ಹೊಸಬ್ರಿಗೆ ರಾಯಲ್ ಸೆಲ್ಯೂಟ್ ಮಾಡಿದ್ರಷ್ಟೇ ಉಳಿಗಾಲ: ಯೋಗರಾಜ್ ಭಟ್
ಪೃಥ್ವಿ ಶಾಮನೂರು ಮತ್ತು ಯಶ ಶಿವಕುಮಾರ್ ಅಭಿನಯಿಸಿರುವ ಪದವಿ ಪೂರ್ವ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಯೋಗರಾಜ್ ಭಟ್ ಮತ್ತು ನಟ ಜಗ್ಗೇಶ್ ಭಾಗಿಯಾಗಿದ್ದರು:ಫೋಟೋಕೃಪೆ: ಮನು

‘ಪದವಿ ಪೂರ್ವ ಸಿನಿಮಾದಲ್ಲಿ 16 ರಿಂದ 18 ವರ್ಷದೊಳಗಿನ ಯುವ ಮನಸ್ಸುಗಳ ಕಥೆ ಇದೆ. ಎಲ್ಲ ಗೊತ್ತಿದೆ ಅಂದುಕೊಳ್ಳುವ, ಏನೂ ಮಾಡಲಾಗದ ವಯಸ್ಸದು. ಅಂಥವರ ಬಗ್ಗೆ ಸಿನಿಮಾ ಮಾಡಿದ್ದಾರೆ ಹೊಸ ನಿರ್ದೇಶಕ ಹರಿಪ್ರಸಾದ್. ಈತ ನ್ಯೂಯಾರ್ಕ್ ಫಿಲಂ ಅಕಾಡೆಮಿ ಪದವೀಧರ'
'ದೊಡ್ಡ ಹುದ್ದೆಯಲ್ಲಿದ್ದಾತ ನನ್ನ ಅಸಿಸ್ಟೆಂಟ್ ಆಗ್ತೀನಿ ಅಂತ ಬಂದಾಗ ಮುಚ್ಕೊಂಡು ಹೋಗ್ಬಿಡೋ ಅಂತ ಹೇಳಿದ್ದೆ. ಕ್ರಮೇಣ ಈತನ ಪ್ರತಿಭೆ ಕಂಡು ದಂಗಾಗಿದ್ದೆ. ಈಗ ನೋಡಿದರೆ ಈತ ಇಂಡಸ್ಟ್ರಿಗೆ ಕಾರ್ನರ್ ಸೈಟ್ ಆಗೋ ಭರವಸೆ ಕಾಣ್ತಿದೆ. ಹೊಸಬ್ರಿಗೆ ರಾಯಲ್ ಸೆಲ್ಯೂಟ್ ಮಾಡಿದ್ರಷ್ಟೇ ನಮಗೆ ಉಳಿಗಾಲ. ಇಲ್ಲಾಂದ್ರೆ ಯಾವುದೂ ಉದ್ಧಾರ ಆಗಲ್ಲ.’
ತಾನು ನಿರ್ಮಿಸುತ್ತಿರುವ ‘ಪದವಿಪೂರ್ವ’ ಸಿನಿಮಾದ ಟೀಸರ್ ಲಾಂಚ್ನಲ್ಲಿ ಯೋಗರಾಜ್ ಭಟ್ ಆಡಿರುವ ಮಾತುಗಳಿವು. ಈ ಸಿನಿಮಾದ ನಾಯಕಿ ಅಂಜಲಿ ಬಗೆಗೂ ಇಂಟರೆಸ್ಟಿಂಗ್ ವಿಚಾರವನ್ನು ಭಟ್ಟರು ಹೇಳಿದರು.
