- Home
- Entertainment
- Sandalwood
- ಪರ ಭಾಷೆಗಳಲ್ಲಿ ಸಿನಿಮಾ ಆಗಿ ಬಾಕ್ಸ್ ಆಫೀಸ್ ಚಿಂದಿ ಮಾಡಿದ ಅಚ್ಚ ಕನ್ನಡದ, ಕನ್ನಡಿಗರ ಕಥೆಗಳು
ಪರ ಭಾಷೆಗಳಲ್ಲಿ ಸಿನಿಮಾ ಆಗಿ ಬಾಕ್ಸ್ ಆಫೀಸ್ ಚಿಂದಿ ಮಾಡಿದ ಅಚ್ಚ ಕನ್ನಡದ, ಕನ್ನಡಿಗರ ಕಥೆಗಳು
ಪರ ಭಾಷೆಯಲ್ಲಿ ಕನ್ನಡದ ಧೀಮಂತ ವ್ಯಕ್ತಿಗಳ, ನಾಯಕರ, ನಾಡಿನ ಕಥೆಗಳು ಸಿನಿಮಾವಾಗಿ ಮೂಡಿ ಬಂದು ಯಶಸ್ಸು ಕಾಣುತ್ತಿದೆ. ಆದರೆ ಕನ್ನಡದಲ್ಲಿ ಮಾತ್ರ ಕನ್ನಡದ ಕಥೆಗಳೇ ಬರ್ತಿಲ್ವಲ್ಲಾ ಯಾಕೆ?

ಕನ್ನಡ ಚಿತ್ರರಂಗದಲ್ಲಿ (Kannada film industry)ಸಿನಿಮಾಗಳು ಬರುತ್ತಿವೆ. ಆದ್ರೆ ಯಾರು ಕನ್ನಡ ಸಿನಿಮಾ ನೋಡ್ತಿಲ್ಲ ಅನ್ನೋ ಗೋಳು ಮಾತ್ರ ಜಾಸ್ತಿಯಾಗುತ್ತಿವೆ. ಇದಕ್ಕೆ ಕಾರಣ ಹಲವಾರು. ಒಂದು ಕಡೆ ಸ್ಟಾರ್ ನಟರುಗಳು ಎರಡೋ, ಮೂರು ವರ್ಷಗಳಿಗೊಮ್ಮೆ ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಜನ ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.
ನಮ್ಮ ಕರುನಾಡಿನಲ್ಲಿ ದೇಸಿ ಸೊಗಡಿನ ಹಲವು ಕಥೆಗಳಿವೆ. ಆದರೆ ನಮ್ಮ ನಿರ್ದೇಶಕರು, ನಿರ್ಮಾಪಕರು ಮಾತ್ರ ಮಣ್ಣಿನ ಕಥೆ ಬಿಟ್ಟು ರೌಡಿಸಂ, ಫೈಟು, ದರೋಡೆ ಎನ್ನುತ್ತಾ ಹೀರೋಯಿಸಂ ಬಿಂಬಿಸುವ ಕಥೆಗಳನ್ನೇ ಕೈಗೆತ್ತಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ದೇಸಿ ಕಥೆಗಳು ಮಾತ್ರ ಪರ ಭಾಷೆಯ ಪಾಲಾಗುತ್ತಿವೆ.
ಡಾ. ರಾಜಕುಮಾರ್ ಕಾಲದಲ್ಲಿ ಅದೆಷ್ಟೋ ಕನ್ನಡ ನಾಡಿನ ವೀರರ ಕಥೆಗಳು ತೆರೆ ಮೇಲೆ ಅಬ್ಬರಿಸಿದ್ದವು, ಯಶಸ್ಸು ಕೂಡ ಕಂಡಿತ್ತು. ಆದರೆ ಈಗ ನಮ್ಮ ವೀರರ ಎಷ್ಟು ಕಥೆಗಳು ಬಂದಿವೆ, ಬೆರಳೆಣಿಕೆಯಷ್ಟೇ ಇರಬಹುದು. ಆದರೆ ಪರ ಭಾಷೆಯಲ್ಲಿ ನಮ್ಮ ನಾಡಿನ ವೀರರ ಕಥೆಗಳು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದದ್ದಂತೂ ನಿಜಾ.
