- Home
- Entertainment
- TV Talk
- ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ! ಹಾಸ್ಯನಟನ ನಿಜ ಜೀವನದಲ್ಲಿ ನಗುವೇ ಇರಲಿಲ್ಲ!
ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ! ಹಾಸ್ಯನಟನ ನಿಜ ಜೀವನದಲ್ಲಿ ನಗುವೇ ಇರಲಿಲ್ಲ!
ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಯಲ್ಲಾಪುರದ ಕಟ್ಟಿಗೆ ಗ್ರಾಮದ ಸಮೀಪದ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಕಾರವಾರ (ಆ.01): ಕನ್ನಡ ಕಿರುತೆರೆಯ ಮತ್ತೊಬ್ಬ ಕಲಾವಿದ ಇದೀಗ ಸಾವಿಗೆ ಶರಣಾಗಿದ್ದಾನೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಯನ್ನು ನಗಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಕಾಡಿನ ಹೈದ ಚಂದ್ರಶೇಖರ ಸಿದ್ಧಿ ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ನಿನ್ನೆ ಮಗನಿಗೆ ನಾನಿನ್ನು ಬರುವುದಿಲ್ಲ ಮಗನೇ ಎಂದು ಹೇಳಿದವನು ಕಾಡಿನಲ್ಲಿ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮ ಸಮೀಪದ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಮೃತ ಕಲಾವಿದ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮದ ಚಿಮನಳ್ಳಿ ನಿವಾಸಿ ಆಗಿದ್ದನು.
ಚಂದ್ರಶೇಖರ್ ಸಿದ್ಧಿ, ಒಬ್ಬ ಕಲಾ ಪ್ರತಿಭೆಯಾಗಿದ್ದು, ತನ್ನ ಅಭಿನಯದ ನಂತರ ಪುನಃ ಊರಿಗೆ ಹೋಗಿ ಜೀವನ ನಡೆಸುತ್ತಿದ್ದನು. ನಿನಾಸಂನಲ್ಲಿ ನಾಟಕ ತರಬೇತಿ ಪಡೆದಿದ್ದ ಅವರು ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಹಾಸ್ಯತ್ಮಕ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಜನಮನ ಗೆದ್ದರೂ, ಅವರು ಜೀವನದಲ್ಲಿ ಆರ್ಥಿಕವಾಗಿ ಸ್ಥಿರತೆ ಕಂಡಿರಲಿಲ್ಲ.
ಹಾಸ್ಯ ಕಲಾವಿದನ ಆಂತರಿಕ ನೋವು:
ಈ ವರ್ಷ ಜನವರಿಯಿಂದಲೇ ಚಂದ್ರಶೇಖರ್ ಮಾನಸಿಕವಾಗಿ ಜರ್ಜರಿತರಾಗಿದ್ದರು. ಕೆಲವು ಸಮಯದಿಂದ ಕೂಲಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು ಎನ್ನಲಾಗಿದೆ. ಪತ್ನಿಯ ಜತೆ ಗಲಾಟೆಗಳೂ ಆಗುತ್ತಿದ್ದು, ಅವರು ಒಂದು ಬಾರಿ ಮಾನಸಿಕ ಚಿಕಿತ್ಸೆಯನ್ನೂ ಪಡೆದಿದ್ದರು. ಕೆಲವು ತಿಂಗಳುಗಳು ಉತ್ತಮವಾಗಿದ್ದರೂ, ಮತ್ತೆ ಮಾನಸಿಕ ನೋವಿಗೆ ಒಳಗಿದ್ದರು ಎಂದು ಹೇಳಲಾಗುತ್ತಿದೆ.
ಮಗು ಜತೆ ವಿದಾಯದ ಮಾತು:
ಚಂದ್ರಶೇಖರ್ ಸಿದ್ಧಿ ತನ್ನ 3 ವರ್ಷದ ಮಗನಿಗೆ 'ನಾನು ಮತ್ತೆ ಬರುವುದಿಲ್ಲ' ಎಂದು ಹೇಳಿ, ಗಟ್ಟಿದ ಮನಸ್ಸಿನಿಂದ ಗುಡ್ಡದತ್ತ ಹೋಗಿದ್ದರು. ಇದಾದ ಬಳಿಕ ಗುಡ್ಡದ ಪ್ರದೇಶದಲ್ಲಿ ಸಾವಿಗೆ ಶರಣಾಗಿದ್ದಾನೆ. ಇಂದು ಅರಣ್ಯ ಪ್ರದೇಶದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಥಳೀಯ ಕಲಾವಿದರು, ನಾಟಕಕಾರರು ಮತ್ತು ಟಿವಿ ಪ್ರೇಕ್ಷಕರಿಗೆ ಈ ಸುದ್ದಿ ಭಾರಿ ಬರಸಿಡಿಲು ಬಡಿದಂತಾಗಿದೆ.