- Home
- Entertainment
- TV Talk
- Bigg Boss Kannada 12: ಟಾಪ್ 5 ಸ್ಪರ್ಧಿಗಳು ಇವರು, ವಿನ್ನರ್ ಯಾರು?.. ಭವಿಷ್ಯ ಹೇಳಿದ ಕಿರಿಕ್ ಕೀರ್ತಿ!
Bigg Boss Kannada 12: ಟಾಪ್ 5 ಸ್ಪರ್ಧಿಗಳು ಇವರು, ವಿನ್ನರ್ ಯಾರು?.. ಭವಿಷ್ಯ ಹೇಳಿದ ಕಿರಿಕ್ ಕೀರ್ತಿ!
ಬಿಗ್ ಬಾಸ್ ಕನ್ನಡ ಶೋ ಶುರುವಾಗುತ್ತಲೇ ಇಲ್ಲಿ ಚಿತ್ರವಿಚಿತ್ರ ಜನರು ಕಾಣಸಿಗುತ್ತಾರೆ. ಕಾರಣ, ಹೆಚ್ಚೂಕಡಿಮೆ ಎಲ್ಲಾ ಕ್ಷೇತ್ರಗಳ ಜನರು ಅಲ್ಲಿ ಬರುತ್ತಾರೆ. ಹೆಚ್ಚಿನವರು ಈಗಾಗಲೇ ಸೆಲೆಬ್ರೆಟಿಗಳು ಆಗಿರೋರು ಎಂದರೂ ಕೂಡ ಅವರವರ ಕ್ಷೇತ್ರ ಬೇರೆಯದೇ ಆಗಿರುತ್ತದೆ. ಆ ಕಾರಣಕ್ಕೆ ಬಿಗ್ ಬಾಸ್ ಹಲವರ ಫೇವರೆಟ್.

ಬಿಗ್ ಬಾಸ್ 12 ಗ್ರಾಂಡ್ ಫಿನಾಲೆ ಲೆಕ್ಕಾಚಾರ ; ಕಿರಿಕ್ ಕೀರ್ತಿ ಭವಿಷ್ಯ!
‘ಬಿಗ್ ಬಾಸ್’ (Bigg Boss Kannada 12) ಎಂದರೆ ಅದು ಶಾಂತಿಯಿಂದ ಇರೋ ಮನೆ ಅಲ್ಲವೇ ಅಲ್ಲ. ಅಲ್ಲಿ ರಂಪ-ರಾಮಾಯಣಗಳು, ಮುದ್ದು-ಯುದ್ಧಗಳು ಎಲ್ಲವೂ ಇರಲೇಬೇಕು ಎಂಬುದು ಅಲಿಖಿತ ನಿಯಮ. ಮನೆ ಶಾಂತವಾಗಿದ್ದರೆ ಈ ಮನೆಯ ಶೋವನ್ನು ಯಾರೂ ನೋಡಲ್ಲ ಎನ್ನಬಹುದು. ಕಾರಣ, ಅದೊಂಥರಾ ಹಲವು ವ್ಯಕ್ತಿಗಳ, ವ್ಯಕ್ತಿತ್ವಗಳ ಸಂಗಮ.
ಇಲ್ಲಿ ಯಾರೂ ಸ್ನೇಹಿತರಾಗಲ್ಲ, ಯಾರೂ ಶತ್ರುಗಳೂ ಆಗಲ್ಲ. ಎಲ್ಲೋ ಆಗೊಮ್ಮೆ ಈಗೊಮ್ಮ ಸ್ನೇಹ-ಪ್ರೀತಿ-ಮದುವೆ ಆಗಿರಬಹುದು.. ಕೊನೆಗೆ ಅದು ವಿಚ್ಚೇದನದಲ್ಲಿ ಕೊನೆಗೊಂಡಿರಲೂಬಹುದು. ಆದರೆ, ನಾರ್ಮಲ್ ಅಗಿ ಇಲ್ಲಿ 'ಯಾರಿಗೂ ಯಾರೂ ಇಲ್ಲ, ಯಾರಿಗೆ ಯಾರೂ ಆಗಲ್ಲ' ಎನ್ನಬಹುದು. ಕಾರಣ, ಎಲ್ಲರ ಗುರಿಯೂ 'ಬಿಗ್ ಬಾಸ್ ವಿನ್ನರ್' ಆಗೋದು!
ಬಿಗ್ ಬಾಸ್ ಕನ್ನಡ ಶೋ ಶುರುವಾಗುತ್ತಲೇ ಇಲ್ಲಿ ಚಿತ್ರವಿಚಿತ್ರ ಜನರು ಕಾಣಸಿಗುತ್ತಾರೆ. ಕಾರಣ, ಹೆಚ್ಚೂಕಡಿಮೆ ಎಲ್ಲಾ ಕ್ಷೇತ್ರಗಳ ಜನರು ಅಲ್ಲಿ ಬರುತ್ತಾರೆ. ಹೆಚ್ಚಿನವರು ಈಗಾಗಲೇ ಸೆಲೆಬ್ರೆಟಿಗಳು ಆಗಿರೋರು ಎಂದರೂ ಕೂಡ ಅವರವರ ಕ್ಷೇತ್ರ ಬೇರೆಯದೇ ಆಗಿರುತ್ತದೆ. ಆ ಕಾರಣಕ್ಕೆ ಬಿಗ್ ಬಾಸ್ ಹಲವರ ಫೇವರೆಟ್. ಹಲವರು ನಿದ್ದೆಗೆಟ್ಟೂ ನೋಡುವ ಶೋ ಬಿಗ್ ಬಾಸ್ ಕನ್ನಡ ಎನ್ನಬಹುದು. ಈ ಕಾರಣಕ್ಕೇ 1 ರಿಂದ ಶುರುವಾದ ಈ ಶೋ 11 ಸೀಸನ್ ಮುಗಿಸಿ ಇದೀಗ 12 ಸೀಸನ್ ಎಂಡ್ಗೆ ಬಂದು ನಿಂತಿದೆ.
ಇನ್ನು, ಈ ಬಾರಿಯ ಬಿಗ್ ಬಾಸ್ ಕನ್ನಡ 12 ಕೂಡ ಇದರಿಂದ ಹೊರತಾಗಿಲ್ಲ. ಬದಲಿಗೆ ಈ ಬಾರಿ ಹಿಂದಿನ ಹನ್ನೊಂದು ಸೀಸನ್ಗಳಲ್ಲಿ ಕಾಣಿಸದ ಭಿನ್ನ-ವಿಭಿನ್ನವಾದ ವ್ಯಕ್ತಿತ್ವಗಳನ್ನು ಹುಡುಕಿತಂದು ಮನೆಯ ಒಳಗಡೆ 19 ಜನರನ್ನು ಕಳುಹಿಸಲಾಗಿತ್ತು. ಆ ಬಳಿಕ, ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ 3 ಜನರನ್ನು ಮನೆಯೊಳಗೆ ಬಿಡಲಾಗಿತ್ತು. ಒಟ್ಟೂ 22 ಜನರಿಂದ ಆಟ ಆಡಿಸಿ ಇದೀಗ 8 ಜನರು ಮನೆಯೊಳಗೆ ಇರುವ ಮೂಲಕ ಫೈನಲ್ ಹಂತಕ್ಕೆ ಬಂದು ನಿಂತಿದೆ ಬಿಗ್ ಬಾಸ್ ಕನ್ನಡ 12 ಶೋ.
ಸದ್ಯ ಅಲ್ಲಿರುವ ಆ 8 ಜನರ ಪೈಕಿ ಗೆಲ್ಲೋರು ಯಾರು? ಟಾಪ್ 5 ಆಗಿ ಆ ವೇದಿಕೆಯ ಮೇಲೆ ನಿಲ್ಲೋರು ಯಾರು? ಉಳಿದ 8 ಜನರಲ್ಲಿ ಯಾರು ಹೊರಬರುತ್ತಾರೆ, ಗ್ರಾಂಡ್ ಫಿನಾಲೆಯವರೆಗೆ ಯಾರು ಹೋಗ್ತಾರೆ ಎನ್ನುವ ಕುತೂಹಲ ಹಲವರಲ್ಲಿದೆ. ಇದಕ್ಕೆ ಉತ್ತರವನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ, ಆಂಕರ್, ರೈಟರ್ ಹಾಗೂ ನಟ ಕಿರಿಕ್ ಕೀರ್ತಿ ಕೊಟ್ಟಿದ್ದಾರೆ. ಅಂದರೆ, ಅವರು ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ? ಇಲ್ಲಿದೆ ನೋಡಿ.. ಓವರ್ ಟು ಕಿರಿಕ್ ಕೀರ್ತಿ..