ಕ್ಯಾಪ್ಟನ್ ಗೋಪಿನಾಥ್ (Captain Gopinath) ಕರ್ನಾಟಕದವರೇ ಅಲ್ವಾ? ಎಂಥಾ ಪ್ರೇರಣೆ ನೀಡುವ ಕಥೆ ಅವರದ್ದು. ಆದರೆ ಕರ್ನಾಟಕದಲ್ಲಿ ಯಾರಾದ್ರೂ ಅವರ ಸಿನಿಮಾ ಮಾಡಿದ್ರಾ? ಇಲ್ಲ ತಮಿಳು ನಿರ್ದೇಶಕರು ಸೂರ್ಯ ಅವರನ್ನು ನಾಯಕನನ್ನಾಗಿ ಮಾಡಿ ಕ್ಯಾಪ್ಟನ್ ಗೋಪಿನಾಥ್ ಅವರ ಕಥೆಯನ್ನು ಸಿನಿಮಾ ಮಾಡಿದ್ರು, ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇನ್ನು ಮಾನವ ಕಂಪ್ಯೂಟರ್ ಎಂದು ಖ್ಯಾತಿ ಪಡೆದ ಶಕುಂತಲಾ ದೇವಿ (Human Computer Shakuntala Devi) ಅವರು ಕೂಡ ನಮ್ಮ ಕನ್ನಡದವರೇ. ಅವರ ಬಗ್ಗೆ ಕರ್ನಾಟಕದಿಂದ ಯಾವ ಸಿನಿಮಾ ಕೂಡ ಬಂದಿಲ್ಲ, ಆದರೆ ಬಾಲಿವುಡ್ ಶಾಕುಂತಲಾ ದೇವಿ ಸಿನಿಮಾ ಮಾಡಿ, ವಿದ್ಯಾ ಬಾಲನ್ ಶಾಕುಂತಲ ದೇವಿಯಾಗಿ ಅಭಿನಯಿಸಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿತ್ತು.
ನಾಳೆ ಬಾ ಕರ್ನಾಟಕದ ಒಂದು ಹಾರರ್ ಸ್ಟೋರಿ (Horror Story). ಇದನ್ನು ಬಾಲಿವುಡ್ ನವರು ಸ್ತ್ರೀ ಕಲ್ ಆನಾ ಎನ್ನುವ ಟೈಟಲ್ ಕೊಟ್ಟು ಸಿನಿಮಾ ಮಾಡಿದರು. ಶ್ರದ್ಧಾ ಕಪೂರ್ ಮತ್ತು ರಾಜಕುಮಾರ್ ರಾವ್ ನಟಿಸಿರುವ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ನಿಜಾ.
ಇದೀಗ ಶ್ರೀಕೃಷ್ಣಾದೇವರಾಯ (Shri KrishnaDevaraya)ಸಿನಿಮಾವನ್ನು ಅಶುತೋಷ್ ಗೋರಿಕರ್ ಅವರು ಬಾಲಿವುಡ್ ನಲ್ಲಿ ಮಾಡಲಿದ್ದಾರೆ. ಈ ಸಿನಿಮಾಕ್ಕೆ ರಿಷಭ್ ಶೆಟ್ಟಿಯವರನ್ನು ಆಯ್ಕೆ ಮಾಡಿಕೊಂಡಿರೋದೇನೋ ನಿಜಾ. ಆದರೆ ಅದು ಕನ್ನಡ ಸಿನಿಮಾ ಆಗಲ್ಲ ಅಲ್ವ? ಈ ಹಿಂದೆ ಡಾ. ರಾಜಕುಮಾರ್ ಈ ಸಿನಿಮಾ ಮಾಡಿ ಗೆದ್ದಿದ್ದರು. ಆದರೆ ಇನ್ನೊಂದು ಸಲ ಹೊಸದಾಗಿ ಈ ಸಿನಿಮಾವನ್ನು ಕನ್ನಡಿಗರೇ ಮಾಡಿದ್ರೆ ಚೆನ್ನಾಗಿರುತ್ತಿತ್ತು.