ಗಾಯಗೊಂಡ ಪ್ರಾಣಿಗಳ ಕಾಳಜಿ ತೋರಿದ ಮೈಸೂರು ರಾಣಿ ತ್ರಿಷಿಕಾ ಕುಮಾರಿ ಒಡೆಯರ್
ಮೈಸೂರಿನ ರಾಣಿ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರ ಕುರಿತು ಇಂಟ್ರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ. ಅವರ ಬಗ್ಗೆ ನಿಮಗೂ ತಿಳಿಯುವ ಆಸಕ್ತಿ ಇದೆಯೇ? ಹಾಗಿದ್ರೆ ಇಲ್ಲಿದೆ ನೋಡಿ ಅವರ ಕುರಿತಾದ ಮಾಹಿತಿಗಳು.

ಮೈಸೂರು ಎಂದ ಕೂಡಲೇ ನೆನಪಾಗೋದು ರಾಜಮನೆತನ. ಮೈಸೂರಿನ ಅರಮನೆಯಲ್ಲಿ (Mysore Palace) ದಸರಾ ಸಂದರ್ಭದಲ್ಲಿ ಮಹಾರಾಜ, ರಾಣಿ ದರ್ಭಾರ್ ಅನ್ನು ಇಂದಿಗೂ ನೋಡಬಹುದು. ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಗ್ಗೆ ನಿಮಗೆ ಗೊತ್ತಿರಬಹುದು. ಇಲ್ಲಿ ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಬಗ್ಗೆ ಒಂದಷ್ಟು ಮಾಹಿತಿ ಇದೆ.
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ (Trishika Kumari Wadiyar). ಇವರು ಹುಟ್ಟಿನಿಂದಲೇ ರಾಜಕುಮಾರಿ. ಇವರು ರಾಜಸ್ಥಾನದವರು. ಯದುವೀರ್ ಮತ್ತು ತ್ರಿಷಿಕಾ ಅಮೇರಿಕದಲ್ಲಿ ಮಾಸ್ಟರ್ಸ್ ಮಾಡಿದ್ದು, ಅಲ್ಲಿಯೇ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಸಿ, ನಂತರ ರಾಜಮನೆತನದ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾದವರು.
ದುಂಗ್ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ರಾಜಕುಮಾರಿ ಮಹೇಶ್ವರಿ ಕುಮಾರಿ ದಂಪತಿ ಪುತ್ರಿಯಾಗಿರುವ ತ್ರಿಷಿಕಾ ಕುಮಾರಿ 2016ರ ಜೂನ್ 27ರಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರನ್ನು ವಿವಾಹವಾಗಿದ್ದರು. ಮೈಸೂರಿನ ಮಹಾರಾಣಿಯಾದರೂ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಇವರದ್ದು.
ಡಿಸೆಂಬರ್ 6, 2017 ರಂದು, ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ಹೆಸರು ಆಧ್ಯವೀರ ನರಸಿಂಹರಾಜ ಒಡೆಯರ್. ಮಗುವಿಗೆ ಈಗ ಐದು ವರ್ಷ.
ಮಹಾರಾಣಿ ತ್ರಿಷಿಕಾ ದೇವಿ, ಫಿಟ್ನೆಸ್ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನವೂ ಯೋಗ ಮಾಡುತ್ತಾರೆ. ರಾಜೆಮನೆತನ ಪೂಜಾ ಕಾರ್ಯಗಳನ್ನು ಮಾಡುವ ಜೊತೆಗೆ, ಮಹಾರಾಣಿ ತಮಗೆ ಇಷ್ಟವಾದ ಕುಕ್ಕಿಂಗ್, ಬೇಕಿಂಗ್ ಸಹ ಮಾಡುತ್ತಾರೆ.