ಈ ಕುತೂಹಲಕ್ಕೆ "ಬಿಗ್ ಬಾಸ್ ಕನ್ನಡ" 4 ರನ್ನರ್ ಅಪ್ ಕಿರಿಕ್ ಕೀರ್ತಿ ನಿಮ್ಮ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಕೊನೆಯಲ್ಲಿ ಉಳಿದುಕೊಳ್ಳುವ ಆ 5 ಜನ ಯಾರು ಎಂದು ಹೇಳಿದ್ದಾರೆ. ಎಲ್ಲರ ಗೇಮ್ ಪ್ಲಾನ್ನ್ನು ವಿಶ್ಲೇಷಣೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗಿದ್ದರೆ.. ಕಿರಿಕ್ ಕೀರ್ತಿ ಕಂಡಂತೆ ಹೇಗಿದೆ ಈ ಬಾರಿಯ ಬಿಗ್ ಬಾಸ್..? ಯಾರೆಲ್ಲಾ ಟಾಪ್ 5ಗೆ ಹೋಗ್ತಾರೆ ಎಂದು ತಿಳಿಯಲು ಈ ಸ್ಟೋರಿ ನೋಡಿ..
ಕೀರ್ತಿ ಪ್ರಕಾರ ಟಾಪ್ 5 ಸ್ಪರ್ಧಿಗಳು ಯಾರು ?
"ಗಿಲ್ಲಿ.. ರಕ್ಷಿತಾ.. ಅಶ್ವಿನಿ ಗೌಡ.. ರಘು.. ಕಾವ್ಯ.. ಈ 5 ಜನ ನನ್ನ ಪ್ರಕಾರ ಈ ಬಾರಿಯ "ಬಿಗ್ ಬಾಸ್" ಟಾಪ್ 5ರಲ್ಲಿ ಸ್ಥಾನ ಪಡೆಯುತ್ತಾರೆ. ಅದರೆ, ನಟ ಧ್ರುವಂತ್ ಮೊದಲು ಹೊರ ಬರ್ತಾರೆ. ಆ ನಂತರ ರಾಶಿಕಾ, ನಡುವೆ ಧನುಷ್ ಹೊರ ಬರಬಹುದು. ಇನ್ನು ನಾನು ಗಮನಿಸಿದಂತೆ ಸೀಸನ್ 9ರ ನಂತರ ಗ್ರಾಂಡ್ ಫಿನಾಲೆ ನಡೆಯುವ ವಾರದಲ್ಲಿ ಆರು ಜನರನ್ನು ಹೊರಗಡೆ ಕಳುಹಿಸಿದ್ದಾರೆ. ಈ ಬಾರಿ ಕೂಡ ಫಿನಾಲೆ ವಾರದಲ್ಲಿ ಆರು ಜನ ಹೊರ ಬರುವ ನಿರೀಕ್ಷೆ ಇದೆ" ಎಂದಿದ್ದಾರೆ ಕಿರಿಕ್ ಕೀರ್ತಿ.
ಕಿರಿಕ್ ಕೀರ್ತಿ ಪ್ರಕಾರ ಈ ಬಾರಿ ಏನು ಜಾಸ್ತಿ ಆಯ್ತು ?
"ಬಿಗ್ ಬಾಸ್ ಮನೆ ಅಂದ ಮೇಲೆ ಅಲ್ಲಿ ಪ್ರತಿ ವರ್ಷ ಜಗಳ-ವಾಗುದ್ದ, ಟೀಕೆ-ಕಾಮೆಂಟ್ ಎಲ್ಲವೂ ಇದ್ದೇ ಇರುತ್ತೆ. ಅದರ ಸ್ವರೂಪ ಪ್ರತಿವರ್ಷ ಬದಲಾಗುತ್ತಾ ಹೋಗುತ್ತೆ ಅಷ್ಟೇ. ಭಿನ್ನ ವಿಭಿನ್ನವಾದ ವ್ಯಕ್ತಿತ್ವ ಹೊಂದಿರುವ ಜನ ಒಂದೇ ಕಡೆ ಇದ್ದಾಗ ಅಲ್ಲಿ ಈಗೋ ಕ್ಲಾಶ್ ಇದ್ದೇ ಇರುತ್ತೆ. ಅದು ಸಾಮಾನ್ಯ ಸಂಗತಿ. ಅದಕ್ಕೆ ಉದಾಹರಣೆ ಎಂದರೆ, ಅಶ್ವಿನಿ ಗೌಡ ಅವರಿಗೆ ಹೊರಗಡೆ ಅವರದ್ದೇ ಆದ ಇಮೇಜ್ ಇದೆ. ಅವರು ಅದನ್ನು ಮನೆಯಲ್ಲಿಯೂ ಮುಂದುವರೆಸಿಕೊಂಡು ಹೋಗಬೇಕಾಗುತ್ತೆ. ಮತ್ತೊಂದು ಕಡೆ ರಾಶಿಕಾ ಹಾಗೂ ಕಾವ್ಯಾಗೆ ತಾವು ಸಿನಿಮಾ ಹೀರೋಯಿನ್ ಎನ್ನುವ ಭಾವನೆ ಇದೆ, ಅದನ್ನು ಅವರು ರಕ್ಷಿಸಿಕೊಳ್ಳಬೇಕಾಗುತ್ತೆ.
