ಜಂತುಹುಳು ನಿವಾರಣೆಗಾಗಿ ಆ. 10ರಿಂದ ಹಾವೇರಿ ಜಿಲ್ಲೆಯಾದ್ಯಂತ ಒಂದರಿಂದ 19 ವರ್ಷದ ಮಕ್ಕಳಿಗೆ ಉಚಿತವಾಗಿ ಅಲ್ಬೆಂಡಝೊಲ್‌ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮ ಸಭೆ ನಡೆಸಲಾಯಿತು.

ಹಾವೇರಿ (ಆ.೨) : ಜಂತುಹುಳು ನಿವಾರಣೆಗಾಗಿ ಆ. 10ರಿಂದ ಜಿಲ್ಲೆಯಾದ್ಯಂತ ಒಂದರಿಂದ 19 ವರ್ಷದ ಮಕ್ಕಳಿಗೆ ಉಚಿತವಾಗಿ ಅಲ್ಬೆಂಡಝೊಲ್‌ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂತರ ಇಲಾಖಾ ಸಮನ್ವಯದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಂತುಹುಳು ನಿವಾರಣಾ ದಿನ ಹಾಗೂ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ಸಿದ್ಧತೆ ಕುರಿತಂತೆ ಪರಿಶೀಲನೆ ನಡೆಸಿ ಪ್ರಚಾರ ಸಾಮಗ್ರಿ ಬಿಡುಗೊಳಿಸಿ ಮಾತನಾಡಿದರು.

Add Asianetnews Kannada as a Preferred SourcegooglePreferred

ಹಾವೇರಿಯಲ್ಲಿ ವಿಷ ಸೇವಿಸಿದ್ದ ರೈತ ಸಾವು: ಪರಿಸ್ಥಿತಿ ಉದ್ವಿಗ್ನ

ಮಕ್ಕಳಿಗೆ ಅತಿಸಾರ ಮತ್ತು ಜಂತುಹುಳು ಹರಡುವ ಕುರಿತಂತೆ ಜಾಗೃತಿ ಮೂಡಿಸಿ. ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಕೈ ತೊಳೆಯುವ ಕುರಿತಂತೆ ಅಭ್ಯಾಸ ಮಾಡಿಸಿ. ಕುಡಿಯುವ ನೀರಿನ ಸ್ವಚ್ಛತೆ, ಮಕ್ಕಳಲ್ಲಿ ವೈಯಕ್ತಿಕ ಕಾಳಜಿ ಕುರಿತಂತೆ ಜಾಗೃತಿ ಮೂಡಿಸಿ. ಜಂತುಹುಳು ನಿವಾರಣೆ ಮಾತ್ರೆ ವಿತರಣೆ ಕುರಿತಂತೆ ಶಾಲಾ-ಕಾಲೇಜುಗಳಿಗೆ ಮಾಹಿತಿ ನೀಡಿ, ಪಾಲಕರಿಗೆ ಈ ಕುರಿತಂತೆ ಅರಿವು ಮೂಡಿಸಿ. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಯೋಜಿತ ರೀತಿಯಲ್ಲಿ ಮಾತ್ರೆ ವಿತರಣೆ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಜಯಾನಂದ ಅವರು ಸಭೆಗೆ ಮಾಹಿತಿ ನೀಡಿ, ಮಣ್ಣಿನ ಮೂಲಕ ಹರಡುವ ಜಂತುಹುಳು ಸೋಂಕು, ಪರಿಣಾಮಗಳು ಹಾಗೂ ಇದರಿಂದ ಆರೋಗ್ಯ, ಮಕ್ಕಳ ಶಿಕ್ಷಣ, ಜೀವನೋಪಾಯದ ಮೇಲೆ ಉಂಟಾಗುವ ಪರಿಣಾಮ ಕುರಿತಂತೆ ವಿವರಿಸಿದರು.

ಮುಂಡಗೋಡದಲ್ಲಿ ಅಂತರ್‌ಜಿಲ್ಲಾ ಬೈಕ್ ಕಳ್ಳನ ಬಂಧನ

ಜಂತುಹುಳು ನಿವಾರಣೆಗಾಗಿ ಜಿಲ್ಲೆಯಲ್ಲಿ ಆ. 10ರಂದು ಜಂತುಹುಳು ಮಾತ್ರೆಯನ್ನು ಅಂಗನವಾಡಿ, ಶಾಲಾ-ಕಾಲೇಜು ಮಕ್ಕಳಿಗೆ ವಿತರಿಸಲಾಗುವುದು. ಆ. 17ರಂದು ಮಾಪ್‌ ಆಪ್‌ ದಿನವನ್ನು ಹಮ್ಮಿಕೊಳ್ಳಲಾಗಿದೆ. ಒಂದರಿಂದ ಐದು ವರ್ಷದ 1,46,907 ಮಕ್ಕಳು ಹಾಗೂ 6ರಿಂದ 19 ವರ್ಷದ 4,49,997 ಮಕ್ಕಳು ಒಳಗೊಂಡಂತೆ ಒಂದರಿಂದ 19 ವರ್ಷದ 5,96,904 ಮಕ್ಕಳನ್ನು ಗುರುತಿಸಲಾಗಿದೆ. ಜಂತುಹುಳು ನಿವಾರಣೆ ಕಾರ್ಯಕ್ರಮಕ್ಕೆ ವಿವಿಧ ಇಲಾಖಾ ಅಧಿಕಾರಿಗಳ ಜವಾಬ್ದಾರಿ ಹಾಗೂ ಸಹಕಾರ ಕುರಿತಂತೆ ಮಾಹಿತಿ ನೀಡಿದರು. ಸಿಬ್ಬಂದಿಗೆ ತರಬೇತಿ, ಕಾರ್ಯಕ್ರಮದ ಕಾರ್ಯಸೂಚಿ ಕುರಿತಂತೆ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎಸ್‌.ಜಿ. ಮುಳ್ಳಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಎಸ್‌. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್‌. ಹಾವನೂರ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಾ. ನಿಲೇಶ, ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್‌. ರಂಗನಾಥ್‌, ವಿವಿಧ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.