ಇನ್ನು ತ್ರಿಷಿಕಾ ಅವರು ತಮ್ಮದೇ ಆದ ಒಂದು ಉದ್ಯಮವನ್ನು ಸಹ ಶುರು ಮಾಡಿದ್ದು, ಅದಕ್ಕೆ ದಿ ಲಿಟ್ಲ್ ಬಂಟಿಂಗ್ಸ್ (the little bunting) ಎಂಬ ಹೆಸರಿಡಲಾಗಿದೆ. ಇದರಲ್ಲಿ ಮಕ್ಕಳ ಆಟಿಕೆಗಳನ್ನು ಎಕೋ ಫ್ರೆಂಡ್ಲಿಯಾಗಿ ತಯಾರು ಮಾಡಲಾಗುತ್ತದೆ. ಇಲ್ಲಿ ವಿವಿಧ ರೀತಿಯ ಮಕ್ಕಳ ಆಟಿಕೆಗಳು, ಡ್ರೆಸ್, ಮತ್ತಿತರ ಮಕ್ಕಳ ಸಾಮಾಗ್ರಿಗಳನ್ನು ನೀವು ಖರೀದಿಸಬಹುದು.
ತ್ರಿಷಿಕಾ ಕುಮಾರಿ ಅವರ ಸೋಶಿಯಲ್ ಮೀಡಿಯಾ (social media) ಖಾತೆಯನ್ನು ನೋಡಿದ್ರೇನೆ ತಿಳಿಯುತ್ತೆ, ಇವರಿಗೆ ಟ್ರಾವೆಲಿಂಗ್ ಇಷ್ಟ, ಜೊತೆಗೆ ವೈಲ್ಡ್ ಲೈಫ್ ಬಗ್ಗೆ ತುಂಬಾನೆ ಆಸಕ್ತಿ ಇದೆ ಎಂದು. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ, ಇವರು ಪತಿ ಮತ್ತು ಮಗನ ಜೊತೆ ಜೊತೆ ನಾಗರಹೊಳೆ, ಕಬಿನಿ ಮೊದಲಾದ ಕಡೆಗಳಲ್ಲಿ ಸಫಾರಿ ಮಾಡುತ್ತಾ ಫೊಟೋ ಶೇರ್ ಮಾಡುತ್ತಿರುತ್ತಾರೆ.
ಪ್ರಾಣಿ ಪಕ್ಷಿಗಳ ಕಡೆಗೆ ಮಹಾರಾಣಿ ತ್ರಿಷಿಕಾ ಕುಮಾರಿ ಅವರಿಗೆ ವಿಪರೀತ ಒಲವು. ಪ್ರಾಣಿಗಳ ಹಿಂಸೆ ಮಾಡಬಾರದು ಎನ್ನುವ ಕಾರಣಕ್ಕಾಗಿಯೇ, ಅವರು ಸಂಪೂರ್ಣ ಸಸ್ಯಾಹಾರಿ. ಪ್ರಾಣಿಪ್ರಿಯೆ ಅನ್ನೋದನ್ನು ಹಸು, ಆನೆ, ನಾಯಿ ಆರೈಕೆ ಮಾಡುವ ಮೂಲಕ ಸಾಬೀತುಪಡಿಸಿದ್ದಾರೆ.
ಸದಾ ಸಮಾಜ ಸೇವೆಯಲ್ಲಿ ಮುಂದಿರುವ ಮಹಾರಾಣಿ ಮೈಸೂರಿನ PFAಯಲ್ಲಿ ಅಂಗವಿಕಲ ನಾಯಿಗಳ ವಿಭಾಗವನ್ನು ಉದ್ಘಾಟಿಸಿದ್ದಾರೆ. ಜೊತೆಗೆ ನಮ್ಮ ದೇಶೀಯ ಬೀದಿ ನಾಯಿಗಳು ಅಸಾಧಾರಣ ಬುದ್ಧಿವಂತಿಕೆ ಹೊಂದಿದ್ದು, ಅತ್ಯಂತ ನಿಷ್ಠಾವಂತ, ಸ್ನೇಹಮಯ, ಮತ್ತು ದೃಢವಾದ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಸಾಕುಪ್ರಾಣಿಗಳನ್ನು ಖರೀದಿಸಬೇಡಿ, ದತ್ತು ಸ್ವೀಕರಿಸಿ ಎಂದು ಮಹಾರಾಣಿ ಜನರಿಗೆ ಕರೆ ನೀಡಿದ್ದಾರೆ.