಲ್ಲಿ ಭಾರತ ಮೊದಲ ಮುನ್ನಡೆ ಸಾಧಿಸಿತು. 22ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ಆದರೆ 27ನೇ ನಿಮಿಷದಲ್ಲಿ ಬ್ರಿಟನ್ ಸಮಬಲ ಸಾಧಿಸಿತು. ಲೀ ಮಾರ್ಟನ್ ಬಾರಿಸಿದ ಆಕರ್ಷಕ ಫೀಲ್ಡ್ ಗೋಲು ಭಾರತ ತನ್ನ ಆಟದ ಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವಂತೆ ಮಾಡಿತು. ಬ್ರಿಟನ್‌ಗೆ ಸಾಲು ಸಾಲು ಪೆನಾಲ್ಟಿ ಕಾರ್ನರ್‌ಗಳು ಸಿಕ್ಕರೂ, ಶ್ರೀಜೇಶ್ ಒಂದರಲ್ಲೂ ಗೋಲು ಬಾರಿಸಲು ಬಿಡಲಿಲ್ಲ. ಪ್ರಮುಖ ಡಿಫೆಂಡರ್ ರೋಹಿದಾಸ್‌ರ ಅನುಪಸ್ಥಿತಿಯಲ್ಲೂ ಭಾರತ ಉತ್ತಮ ಆಟವಾಡಿತು. ಕೊನೆಯ ಕ್ವಾರ್ಟರ್‌ನಲ್ಲಿ ಬ್ರಿಟನ್ ಹೆಚ್ಚು ಆಕ್ರಮಣಕಾರಿಯಾಗಿ ಆಡಿದರೂ, ಭಾರತದ ಭದ್ರಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಬೇಕಾಯಿತು.

ಹೇಗಿತ್ತು ಶೂಟೌಟ್?

ಎರಡೂ ತಂಡಗಳು ಮೊದಲೆರೆಡು ಯತ್ನಗಳಲ್ಲಿ ಗೋಲು ಬಾರಿಸಿದವು. ಬ್ರಿಟನ್ ೩ನೇ ಯತ್ನವನ್ನು ವ್ಯರ್ಥ ಮಾಡಿದರೂ, ಲಲಿತ್ ಉಪಾಧ್ಯಾಯ ಗೋಲು ಬಾರಿಸುವಲ್ಲಿ ಹಿಂದೆ ಬೀಳಲಿಲ್ಲ. ಹೀಗಾಗಿ ಭಾರತ 3-2ರ ಮುನ್ನಡೆ ಪಡೆಯಿತು. ಬಳಿಕ 4ನೇ ಯತ್ನದಲ್ಲಿ ಶ್ರೀಜೇಶ್ ಗೋಲು ಪೆಟ್ಟಿಗೆಯ ಮುಂದೆ ತೋರಿದ ಸಾಹಸ, ಬ್ರಿಟನ್‌ಗೆ ಮತ್ತೆ ಆಘಾತ ನೀಡಿತು. ರಾಜ್‌ಕುಮಾರ್ ಗೋಲು ಬಾರಿಸಿ ಭಾರತದ ಗೆಲುವಿಗೆ ನೆರವಾದರು.