ಇನ್ನು ರಕ್ಷಿತಾ ಅವರಿಗೆ ನಾನು ಯೂಟ್ಯೂಬ್ ಮೂಲಕವೇ ಈ ಹಂತಕ್ಕೆ ಬಂದಿದ್ದೇನೆ ಎಂಬ ಹೆಮ್ಮೆ ಇದೆ, ಅದನ್ನವರು ರಕ್ಷಿಸಿಕೊಂಡಿದ್ದಾರೆ. ಗಿಲ್ಲಿಗೆ ನಾನು ಮೂರು ಶೋ ವಿನ್ನರ್ ಎನ್ನುವ ಯೋಚನೆ ಸದಾ ತಲೆಯಲ್ಲಿ ಇರುತ್ತೆ. ನಟ ಧನುಷ್ಗೆ ನಾನು ಸೀರಿಯಲ್ ಸ್ಟಾರ್ ಎಂದಿದೆ. ರಘುಗೆ ತಾವು ಫಿಟ್ನೆಸ್ ಫೀಲ್ಡ್ನಲ್ಲಿ ರಾಜ್ಯ ಪ್ರಶಸ್ತಿ ಪಡೆದವನು ಎಂಬ ಭಾವನೆ ಇರುತ್ತೆ. ಎಲ್ಲರಿಗೂ ಅವರ ಅವರದ್ದೇ ಆದ ಘನತೆ-ಗೌರವ ಇದೆ. ಅವರವರ ಈ ಘನತೆಗೆ ಧಕ್ಕೆ ಆದಾಗ ಯಾರು ಸಹಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಇದೆಲ್ಲವೂ ಸಹಜ ಎಂದು ವಿಶ್ಲೇಷಿಸಿದ್ದಾರೆ ಕಿರಿಕ್ ಕೀರ್ತಿ. ಜೊತೆಗೆ, 'ಬಿಗ್ ಬಾಸ್ ನಡೆಯುವುದೇ ಈ ತರ' ಎಂದಿದ್ದಾರೆ ಕಿರಿಕ್ ಕೀರ್ತಿ.
ಸ್ಪಂದನಾ ಕಥೆ ಏನು?
"ಸ್ಪಂದನಾ ಬೇರೆಯವರ ಕಿರಿಕ್ ನಡುವೆ ಸಿಲುಕಿಕೊಂಡಿಲ್ಲ, ನಾಮಿನೇಷನ್ದಿಂದ ಅವರು ಹಲವು ಬಾರಿ ಬಚಾವ್ ಆಗಿದ್ದಾರೆ. ಆದರೆ ಇದೇ ಸಮಯದಲ್ಲಿ ಸ್ಪಂದನಾಗಿಂತ ಒಂದು ಹೆಜ್ಜೆ ಸ್ಪರ್ಧೆಯಲ್ಲಿ ಹಿಂದೆ ಇದ್ದವರು ಅಚ್ಚರಿ ಎಂಬಂತೆ ಸಿಕ್ಕಿಹಾಕಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗ್ಲಾಮರ್ ಅಂಶ ಕೂಡ ಮುಖ್ಯ. ರಂಪ-ರಾಮಾಯಣ ಮಾಡುವರ ನಡುವೆ ತನ್ನ ಪಾಡಿಗೆ ತಾನು ಇರುವ ವ್ಯಕ್ತಿ ಕೂಡ ಮುಖ್ಯ, ಅದು ಬೇಕು ಕೂಡ. ಇನ್ನು ಮನೆ ಮಗಳು, ಕಲರ್ಸ್ ಕನ್ನಡದ ನಟಿ ಎಂಬ ಕಾರಣಕ್ಕೆ ಸ್ಪಂದನಾ ಅವರನ್ನು ಉಳಿಸಿಕೊಂಡರು ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಹಾಗೆ ಹೇಳುವುದಾದರೆ ಕಲರ್ಸ್ ಕನ್ನಡದವರು ಜಾಹ್ನವಿ ಅವರನ್ನು ಕೂಡ ಉಳಿಸಿಕೊಳ್ಳಬೇಕಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಅಥವಾ ಬಿಗ್ ಬಾಸ್ ತಂಡಕ್ಕೆ ಒಳ್ಳೆಯ ಪರ್ಫಾಮರ್ಸ್ ಬೇಕಿರುತ್ತೆ ಅಷ್ಟೇ" ಎಂದಿದ್ದಾರೆ ಕಿರಿಕ್ ಕೀರ್ತಿ.