ಅಸಿಸ್ಟೆಂಟ್ ಡೈರೆಕ್ಟರ್ ಆಗ್ತೀನಿ ಅಂತ ಅಂಜಲಿ ನಮ್ಮ ಆಫೀಸಿಗೆ ಬಂದ ದಿನ ಅಸಿಸ್ಟೆಂಟ್ ಡೈರೆಕ್ಟರ್ಸ್ ಕಡಿಮೆ ಜನ ಇದ್ದರು. ಈಕೆ ಬರ್ತಾಳೆ ಅಂತ ಗೊತ್ತಾದದ್ದೇ ಮರುದಿನ ಹನ್ನೆರಡು ಜನ ಅಸಿಸ್ಟೆಂಟ್ ಡೈರೆಕ್ಟರ್ಸ್ ಹಾಜರ್. ಆಗಲೇ ಅಂದುಕೊಂಡೆ, ಈಕೆಯಲ್ಲೇನೋ ಅಟ್ರಾಕ್ಷನ್ ಇದೆ ಅಂತ. ಹೀಗಾಗಿ ನಟನೆಗೆ ಕರೆದೆ’ ಎಂದರು.
ಟೀಸರ್ ಲಾಂಚ್ ಮಾಡಿ ತಮ್ಮ ಎಂದಿನ ಹಾಸ್ಯದಲ್ಲಿ ಮಾತನಾಡಿದ ಜಗ್ಗೇಶ್, ‘ಇಬ್ಬರು ಮೂಗರು ಮದುವೆ ಆದರೆ ಲೈಫು ಸೂಪರ್. ಮಾತೇ ಮರೆತಂತೆ ಕೆಲಸ ಮಾಡುವ ನಿರ್ದೇಶಕ ಹರಿಪ್ರಸಾದ್ ಮತ್ತು ಸಿನಿಮಾಟೋಗ್ರಫರ್ ಸಂತೋಷ್ ರೈ ಪಾತಾಜೆ ನೋಡಿದ್ರೆ ಈ ಸಿನಿಮಾನೂ ಸೂಪರ್ ಅನಿಸುತ್ತಿದೆ.
ಹದಿಹರೆಯದ ವಯಸ್ಸೇ ಚಂದ. ಆ ವಯಸ್ಸಲ್ಲಿ ನಾನಿದ್ದಾಗ ನನ್ನ ತಂದೆಗೇನಾದ್ರೂ ಕೊಲೆ ಮಾಡುವ ಚಾನ್ಸ್ ಸಿಕ್ಕಿದ್ದಿದ್ರೆ ಸುಮಾರು 200 ಸಲ ಕೊಲೆಯಾಗ್ತಿದ್ದೆ. ಅಂಥಾ ಭಂಡನಾಗಿದ್ದೆ. ಯೋಗರಾಜ್ ಭಟ್ಟರಂಥಾ ಗುರುಗಳ ಮಾರ್ಗದರ್ಶನ ಸಿಕ್ಕ ಈ ಹೊಸ ತಂಡದವರು ಅದೃಷ್ಟವಂತರು’ ಅಂದರು.
ನಿರ್ದೇಶಕ ಹರಿಪ್ರಸಾದ್, ‘ಇದು 1996-97ರಲ್ಲಿ ನಡೆಯೋ ಕಥೆ. ಫ್ರೆಂಡ್ಶಿಪ್, ಲವ್ ಸ್ಟೋರಿ ಇದರಲ್ಲಿದೆ. ಇದನ್ನು ನೋಡುವ ಪ್ರೇಕ್ಷಕರು ತಮ್ಮ ಹದಿಹರೆಯದ ದಿನಗಳಿಗೆ ಹೋಗುವ ವಿಶ್ವಾಸವಿದೆ’ ಎಂದರು.
ನಿರ್ಮಾಪಕ ರವಿ ಶಾಮನೂರ್, ನಾಯಕ ಪೃಥ್ವಿ ಶಾಮನೂರು, ನಾಯಕಿಯರಾದ ಯಶ ಶಿವಕುಮಾರ್, ಅಂಜಲಿ, ಕಲಾವಿದ ನಟರಾಜ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮೊದಲಾದವರಿದ್ದರು.