- Home
- Viral News
- ಮಂಡ್ಯ ಜನರ ಧೈರ್ಯ: ಪೊಲೀಸ್ ಠಾಣೆಯಿಂದ ಪರಾರಿ ಆಗ್ತಿದ್ದ ಕಳ್ಳನನ್ನ, ಕೈಲಿರೋ ಬೇಡಿ ನೋಡಿ ಅಟ್ಟಾಡಿಸಿ ಹಿಡಿದರು!
ಮಂಡ್ಯ ಜನರ ಧೈರ್ಯ: ಪೊಲೀಸ್ ಠಾಣೆಯಿಂದ ಪರಾರಿ ಆಗ್ತಿದ್ದ ಕಳ್ಳನನ್ನ, ಕೈಲಿರೋ ಬೇಡಿ ನೋಡಿ ಅಟ್ಟಾಡಿಸಿ ಹಿಡಿದರು!
ಮಂಡ್ಯ ಗ್ರಾಮಾಂತರ ಠಾಣೆಯಿಂದ ಕೈಬೇಡಿ ಸಮೇತ ತಪ್ಪಿಸಿಕೊಂಡಿದ್ದ ಕಳ್ಳನನ್ನು ಗಾಂಧಿನಗರ ಬಡಾವಣೆಯ ಸಾರ್ವಜನಿಕರು ಬೆನ್ನಟ್ಟಿ ಹಿಡಿದಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಓಡಿಬಂದಿದ್ದ ಆರೋಪಿಯನ್ನು ವಿಚಾರಿಸಿ, ಮತ್ತೆ ಪೊಲೀಸರಿಗೆ ಒಪ್ಪಿಸುವ ಮೂಲಕ ಸ್ಥಳೀಯರು ಸಮಯಪ್ರಜ್ಞೆ ಮೆರೆದಿದ್ದಾರೆ.

ಮಂಡ್ಯ ನಗರದ ಗಾಂಧಿನಗರ ಬಡಾವಣೆಯಲ್ಲಿ ಬೆಳ್ಳಂಬೆಳಗ್ಗೆ ಸಿನಿಮೀಯ ಮಾದರಿಯ ಹೈಡ್ರಾಮಾವೊಂದು ನಡೆದಿದೆ. ಪೊಲೀಸ್ ಠಾಣೆಯಿಂದ ಕೈಗೆ ಬೇಡಿ ಸಮೇತ ಎಸ್ಕೇಪ್ ಆಗಿ ಸಾರ್ವಜನಿಕವಾಗಿ ಓಡಾಡುತ್ತಿದ್ದ ಖದೀಮನೊಬ್ಬನನ್ನು ಸ್ಥಳೀಯ ನಿವಾಸಿಗಳು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಠಾಣೆಯಿಂದ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್!
ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಕೈಗೆ ಬೇಡಿ ತೊಡಿಸಿ ಠಾಣೆಗೆ ಕರೆತಂದಿದ್ದರು. ಆದರೆ, ಪೊಲೀಸರ ಕಣ್ಣು ತಪ್ಪಿಸಿದ ಈ ಖದೀಮ, ಕೈಗೆ ಬೇಡಿ ಇರುವ ಸ್ಥಿತಿಯಲ್ಲೇ ಠಾಣೆಯಿಂದ ಪರಾರಿಯಾಗಿದ್ದಾನೆ.
ಕಾಂಪೌಂಡ್ ಹಾರುವಾಗ ಸಾರ್ವಜನಿಕರಲ್ಲಿ ಆತಂಕ:
ಠಾಣೆಯಿಂದ ತಪ್ಪಿಸಿಕೊಂಡು ಓಡಿಬಂದ ಆರೋಪಿ, ಮಂಡ್ಯದ ಗಾಂಧಿನಗರದ ಮನೆಗಳ ಕಾಂಪೌಂಡ್ ಹಾರಲು ಯತ್ನಿಸಿದ್ದಾನೆ. ಆತನ ಕೈಗೆ ಬೇಡಿ (ಕೈಕೋಳ) ಇರುವುದನ್ನು ಕಂಡ ಸ್ಥಳೀಯರು ಮತ್ತು ದಾರಿಹೋಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಈತನ ಚಲನವಲನದ ಮೇಲೆ ಅನುಮಾನಗೊಂಡ ಸಾರ್ವಜನಿಕರು ತಕ್ಷಣವೇ ಆತನನ್ನು ಸುತ್ತುವರಿದು, ಅಟ್ಟಿಸಿಕೊಂಡು ಹೋಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟ ಕಳ್ಳ:
ಸಾರ್ವಜನಿಕರು ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ, ತಾನು ಕಳ್ಳತನ ಮಾಡಿದ್ದು, ಪೊಲೀಸರು ತನ್ನನ್ನು ಹಿಡಿದು ಠಾಣೆಗೆ ಕರೆದೊಯ್ದಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಓಡಿಬಂದಿದ್ದಾಗಿ ಬಾಯಿಬಿಟ್ಟಿದ್ದಾನೆ. ತಕ್ಷಣ ಸ್ಥಳೀಯರು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಆರೋಪಿಯನ್ನು ಮತ್ತೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಪೊಲೀಸರ ಕೈಯಿಂದ ಎಸ್ಕೇಪ್ ಆಗಿದ್ದ ಕಳ್ಳ ಮತ್ತೆ ಕಂಬಿ ಎಣಿಸುವಂತಾಗಿದ್ದು, ಸ್ಥಳೀಯರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