ಬಿಗ್ ಬಾಸ್ ಆಟ ಅಂದ್ರೇ ಇದು!
"ಕೊನೇ ಹಂತಕ್ಕೆ ಬಂದಾಗ ಬಿಗ್ ಬಾಸ್ ಮನೆಯಲ್ಲಿ ಗುಂಪಲ್ಲಿ ಆಡಲು ಸಾಧ್ಯವಾಗೋದಿಲ್ಲ. ಅಳಿವು-ಉಳಿವಿನ ಪ್ರಶ್ನೆಯ ಕಾರಣಕ್ಕೆ, ಅಲ್ಲಿ ಉಳಿಯಬೇಕು ಅಂದರೆ ಯಾರನ್ನಾದರೂ ಮುಗಿಸಲೇಬೇಕು. ಇದಕ್ಕೆ ಸ್ಪಷ್ಟ ಉದಾಹರಣೆ ಎನ್ನುವಂತೆ ರಘು ಅವರನ್ನೇ ಇತ್ತೀಚೆಗೆ ರಕ್ಷಿತಾ ನಾಮಿನೇಟ್ ಮಾಡಿದರು. ಬಿಗ್ ಬಾಸ್ ಅಂದ್ರೇನೇ ಹಾಗೇ. ಭಿನ್ನ-ವಿಭಿನ್ನ ವ್ಯಕ್ತಿಗಳು ಅಲ್ಲಿ ಇರಲೇಬೇಕು. ವಿನಯ್ ಇದ್ದಾರೆ ಅಂದ್ರೆ ಅಲ್ಲಿ ಸಂಗೀತಾ ಇರಬೇಕು, ಪ್ರಥಮ್ ಇದ್ದ ಮೇಲೆ ಅಲ್ಲಿ ಕೀರ್ತಿ ಬರಲೇಬೇಕು, ಹೀಗಿದ್ದಾಗಲೇ ಬಿಗ್ ಬಾಸ್ ಶೋದಲ್ಲಿ ಮಜಾ" ಎಂದಿದ್ದಾರೆ ಕಿರಿಕ್ ಕೀರ್ತಿ.
ಕಳೆದ ಹನ್ನೊಂದು ಸೀಸನ್ಗೂ ಈ ಸೀಸನ್ಗೂ ಹೋಲಿಕ ಮಾಡಿದ್ರೆ..?
ಈ ಬಗ್ಗೆ ಕಿರಿಕ್ ಕೀರ್ತಿ ಹೇಳಿದ್ದು ಹೀಗೆ: "ನನಗೆ ವೈಯಕ್ತಿಕವಾಗಿ ಈ ಬಾರಿಯ ಬಿಗ್ ಬಾಸ್ ತುಂಬಾ ಖುಷಿ ಕೊಟ್ಟಿದೆ. ಕಳೆದ 11 ಸೀಸನ್ಗೆ ಹೋಲಿಸಿದರೆ ಅತೀ ಹೆಚ್ಚು ಮನರಂಜನೆ ನೀಡಿದ ಸೀಸನ್ ಇದು. ಅದಕ್ಕೆ ಕಾರಣ, ಈ ಶೋದಲ್ಲಿ ಇರೋ ಸ್ಪರ್ಧಿಗಳ ಕ್ವಾಲಿಟಿ. ತುಂಬಾನೇ ಖಡಕ್ ಆದ ಮಹಿಳಾ ಸ್ಪರ್ಧಿಯಾಗಿ ಎಲ್ಲರಿಗೂ ಕಾಣಿಸಿದ್ದು ಅಶ್ವಿನಿ.. ಉಳಿದ ಸ್ಪರ್ಧಿಗಳಾದ ಗಿಲ್ಲಿ, ರಕ್ಷಿತಾ, ಕಾವ್ಯಾ, ರಘು, ಎಲ್ಲರೂ ಒಂದೊಂದು ರೀತಿಯಲ್ಲಿ ಪ್ರಬಲವಾಗಿ ಆಡಿದ್ದಾರೆ' ಎಂದಿದ್ದಾರೆ ಕಿರಿಕ್ ಕೀರ್ತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

